ಹೊಸದಿಲ್ಲಿ: ಸೆಪ್ಟೆಂಬರ್ 14 ರಿಂದ ಆರಂಭವಾಗಲಿರುವ ಸಂಸತ್ನ ಮುಂಗಾರು ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಲು ತೀರ್ಮಾನವನ್ನು ಸರಕಾರ ತೆಗೆದುಕೊಂಡಿದ್ದು, ಇದರ ವಿರುದ್ಧ ವಿರೋಧ ಪಕ್ಷಗಳು ಹರಿಹಾಯ್ದಿವೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ಬೇರೆ ಬೇರೆ ಅವಧಿಯಲ್ಲಿ ನಡೆಯಲಿದ್ದು, ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಆಸನ ವ್ಯವಸ್ಥೆಯನ್ನು ಬದಲಿಸಲಾಗಿದೆ. ಮೊದಲ ದಿನ ಲೋಕಸಭೆ ಅಧಿವೇಶನ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಸೆಪ್ಟೆಂಬರ್ 15 ರಿಂದ ಅಕ್ಟೋಬರ್ 1ರ ವರೆಗೆ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ. ರಾಜ್ಯಸಭೆ ಅಧಿವೇಶನ ಮೊದಲ ದಿನ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ. ಸೆಪ್ಟೆಂಬರ್ 15 ರಿಂದ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಕಲಾಪ ನಡೆಯಲಿದೆ. ವಾರಾಂತ್ಯಗಳಲ್ಲಿ ಕೂಡ ಎರಡೂ ಮನೆಗಳ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಸಂಸತ್ ಸದಸ್ಯರಿಗೆ ಖಾಸಗಿ ಮಸೂದೆಗಳನ್ನು ಮಂಡಿಸಲು ಅವಕಾಶವಿಲ್ಲ. ಸಾರ್ವಜನಿಕರಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಸದಸ್ಯರಿಗೆ ಅವಕಾಶವಿರುವ ಶೂನ್ಯ ವೇಳೆಯನ್ನು ಅರ್ಧ ಗಂಟೆಗೆ ಮೊಟಕುಗೊಳಿಸಲಾಗಿದೆ. ಇನ್ನು ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಲಾಗಿದೆ. ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಕೊರೊನಾ ಸಾಂಕ್ರಾಮಿಕವನ್ನು ನೆಪವಾಗಿಟ್ಟುಕೊಂಡು ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಲಾಗುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಡೆರೆಕ್ ಓಬ್ರಿಯಾನ್ ಕಿಡಿಕಾರಿದ್ದಾರೆ. "ಸಂಸದರು ಪ್ರಶ್ನೆಗಳನ್ನು ಅಧಿವೇಶನಕ್ಕೂ 15 ದಿನ ಮೊದಲು ಸಲ್ಲಿಸಬೇಕು. ಅಧಿವೇಶನ ಸೆಪ್ಟೆಂಬರ್ 14 ರಂದು ಆರಂಭವಾಗಲಿದೆ. ಹಾಗಾಗಿ ಪ್ರಶ್ನೋತ್ತರ ವೇಳೆಯನ್ನು ರದ್ದುಗೊಳಿಸಲಾಗಿದೆಯೇ? ಪ್ರತಿಪಕ್ಷಗಳ ಸಂಸದರು ಸರಕಾರವನ್ನು ಪ್ರಶ್ನಿಸುವ ಹಕ್ಕನ್ನು ಕಳೆದುಕೊಳ್ಳಲಿದ್ದಾರೆ. 1950ರ ನಂತರ ಮೊದಲ ಬಾರಿಗೆ ಈ ರೀತಿ ನಡೆಯುತ್ತಿದೆ. ಒಟ್ಟಾರೆ ಸಂಸತ್ನ ಕಾರ್ಯಕಲಾಪಗಳು ಎಂದಿನಂತೆಯೇ ಇವೆ. ಹಾಗಿದ್ದರೆ ಪ್ರಶ್ನೋತ್ತರ ವೇಳೆಯನ್ನು ರದ್ದು ಮಾಡಿದ್ದೇಕೆ?" ಎಂದು ಅವರು ಪ್ರಶ್ನಿಸಿದ್ದಾರೆ. ಪ್ರಶ್ನೆ ಎತ್ತುವುದು ಪ್ರಜಾಪ್ರಭುತ್ವದಲ್ಲಿ ಆಮ್ಲಜನಕ ಇದ್ದ ಹಾಗೆ. “ಪ್ರಜಾಪ್ರಭುತ್ವ ಮತ್ತು ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಪ್ರಬಲ ನಾಯಕರು ಸಾಂಕ್ರಾಮಿಕದ ನೆಪವನ್ನು ಬಳಸುತ್ತಾರೆ ಎಂದು ನಾನು ನಾಲ್ಕು ತಿಂಗಳ ಹಿಂದೆಯೇ ಹೇಳಿದ್ದೆ," ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಹೇಳಿದ್ದಾರೆ. ಒಂದೊಮ್ಮೆ ಇಟ್ಟರೆ, ಸಚಿವರಿಗೆ ಮಾಹಿತಿ ನೀಡಲು ಅಧಿಕಾರಿಗಳು ಬರಬೇಕಾಗುತ್ತದೆ. ಇದರಿಂದ ಕಲಾಪಕ್ಕೆ ಬರುವವರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾಗಿ ವಿರೋಧ ಪಕ್ಷಗಳು ಹೇಳಿವೆ. ಈ ಸಂಬಂಧ ಕಾಂಗ್ರೆಸ್ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಶುಕ್ರವಾರವೇ ಪತ್ರ ಬರೆದು ತಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದಾರೆ.
from India & World News in Kannada | VK Polls https://ift.tt/3bgYrIn