ಲಡಾಖ್ ಗಡಿಯಲ್ಲಿ ನಿಂತಿರುವ ವೀರ ಸೈನಿಕರು: ನಡೆಯದಿನ್ನು ಚೀನಿ ಕುತಂತ್ರಗಳು!

ಗಡಿಯಲ್ಲಿ ವಿನಾಕಾರಣ ಸಮಸ್ಯೆ ಸೃಷ್ಟಿಸುವ ತನ್ನ ಚಾಳಿಯನ್ನು ಮುಂದುವರೆಸಿರುವ ಚೀನಾ, ಇದೀಗ ಲಡಾಖ್ ಗಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇನೆಯನ್ನು ಜಮಾವಣೆಗೊಳಿಸಿದೆ. ಆದರೆ ಇದಕ್ಕೆ ಸೂಕ್ತ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆ ಕೂಡ ಗಡಿಯಲ್ಲಿ ಸೈನ್ಯವನ್ನು ಬಲವರ್ಧನೆಗೊಳಿಸಿದ್ದು, ಚೀನಾದ ಕುತಂತ್ರಗಳಿಗೆ ಬ್ರೇಕ್ ಹಾಕಿದೆ. ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ಕೈ ಕೈ ಮಿಲಾಯಿಸಿದ್ದ ಚೀನಿ ಸೈನಿಕರು, ಇದೀಗ ಲಡಾಖ್‌ನ ಗಲ್ವಾನ್ ನದಿಪಾತ್ರದಲ್ಲಿ ಸಮಸ್ಯೆ ಸೃಷ್ಟಿಸಿದ್ದಾರೆ. ಭಾರತೀಯ ಸೈನಿಕರ ಸಾಮಾನ್ಯ ಗಸ್ತಿನ ಮೇಲೂ ಕ್ಯಾತೆ ತೆಗೆಯುತ್ತಿರುವ ಚೀನಿ ಸೈನಿಕರು, ವಿನಾಕಾರಣ ಉಪಟಳ ನೀಡುತ್ತಿದ್ದಾರೆ. ಆದರೆ ಇದುವರೆಗೂ ಸಂಯಮದಿಂದಲೇ ವ್ಯವಹರಿಸುತ್ತಿರುವ ಭಾರತೀಯ ಸೈನಿಕರು, ಗಡಿಯಲ್ಲಿ ಚೀನಾದ ಆಟ ನಡೆಯದಂತೆ ಎಚ್ಚರವಹಿಸಿದ್ದಾರೆ. ಈ ಮಧ್ಯೆ ಕಳೆದ ವಾರ ಚೀನಾ ಪಡೆಗಳು ಗಡಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದವು ಎಂಬ ವದಂತಿಯೂ ಹಬ್ಬಿದ್ದು, ಇದನ್ನು ಭಾರತೀಯ ಸೇನೆ ಸ್ಪಷ್ಟವಾಗಿ ನಿರಾಕರಿಸಿದೆ. ಹಾಗಾದರೆ ಲಡಾಖ್ ಗಡಿಯಲ್ಲಿ ಇದುವರೆಗೂ ನಡೆದಿರುವ ಬೆಳವಣಿಗೆಗಳತ್ತ ಗಮನ ಹರಿಸಿದರೆ...

ಇತ್ತೀಚಿಗೆ ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ನೇರ ಸಂಘರ್ಷಕ್ಕೆ ಇಳಿದಿದ್ದ ಚೀನಿ ಸೈನಿಕರು, ಕೈ ಕೈ ಮಿಲಾಯಿಸಿ ಉದ್ಧಟತನ ಮೆರೆದಿದ್ದರು. ಗಡಿಯಲ್ಲಿ ನೇರ ಸಂಘರ್ಷಕ್ಕಿಳಿದ ಚೀನಾ ಸೈನಿಕರಿಗೆ ಭಾರತೀಯ ಸೈನಿಕರು ತಕ್ಕ ಪ್ರತ್ಯುತ್ತರವನ್ನೇ ನೀಡಿದ್ದರು.

ಇದಾದ ಬಳಿಕ ಲಡಾಖ್ ಗಡಿಯಲ್ಲಿ ಭಾರೀ ಸಂಖ್ಯೆಯಲ್ಲಿ ಸೈನ್ಯ ಜಮಾವಣೆ ಮಾಡಲು ಆರಂಭಿಸಿದ ಚೀನಾ, ಗಲ್ವಾನ್ ನದಿಪಾತ್ರದಲ್ಲಿ ಉದ್ರೇಕಕಾರಿ ಬೆಳವಣಿಗೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಚೀನಾದ ಈ ನಡೆಯಿಂದಾಗಿ ಭಾರತವೂ ಗಲ್ವಾನ್ ನದಿಪಾತ್ರದಲ್ಲಿ ಹೆಚ್ಚುವರಿ ಸೇನೆಯನ್ನು ಜಮಾವಣೆಗೊಳಿಸಿದೆ.

ಲಡಾಖ್‌ ಗಡಿಯಲ್ಲಿ ಸೈನ್ಯ ಬಲವರ್ಧನೆ: ಏನಿದು ಸೇನೆಯ ಹೊಸ ಯೋಜನೆ?

ಹೀಗೆ ಲಡಾಖ್ ಗಡಿಯಲ್ಲಿ ಎರಡೂ ಸೇನೆ ಮುಖಾಮುಖಿಯಾಗಿದ್ದು, ಪರಸ್ಪರರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ಇರಿಸಿವೆ.

ಈ ಮೊದಲೇ ಹೇಳಿದಂತೆ ಲಡಾಖ್‌ನ ಗಲ್ವಾನ್ ನದಿಪಾತ್ರದಲ್ಲಿ ಹೆಚ್ಚುವರಿ ಸೇನೆಯನ್ನು ಜಮಾವಣೆಗೊಳಿಸಿರುವ ಚೀನಾ, ಪ್ಯಾಂಗಾಂಗ್ ಲೇಕ್‌ನಲ್ಲಿ ಚಟುವಟಿಕೆಗಳನ್ನು ತೀವ್ರಗೊಳಿಸಿದೆ. ಪ್ಯಾಂಗಾಂಗ್ ಲೇಕ್‌ನಲ್ಲಿ ಮೋಟಾರು ಗಸ್ತನ್ನು ಹೆಚ್ಚಿಸಿರುವ ಚೀನಿ ಸೈನಿಕರು ಉದ್ದೇಶಪೂರ್ವಕವಾಗಿಯೇ ಭಾರತದ ಗಡಿಯೊಳಗೆ ಕಾಲಿಡುತ್ತಿದ್ದಾರೆ.

ಇದೆಂತಾ ಕರ್ಮ?: ಭಾರತದ ಮೇಲೆ ಗಡಿ ಅತಿಕ್ರಮಣದ ಆರೋಪ ಹೊರಿಸಿದ ಚೀನಾ!

ಆದರೆ ಇದಕ್ಕೆ ವ್ಯತಿರಿಕ್ತವಾಗಿ ಲಡಾಖ್ ಗಡಿಯಲ್ಲಿ ಭಾರತವೇ ಹೆಚ್ಚುವರಿ ಸೈನ್ಯವನ್ನು ಜಮಾವಣೆಗೊಳಿಸಿ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ಚೀನಾ ಸುಳ್ಳು ಆರೋಪ ಮಾಡಿದೆ. ಭಾರತೀಯ ಸೇನೆಯ ಬದ್ಧತೆಯ ಅರವಿರುವ ವಿಶ್ವ ಚೀನಾದ ಈ ಆರೋಪದ ಕಡೆ ಗಮನ ಕೊಡಲೇ ಇಲ್ಲ ಎಂಬುದೂ ಸತ್ಯ.

ಅದರಂತೆ ಗಲ್ವಾನ್ ಗಡಿಗುಂಟ ಸಾಮಾನ್ಯ ಗಸ್ತು ತಿರುಗುತ್ತಿದ್ದ ಭಾರತೀಯ ಸೈನಿಕರನ್ನು ಚೀನಾ ಸೈನಿಕರು ವಶಕ್ಕೆ ಪಡೆದಿದ್ದಾರೆ ಎಂಬ ವದಂತಿ ಹಬ್ಬಿದ್ದು, ಇದನ್ನು ಭಾರತೀಯ ಸೇನೆ ಸ್ಪಷ್ಟವಾಗಿ ನಿರಾಕರಿಸಿದೆ. ಯವುದೇ ಭಾರತೀಯ ಸೈನಿಕರನ್ನು ಚೀನಿ ಸೈನಿಕರು ವಶಕ್ಕೆ ಪಡೆದಿಲ್ಲ ಎಂದು ಸೇನೆ ಖಚಿತಪಡಿಸಿದೆ.

ಚೀನಾ ನಮ್ಮ ಸೈನಿಕರನ್ನು ವಶಕ್ಕೆ ಪಡೆದಿತ್ತು ಎಂಬುದು ವದಂತಿ: ಸೇನೆ ಸ್ಪಷ್ಟನೆ!

ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್, ಭಾರತೀಯ ಸೈನಿಕರನ್ನು ಗಡಿಯಲ್ಲಿ ಚೀನಾ ಸೈನಿಕರು ವಶಕ್ಕೆ ಪಡೆದಿದ್ದಾರೆ ಎಂಬುದು ಕೇವಲ ವದಂತಿ ಎಂದು ಹೇಳಿದ್ದಾರೆ. ಆದರೆ ಗಡಿಯಲ್ಲಿ ಚೀನಾ ಸೇನೆ ಉದ್ರೇಕಕಾರಿ ಚಟುವಟಿಕೆಗಳನ್ನು ನಡೆಸುತ್ತಿರುವುದು ಸುಳ್ಳಲ್ಲ ಎಂದು ಅಮನ್ ಆನಂದ್ ಹೇಳಿದ್ದಾರೆ.

ಇನ್ನು ಲಡಾಖ್ ಗಡಿಯಲ್ಲಿ ಉದ್ರೇಕಕಾರಿ ಚಟುವಟಿಕೆಗಳಿಗೆ ಕುಮ್ಮಕ್ಕು ನೀಡುತ್ತಿರುವ ಚೀನಾ, ಭಾರತವನ್ನು ಕೆಣಕುವ ಉದ್ದೇಶ ಹೊಂದಿದೆ. ಆದರೆ ಚೀನಾದ ಈ ಕುತಂತ್ರವನ್ನು ಅರಿತಿರುವ ಭಾರತ, ಸಂಯಮದಿಂದ ವ್ಯವಹರಿಸುತ್ತಿದೆ. ಉದ್ರೇಕಕಾರಿ ಚಟುವಟಿಕೆಗಳತ್ತ ಗಮನ ಕೊಡದೇ ಕೇವಲ ಗಡಿ ಸುರಕ್ಷತೆಯಲ್ಲಿ ಮಗ್ನವಾಗಿರುವ ಭಾರತೀಯ ಸೈನಿಕರು, ಚೀನಾದ ಕುತಂತ್ರಗಳನ್ನು ಚೆನ್ನಾಗಿಯೇ ಅರಿತಿದ್ದಾರೆ.

ನಮ್ಮ ಸಾಮಾನ್ಯ ಗಸ್ತಿನ ಮೇಲೂ ಚೀನಾ ವಕ್ರದೃಷ್ಟಿ: ಭಾರತ ಆರೋಪ!

ಇದೇ ಕಾರಣಕ್ಕೆ ಯಾವುದೇ ಉದ್ವೇಗಕ್ಕೆ ಒಳಗಾಗದೇ ಚೀನಿ ಕುತಂತ್ರವನ್ನು ಮೌನವಾಗಿಯೇ ಬಗ್ಗು ಬಡಿಯುವಲ್ಲಿ ಭಾರತೀಯ ಸೈನಿಕರು ನಿರತರಾಗಿದ್ದಾರೆ. ಭಾರತೀಯ ಸೈನಿಕರು ಮೌನವಾಗಿದ್ದುಕೊಂಡೇ ಗಡಿ ರಕ್ಷಣೆಯ ತಮ್ಮ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾರತೀಯ ಸೈನಿಕರ ಈ ಸಂಯಮ ಕೂಡ ಮೆಚ್ಚುಗೆಗೆ ಅರ್ಹ.



from India & World News in Kannada | VK Polls https://vijaykarnataka.com/news/india/indian-soldiers-standing-strong-near-ladakh-border-against-chinese-troops/articleshow/75942168.cms

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...