ಬೆಂಗಳೂರು: ಕೋವಿಡ್-19 ಲಾಕ್ಡೌನ್ ಪರಿಣಾಮ ಶಾಲಾ -ಕಾಲೇಜುಗಳು ಸ್ಥಗಿತಗೊಂಡಿದ್ದು ವ್ಯವಸ್ಥೆಯ ಕುರಿತಾಗಿ ಚರ್ಚೆಗಳು ನಡೆಯುತ್ತಿವೆ. ಸರ್ಕಾರದ ಮಟ್ಟದಲ್ಲೂ ಆನ್ಲೈನ್ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದ್ದು, ಪದವಿ ಪೂರ್ವ ಹಂತದಿಂದಲೇ ಜಾರಿಗೊಳಿಸುವ ಕುರಿತಾಗಿ ಪರಿಶೀಲನೆ ನಡೆಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ. ಕಡಿಮೆ ವೆಚ್ಚದ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ಬಳಕೆ ಮಾಡುವ ಕುರಿತಾಗಿಯೂ ಮಂಗಳವಾರ ನಡೆದ ಉನ್ನತ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಚರ್ಚೆಗಳು ನಡೆದಿವೆ. ಆದರೆ ಆನ್ಲೈನ್ ಶಿಕ್ಷಣ ವ್ಯವಸ್ಥೆಯ ಕುರಿತಾಗಿ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಈಗಾಗಲೇ ರಾಜ್ಯದ ವಿಶ್ವವಿದ್ಯಾನಿಲಯಗಳಲ್ಲಿ ಆನ್ಲೈನ್ ತರಗತಿಗಳು ಆರಂಭಗೊಂಡಿವೆ. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಆನ್ಲೈನ್ನಲ್ಲಿ ತರಗತಿಗಳು ನಡೆಯುತ್ತಿವೆ. ವಿದ್ಯಾರ್ಥಿಗಳು ಕೂಡಾ ಉತ್ಸಾಹದಿಂದಲೇ ಆನ್ಲೈನ್ ತರಗತಿಗಳಲ್ಲಿ ಭಾಗಿಯಾಗುತ್ತಿದ್ದಾರೆ. ಥಿಯರಿ ತರಗತಿಗಳು ಬಹುತೇಕ ಯಶಸ್ವಿಯಾಗಿ ನಡೆಯುತ್ತಿದ್ದರೂ ಪ್ರಾಕ್ಟಿಕಲ್ ತರಗತಿಗಳು ಆನ್ಲೈನ್ ಮೂಲಕ ತುಸು ಕಷ್ಟ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೋವಿಡ್-19 ಕಾರಣದಿಂದಾಗಿ ಆನ್ಲೈನ್ ಶಿಕ್ಷಣ ವ್ಯವಸ್ಥೆ ಸದ್ಯಕ್ಕೆ ಅನಿವಾರ್ಯ ಆದರೂ ಭವಿಷ್ಯದಲ್ಲಿ ಇದು ಸೃಷ್ಟಿ ಮಾಡಲಿರುವ ಸಮಸ್ಯೆಗಳ ಕುರಿತಾಗಿಯೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆನ್ಲೈನ್ ಶಿಕ್ಷಣಕ್ಕೆ ಉತ್ತೇಜನ ನೀಡುವ ರಾಜ್ಯ ಸರ್ಕಾರದ ನಡೆಯನ್ನು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಬೆಂಬಲಿಸಿದೆ. “ಗ್ರಾಮೀಣ ಭಾಗದಲ್ಲೂ ಹೆಚ್ಚಿನ ವಿದ್ಯಾರ್ಥಿಗಳು ಸ್ಮಾರ್ಟ್ ಫೋನ್ಗಳನ್ನು ಬಳಕೆ ಮಾಡುತ್ತಿದ್ದು ಆಧುನಿಕ ತಂತ್ರಜ್ಞಾನದಲ್ಲೂ ಮುಂದುವರಿದಿದ್ದಾರೆ. ಕೆಲವು ಕಡೆಗಳಲ್ಲಿ ನೆಟ್ವರ್ಕ್ ಸಮಸ್ಯೆಗಳು ಇವೆ. ಅದೇನೇ ಇದ್ದರೂ ಆನ್ಲೈನ್ ತರಗತಿಗಳಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ಉತ್ತೇಜನ ನೀಡುವಾಗ ಆನ್ಲೈನ್ ತರಗತಿಗಳು ಏಕೆ ನಡೆಯಬಾರದು ಎನ್ನುತ್ತಾರೆ” ಎಬಿವಿಪಿ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಹ ಸಂಚಾಲಕ ಸುನಿಲ್ ಭಟ್. ಆದರೆ ಆನ್ಲೈನ್ ಶಿಕ್ಷಣ ವ್ಯವಸ್ಥೆ ಮೇಲ್ನೋಟಕ್ಕೆ ಉತ್ತಮವಾಗಿ ಕಂಡರೂ ವಾಸ್ತವದಲ್ಲಿ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ ಎಂಬ ವಾದವನ್ನು ಎಡಪಂಥೀಯ ವಿದ್ಯಾರ್ಥಿ ಸಂಘಟನೆ ಎಸ್ಎಫ್ಐ ಮುಂದಿಡುತ್ತಿದೆ. ನಗರ ಪ್ರದೇಶಗಳಲ್ಲಿ ಉತ್ತಮ ನೆಟ್ವರ್ಕ್ ಸಂಪರ್ಕ ಇರುವುದರಿಂದ ಆನ್ಲೈನ್ನಲ್ಲಿ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಅನುಕೂಲವಾಗಬಹುದು. ಆದರೆ ಗ್ರಾಮೀಣ ಭಾಗಗಳಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಗುಲ್ಬರ್ಗ, ಬಳ್ಳಾರಿ, ಧಾರವಾಡ ಹಾಗೂ ದಾವಣಗೆರೆ ಸೇರಿದಂತೆ ಬಹುತೇಕ ವಿಶ್ವ ವಿದ್ಯಾನಿಲಯಗಳಲ್ಲಿ ಆನ್ಲೈನ್ ಮೂಲಕ ಪಾಠ ಆರಂಭಗೊಂಡಿದೆ. ಆದರೆ ನೆಟ್ವರ್ಕ್ ಸಮಸ್ಯೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ. ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲ. ಅಷ್ಟೇ ಅಲ್ಲದೆ ಲ್ಯಾಪ್ಟಾಪ್ಗಳು ಇಲ್ಲ. ಝೂಮ್ ಆಪ್ ಮೂಲಕ ತರಗತಿಗಳು ನಡೆಯುತ್ತಿದ್ದು ಕನಿಷ್ಠ 2 ರಿಂದ 3 ಜಿಬಿಯಷ್ಟು ಡೇಟಾದ ಅವಷ್ಯಕತೆ ಇರುತ್ತದೆ. ಇದನ್ನು ಭರಿಸುವುದು ವಿದ್ಯಾರ್ಥಿಗಳಿಗೆ ಕಷ್ಟವಾಗುತ್ತಿದೆ ಎನ್ನುತ್ತಾರೆ ಎಸ್ಎಫ್ಐ ರಾಜ್ಯಾಧ್ಯಕ್ಷ ಅಮರೇಶ್. ಆನ್ಲೈನ್ ಪಾಠ ಏಕಮುಖವಾಗಿದ್ದು ಪ್ರಶ್ನೆಗಳನ್ನು ಕೇಳಿ ತಕ್ಷಣ ಉತ್ತರ ಪಡೆಯಲು ಸಾಧ್ಯವಿಲ್ಲ. ಸರ್ಕಾರ ಆನ್ಲೈನ್ ತರಗತಿಗಳಿಗೆ ಒತ್ತು ನೀಡಿದರೆ ತಂತ್ರಜ್ಞಾನ ಬಳಕೆಯಲ್ಲಿ ಹಿಂದುಳಿದಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕವನ್ನು ಅವರು ವ್ಯಕ್ತಪಡಿಸುತ್ತಾರೆ. "ಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳು ಆರಂಭಗೊಂಡಿದ್ದು ಅದರಿಂದ ಯಾವುದೇ ಪ್ರಯೋಜನ ಆಗುತ್ತಿಲ್ಲ. ಗ್ರಾಮೀಣ ಪ್ರದೇಶದಲ್ಲಿ ನಮ್ಮ ಮನೆ ಇರುವುದರಿಂದ ನೆಟ್ವರ್ಕ್ ಸಂಪರ್ಕದ ಸಮಸ್ಯೆ ಇದೆ. ಇದರಿಂದ ಆನ್ಲೈನ್ನಲ್ಲಿ ಲಾಗ್ ಇನ್ ಆಗಲು ಸಾಧ್ಯವಾಗುತ್ತಿಲ್ಲ.ಪದೇ ಪದೇ ನೆಟ್ವರ್ಕ್ ಸಮಸ್ಯೆ ಆಗುತ್ತಿರುವುದರಿಂದ ಪಾಠ ಕೇಳಲು ಸಾಧ್ಯವಾಗುವುದಿಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಆನ್ಲೈನ್ ಆಪ್ಗಳ ಬಗ್ಗೆಯೂ ಮಾಹಿತಿ ಇಲ್ಲ. ಕೊಠಡಿಯಲ್ಲಿ ನಡೆಯುವ ತರಗತಿಗೂ ಇದಕ್ಕೂ ಸಾಕಷ್ಟು ವೆತ್ಯಾಸವಿದೆ" ಎನ್ನುತ್ತಾರೆ ಕೊಪ್ಪಳ ಜಿಲ್ಲೆಯ ಗಂಗಾವತಿಯ ಸರ್ಕಾರಿ ಕಾಲೇಜಿನಲ್ಲಿ ಬಿ.ಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಹನುಮೇಶ. “ಸರ್ಕಾರ ಆನ್ಲೈನ್ ತರಗತಿಗೆ ಉತ್ತೇಜನ ನೀಡಬೇಕು ಎಂದು ಹೇಳುತ್ತಿದ್ದರೂ ವಾಸ್ತವದಲ್ಲಿ ಪರಿಸ್ಥಿತಿ ಬೇರೆ ಇದೆ. ಸರ್ಕಾರ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯದ ಕುರಿತಾಗಿಯೂ ಚಿಂತಿಸಬೇಕಾಗಿದೆ. ಆನ್ಲೈನ್ ತರಗತಿಗಳು ತಮ್ಮ ಶೈಕ್ಷಣಿಕ ಭವಿಷ್ಯದ ಮೇಲೆ ಪರಿಣಾಮ ಬೀರಬಹುದೇ ಎಂಬ ಆತಂಕ ಕಾಡುತ್ತಿದೆ” ಎನ್ನುತ್ತಾರೆ ಕೊಪ್ಪಳದ ಎಫ್ಕೆಎಂಜಿ ಕಾಲೇಜಿನಲ್ಲಿ ಎಂಎ ವ್ಯಾಸಂಗ ಮಾಡುತ್ತಿರುವ ಮತ್ತೋರ್ವ ವಿದ್ಯಾರ್ಥಿ ಹನುಮಂತಪ್ಪ ಆನ್ಲೈನ್ ಶಿಕ್ಷಣ ಕುರಿತಾಗಿ ತಜ್ಞರು ಏನು ಹೇಳುತ್ತಾರೆ? ಆನ್ಲೈನ್ ಶಿಕ್ಷಣ ವ್ಯವಸ್ಥೆ ಸಾಕಷ್ಟು ಸಮಸ್ಯೆಗಳಿಂದ ಕೂಡಿದೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸುತ್ತಾರೆ. ಈ ಕುರಿತಾಗಿ ವಿಜಯ ಕರ್ನಾಟಕ ಜೊತೆಗೆ ಮಾತನಾಡಿದ ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಆನ್ಲೈನ್ ಶಿಕ್ಷಣದ ಅಪಾಯಗಳ ಕುರಿತಾಗಿ ವಿವರವಾಗಿ ತಿಳಿಸಿದ್ದಾರೆ."ಪ್ರಮುಖವಾಗಿ ಆನ್ಲೈನ್ ಶಿಕ್ಷಣಕ್ಕೆ ಮೂಲಭೂತ ಸೌಕರ್ಯಗಳ ಕೊರೆತೆ ಇದೆ. ಶೇ. 66 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ವಾಸವಾಗಿದ್ದಾರೆ. ಈ ಪೈಕಿ ಶೇ. 47 ಪ್ರಮಾಣದ ಕುಟುಂಬಗಳಿಗೆ 8 ರಿಂದ 12 ಗಂಟೆ ಅವಧಿಗಳ ಕಾಲ ವಿದ್ಯುತ್ ಸಮಸ್ಯೆ ಇದೆ. ಶೇ. 33 ರಷ್ಟು ಕುಟುಂಬಗಳಿಗೆ 4 ರಿಂದ 8 ವಿದ್ಯುತ್ ವ್ಯವಸ್ಥೆ ಇರುವುದಿಲ್ಲ. ಪರಿಣಾಮ ಮೊಬೈಲ್ ಚಾರ್ಜ್, ಲ್ಯಾಪ್ಟಾಪ್ ಚಾರ್ಜ್ಗಳನ್ನು ಮಾಡಲಾಗದೆ ಆನ್ಲೈನ್ ತರಗತಿ ನಡೆಸಲು ಕಷ್ಟವಾಗಲಿದೆ" ಎನ್ನುತ್ತಾರೆ ಅವರು. ಇಷ್ಟೇ ಅಲ್ಲದೆ ಇಂಟರ್ನೆಟ್ ಸಮಸ್ಯೆಗಳೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ಇಂಟರ್ನೆಟ್ ಸೌಲಭ್ಯ ಶೇ. 12 ರಿಂದ 15 ಪ್ರಮಾಣದಲ್ಲಿದೆ. ಶೇ 8 ರಿಂದ 10 ಪ್ರಮಾಣದ ಜನರಲ್ಲಿ ಮಾತ್ರ ಲ್ಯಾಪ್ಪಾಟ್, ಕಂಪ್ಯೂಟರ್ ವ್ಯವಸ್ಥೆ ಇದೆ. ಜೊತೆಗೆ ನೆಟ್ವರ್ಕ್ ಸಂಪರ್ಕದ ಸಮಸ್ಯೆಯನ್ನು ಪರಿಗಣಿಸಬೇಕಿದೆ. ಆನ್ಲೈನ್ ತರಗತಿಗಳಿಗೆ 4 ಜಿ ನೆಟ್ವರ್ಕ್ ಸಂಪರ್ಕದ ಅಗತ್ಯವಿದೆ. ವಿಪರ್ಯಾಸ ಎಂದರೆ ಬಹುಪಾಲು ಹಳ್ಳಿಗಳಲ್ಲಿ 2 ಜಿ ಹಾಗೂ 3 ಜಿ ಸಂಪರ್ಕವೇ ಸಿಗುವುದಿಲ್ಲ. ಈ ರೀತಿಯ ಮೂಲಭೂತ ಸೌಕರ್ಯಗಳ ಅಲಭ್ಯತೆಯಲ್ಲಿ ಆನ್ಲೈನ್ ತರಗತಿಗಳನ್ನು ಹೇಗೆ ನಡೆಸಲು ಸಾಧ್ಯ ಎಂಬ ಪ್ರಶ್ನೆ ಸಹಜವಾಗಿ ಉದ್ಘವವಾಗುತ್ತದೆ. ಆನ್ಲೈನ್ ತರಗತಿಗಳು ಉಂಟು ಮಾಡುವ ಸಾಮಾಜಿಕ ಅಪಾಯಗಳನ್ನು ಗಮನ ಹರಿಸಬೇಕಿದೆ. ಗ್ರಾಮೀಣ ಭಾಗದ ಮಹಿಳೆಯರ ಪೈಕಿ ಶೇ. 28 ರಷ್ಟು ಮಹಿಳೆಯರು ಹಾಗೂ ನಗರ ಭಾಗದ ಶೇ. 33 ಮಹಿಳೆಯರಿಗೆ ಇಂಟರ್ನೆಟ್ ಸೌಲಭ್ಯವಿದೆ. ಇದನ್ನು ಗಮನಿಸಿದರೆ ಬಹುಪಾಲು ಮಹಿಳೆಯರು ಶಿಕ್ಷಣದಿಂದ ವಂಚಿತರಾಗುವ ಅಪಾಯವಿದೆ. ಅಷ್ಟೇ ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಹೆಣ್ಮಕ್ಕಳು ಮನೆಯಲ್ಲಿದ್ದರೆ ಅವರಿಗೆ ಶಿಕ್ಷಣ ಪಡೆಯಲು ಅವಕಾಶ ನೀಡುವ ಬದಲಾಗಿ ಮನೆಯ ಕೆಲಸ ಕಾರ್ಯಗಳನ್ನು ಮಾಡುವಂತೆ ಒತ್ತಡ ಹೇರುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಆನ್ಲೈನ್ ಶಿಕ್ಷಣ ವ್ಯವಸ್ಥೆ ಸಾಮಾಜಿಕತೆಯನ್ನು ಹದಗೆಡಿಸುತ್ತದೆ. ತರಗತಿಯಲ್ಲಿ ನಡೆಯುವ ಪಾಠಕ್ಕೆ ಅದರದ್ದೇ ಆದ ಆಯಾಮ ಇದೆ. ವಿದ್ಯಾರ್ಥಿಗಳು ಚರ್ಚೆ, ಪ್ರಶ್ನೆ, ಜಗಳಕ್ಕೆ, ವಾದಗಳ ಮೂಲಕ ಕಲಿಯುತ್ತಾರೆ. ತರಗತಿ ಶಿಕ್ಷಣಕ್ಕೆ ಇಂತಹ ವೈವಿದ್ಯತೆಗಳು ಇವೆ. ಆದರೆ ಆನ್ಲೈನ್ನಲ್ಲಿ ಇಂತಹ ಅವಕಾಶವಾಗಲಿ ಹಾಗೂ ವೈವಿದ್ಯತೆಯಾಗಲಿ ಇಲ್ಲ. ಎಲ್ಲಾ ಜಾತಿಯ ಎಲ್ಲಾ ವರ್ಗದ ವಿದ್ಯಾರ್ಥಿಗಳು ಒಂದು ಕಡೆ ಸೇರಿವುದುರಿಂದ ಸಮಾಜ ಪರಿಸರದ ಬಗ್ಗೆ ವಿದ್ಯಾರ್ಥಿಗಳಿಗೆ ಅನುಭವ ಸಿಗುತ್ತದೆ. ಆದರೆ ಆನ್ಶಲೈನ್ನಿಂದ ಇದನ್ನು ಕಳೆದುಕೊಳ್ಳುವ ಅಪಾಯವಿದೆ. ಪರಿಣಾಮ ವಿದ್ಯಾರ್ಥಿಗಳು ದ್ವೀಪವಾಗುವ ಅಪಾಯವಿದೆ ಎಂದು ಎಚ್ಚರಿಸುತ್ತಾರೆ ಶಿಕ್ಷಣ ತಜ್ಞ ಶ್ರೀಪಾದ್ ಭಟ್. ಸರ್ಕಾರದ ಮುಂದಿನ ನಡೆ ಏನಿರಬೇಕು? ಕೋವಿಡ್-19 ಕಾರಣದಿಂದಾಗಿ ಶಿಕ್ಷಣ ಸ್ಥಗಿತಗೊಂಡಿದ್ದು ಇದನ್ನು ಮತ್ತೆ ಆರಂಭಿಸಬೇಕಿದೆ. ಆದರೆ ಇಂತಹ ಸಂದರ್ಭದಲ್ಲಿ ತುರ್ತು ನಿರ್ಧಾರಗಳನ್ನು ಸರ್ಕಾರ ಕೈಗೊಳ್ಳಬಾರದು. ಸರ್ಕಾರದ ತುರ್ತು ನಿರ್ಧಾರಗಳು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ಒಂದಿಷ್ಟು ಸಮಯದ ಕಾಲ ಕಾಯಬೇಕಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಪರಿಸ್ಥಿತಿಯನ್ನು ನೋಡಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಆಗಸ್ಟ್ ಅಥವಾ ಸೆಪ್ಟಂಬರ್ ತಿಂಗಳಲ್ಲಿ ಶಾಲಾ- ಕಾಲೇಜುಗಳನ್ನು ಆರಂಭಿಸಲು ಸರ್ಕಾರ ಮುಂದಾಗಬೇಕಾಗಿದೆ. ಈ ಸಂದರ್ಭದಲ್ಲಿ ಸೂಕ್ತ ವ್ಯವಸ್ಥೆಯನ್ನು ಹಾಗೂ ತರಗತಿ ವಿನ್ಯಾಸವನ್ನು ಬದಲಾಯಿಸುವ ನಿಟ್ಟಿನಲ್ಲಿ ಯೋಚಿಸಬೇಕಾಗಿದೆ. ಈಗಾಗಲೇ ಬೆಂಗಳೂರಿನ ಕೆಲವೊಂದು ಖಾಸಗಿ ಶಾಲೆಗಳಲ್ಲೂ ಆನ್ಲೈನ್ ತರಗತಿಗಳು ಆರಂಭಗೊಂಡಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಓದುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಇದು ಪರಿಣಾಮ ಬೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಾಸ್ತವ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಸರ್ಕಾರ ಮುಂದಿನ ಹೆಜ್ಜೆಯನ್ನು ಇಡಬೇಕಾಗಿದೆ. ಶಿಕ್ಷಣ ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ನಿರ್ಧಾರಕ್ಕೆ ಬರಬೇಕಾಗಿದೆ.
from India & World News in Kannada | VK Polls https://ift.tt/3gtJ5lK