ಭದ್ರಾದ್ರಿ ಕೊತ್ತಗುಡಂ (ತೆಲಂಗಾಣ): ದಕ್ಷಿಣ ಭಾರತದ ತೆಲಂಗಾಣ ರಾಜ್ಯವೆಲ್ಲಿ.. ಉತ್ತರ ಭಾರತದ ಪಂಜಾಬ್ ರಾಜ್ಯವೆಲ್ಲಿ..! ಮಾತು ಬಾರದ ಕಿವಿ ಕೇಳಿಸದ ವೃದ್ಧರೊಬ್ಬರು ರೈಲಿನಲ್ಲಿ ಸಾವಿರಾರು ಕಿಲೋ ಮೀಟರ್ ದೂರ ಕ್ರಮಿಸಿ ತೆಲಂಗಾಣದಿಂದ ಪಂಜಾಬ್ ಸೇರಿಬಿಟ್ಟಿದ್ದರು. ಅವರಿಗೆ ಕಿವಿ ಕೇಳಿಸದು, ಮಾತು ಬಾರದು.. ಆದ್ರೆ, ತಮ್ಮೂರು ಯಾವುದು ಎಂದು ಅವರ ಕಣ್ಣಿಗೆ ಗೊತ್ತಾಗೋದಿಲ್ವೇ..? ಬೇರೆ ಊರು ಸೇರಿದ್ದೇನೆ ಎಂದು ಆ ವೃದ್ಧರಿಗೆ ಗೊತ್ತಾಗಿತ್ತು.. ಆದರೆ, ದಿಕ್ಕೇ ತೋಚದಂತೆ ಪಂಜಾಬ್ನಲ್ಲೇ ಅಲೆದಾಡಿಕೊಂಡು, ಸಿಕ್ಕಿದ್ದನ್ನು ತಿಂದು ಕಾಲ ಕಳೆಯುತ್ತಿದ್ದರು. ಈ ವೇಳೆ, ಕೊರೊನಾ ವೈರಸ್ ಲಾಕ್ಡೌನ್ ಬಂತು. ಇಡೀ ದೇಶಕ್ಕೆ ಕೊರೊನಾ ವೈರಸ್ ಲಾಕ್ಡೌನ್ ಶಾಪವಾಗಿದ್ದರೆ, ಇವರಿಗೆ ಮಾತ್ರ ವರವಾಯ್ತು..! ಏಕೆಂದರೆ, ಲಾಕ್ಡೌನ್ ಸಮಯದಲ್ಲಿ ವೃದ್ಧರಿಗೆ ಊಟ, ತಿಂಡಿ ಕೊಡುವ ಸಲುವಾಗಿ ಪಂಜಾಬ್ನ ಕೆಲವು ಯುವಕರು ಮುಂದೆ ಬಂದಿದ್ದರು. ಆಹಾರ ವಿತರಣೆ ವೇಳೆ ಈ ವೃದ್ಧರಿಗೂ ಆಹಾರ ನೀಡಿ ಮಾಡಿದ್ದರು. ಟಿಕ್ಟಾಕ್ನಲ್ಲಿ ಹರಿದಾಡುತ್ತಿದ್ದ ಈ ವಿಡಿಯೋ, ವೃದ್ಧರ ಮಗ ನಾಗೇಂದ್ರನಿಗೂ ಸಿಕ್ಕಿತು. ತೆಲಂಗಾಣದ ಭದ್ರಾದ್ರಿ ಕೊತ್ತಗುಡಂ ಜಿಲ್ಲೆಯಲ್ಲಿ ಇರುವ ರೊದ್ದ ವೆಂಕಟೇಶ್ವರುಲು ಅವರ ಪುತ್ರ ನಾಗೇಂದ್ರ, ವಿಡಿಯೋದಲ್ಲಿ ಇರುವ ತಮ್ಮ ತಂದೆಯನ್ನು ನೋಡಿ ಸಂಭ್ರಮಿಸಿದರು. ಅದಾಗಲೇ ವೆಂಟೇಶ್ವರುಲು ಕಳೆದು ಹೋಗಿ 2 ವರ್ಷವಾಗಿತ್ತು. ತಮ್ಮ ತಂದೆಗಾಗಿ ಹುಡುಕಾಡಿ, ಪೊಲೀಸ್ ಠಾಣೆ ಮೆಟ್ಟಿಲೇರಿ ಸುಸ್ತಾಗಿದ್ದ ವೆಂಕಟೇಶ್ವರುಲು ಪುತ್ರ ನಾಗೇಂದ್ರ ಅವರಿಗೆ ವಿಡಿಯೋ ನೋಡಿ ಸಂಭ್ರಮ ಮೇರೆ ಮೀರಿತ್ತು. ಟಿಕ್ಟಾಕ್ನಲ್ಲಿರುವ ತಮ್ಮ ತಂದೆಯ ವಿಡಿಯೋ ನೋಡಿ ಕೂಡಲೇ ಪೊಲೀಸರ ನೆರವು ಕೋರಿದರು. ಕೂಡಲೇ ತೆಲಂಗಾಣ ಪೊಲೀಸರು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದರು. ಬಳಿಕ, ಈ ವಿಡಿಯೋ ಲೂಧಿಯಾನದಲ್ಲಿ ಸೆರೆಹಿಡಿಯಲಾಗಿದೆ ಅನ್ನೋದು ಅರಿವಿಗೆ ಬಂತು. ಇದೀಗ ವೃದ್ಧರನ್ನು ಪಂಜಾಬ್ನ ಲೂಧಿಯಾನದಲ್ಲಿ ಪತ್ತೆ ಹಚ್ಚಲಾಗಿದ್ದು, ಪೊಲೀಸರ ನೆರವಿನೊಂದಿಗೆ ಕುಟುಂಬದ ಪುನರ್ಮಿಲನವಾಗಿದೆ.
from India & World News in Kannada | VK Polls https://ift.tt/2Zv7b9I