'ಸಹಕಾರ'ದಲ್ಲೀಗ ಮರಳಿ ಮಾತೃ ಸಂಸ್ಥೆಗೆ ಕ್ರಮ; ಇಲಾಖೆ ಬಲಗೊಳಿಸಲು ಸಚಿವರ ನಿರ್ಧಾರ

ಬೆಂಗಳೂರು: ಸಹಕಾರ ಇಲಾಖೆಯಲ್ಲಿ ಈಗ ಮರಳಿ ಮಾತೃ ಸಂಸ್ಥೆಗೆ ಎಂಬ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಇಲ್ಲಿ ಅಧಿಕಾರಿಗಳೇ ಬಯಸಿ ಮಾತೃ ಸಂಸ್ಥೆಗೆ ಬರುತ್ತಿರುವುದಲ್ಲ. ಬದಲಾಗಿ ಸಹಕಾರ ಸಚಿವರು ಇಂಥದ್ದೊಂದು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿಗಳನ್ನು ಮರಳಿ ಮಾತೃ ಇಲಾಖೆಗೆ ಕರೆತರುವ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ. ಈ ಮೊದಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಗೆಂದು ನೇಮಕ ಮಾಡಿಕೊಂಡಿದ್ದರೂ, ಇಲ್ಲಿ ಹೆಚ್ಚಿನ ಕೆಲಸದ ಒತ್ತಡಗಳಿಲ್ಲದ ಕಾರಣ, ಬೇರೆ ಬೇರೆ ಇಲಾಖೆಗಳಿಗೆ ಹಲವರು ಡೆಪ್ಯೂಟ್ ಆಗಿ ಹೋಗಿ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ಸಹಕಾರ ಇಲಾಖೆಯಲ್ಲಿ ಲೆಕ್ಕಕ್ಕೆ ಹುದ್ದೆಗಳು ಭರ್ತಿಯಾಗಿದ್ದರೂ ಕೆಲಸಕ್ಕೆ ಸಿಬ್ಬಂದಿ ಇಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ. ಇದಕ್ಕೆಲ್ಲ ಪರಿಹಾರ ಕಂಡುಕೊಳ್ಳಲು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಮುಂದಾಗಿದ್ದಾರೆ.

ಸಹಕಾರಿ ಇಲಾಖೆಯಿಂದ ಡೆಪ್ಯೂಟ್ ಮಾಡಿಸಿಕೊಂಡು ಅಲ್ಪಸಂಖ್ಯಾತರ ನಿರ್ದೇಶನಾಲಯ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿವಿಧ ಜಿಲ್ಲೆಗಳಲ್ಲಿ ಇರುವ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳು ಸೇರಿದಂತೆ ಅನೇಕ ಕಡೆ ಅಧಿಕಾರಿಗಳು ನಿಯೋಜನೆಗೊಂಡಿದ್ದಾರೆ. ಹೀಗೆ ಹೋದವರು ಅಲ್ಲಿಯೇ ಬಹಳಷ್ಟು ವರ್ಷಗಳಿಂದ ಆಯಕಟ್ಟಿನ ಜಾಗದಲ್ಲಿ ನೆಲೆಯೂರಿದ್ದಾರೆ. ಈಗ ಅವರನ್ನು ಪುನಃ ಸಹಕಾರ ಇಲಾಖೆಗೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಚಿವರು ಚಾಲನೆ ನೀಡಿದ್ದಾರೆ.

ಸಹಕಾರ ಇಲಾಖೆ ಈಗ ಹಿಂದೆಂದಿಗಿಂತಲೂ ಬಹಳ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಈ ಕೆಲಸದ ಒತ್ತಡಕ್ಕೆ ಸಿಬ್ಬಂದಿ ಸಾಲುತ್ತಿಲ್ಲ. ಹಲವು ಬ್ಯಾಂಕ್‌ಗಳಲ್ಲಿ ಸಾಲ ವಸೂಲಾತಿಯ ಸಮಸ್ಯೆಯಾಗುತ್ತಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ತಿಗೊಳಿಸಲು ಆಗುತ್ತಿಲ್ಲ. ಹೀಗಾಗಿ ಅಂದುಕೊಂಡ ಗುರಿ ಮುಟ್ಟಲೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸುವಾಗ ಈ ವಿಷಯ ಗಮನಕ್ಕೆ ಬಂದಿದೆ. ಇದರಿಂದ ಅಸಮಾಧಾನಗೊಂಡ ಸಚಿವರು, ಹೀಗೆ ಯಾವ ಯಾವ ಕಡೆ ಇಲಾಖೆಯ ಎಷ್ಟೆಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ? ಇಲಾಖೆಯಲ್ಲಿ ಎಲ್ಲೆಲ್ಲಿ ಯಾವ ಯಾವ ಹುದ್ದೆಗಳಿಗೆ ಅತಿ ಅವಶ್ಯಕತೆ ಇದೆ ಎಂಬ ಬಗ್ಗೆ ತಕ್ಷಣ ವರದಿ ಸಲ್ಲಿಸಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದರು.

ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯಿಂದ ಉಪ ನಿಬಂಧಕರು, ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿಬಂಧಕರು, ಅಪರ ನಿರ್ದೇಶಕರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಹೀಗೆ ಹಲವಾರು ವರ್ಷಗಳಿಂದ ಇನ್ನಿತರ ಇಲಾಖೆಗಳಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದು, ಇಂಥವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಎಸ್. ಟಿ. ಸೋಮಶೇಖರ್ ಪತ್ರದಲ್ಲಿ ಕೋರಿದ್ದಾರೆ. ಸಹಕಾರ ಸಚಿವರ ಈ ದಿಟ್ಟ ನಡೆಯಿಂದ ಸಹಕಾರ ಇಲಾಖೆಗೆ ಮತ್ತಷ್ಟು ಬಲ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸಹಕಾರ ಕ್ಷೇತ್ರದ ತಜ್ಞರು ಹೇಳುತ್ತಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸಹಕಾರ ಇಲಾಖೆ ಸಭೆ ನಡೆಸಿದ ಸಂದರ್ಭದಲ್ಲಿ ಸಚಿವ ಸೋಮಶೇಖರ್ ಅವರು, ಇಲಾಖೆಯ ಸಿಬ್ಬಂದಿ ಬೇರೆಡೆ ನಿಯೋಜನೆಗೊಂಡಿರುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ತಕ್ಷಣವೇ ಕ್ರಮ ಕೈಗೊಂಡು ಮಾತೃ ಇಲಾಖೆ ಸೇವೆಗೆ ಅಧಿಕಾರಿಗಳನ್ನು ಬಳಸಿಕೊಳ್ಳಿ ಎಂದು ಸೂಚಿಸಿದ್ದರು. ಸರ್ಕಾರಗಳಲ್ಲಿ ಇಂತಹ ಹಲವಾರು ಲೋಪದೋಷಗಳು ಕಾಣಸಿಗುತ್ತವೆ. ಆದರೆ, ಅವುಗಳನ್ನು ಪತ್ತೆ ಹಚ್ಚಿ ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕಿದೆ. ಆದರೆ, ಆ ಕೆಲಸವನ್ನು ಈಗ ಸಚಿವ ಸೋಮಶೇಖರ್ ಅವರು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಹಕಾರ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ನಾನು ಈಚೆಗೆ ವಿಕಾಸಸೌಧದ ಕಚೇರಿಯಲ್ಲಿ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದಿದ್ದೆ. ಆ ವೇಳೆ, ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ನೇಮಕವಾಗಿದ್ದರೂ ಬೇರೆ ಬೇರೆ ಇಲಾಖೆಯಲ್ಲಿ ಡೆಪ್ಯುಟೇಷನ್ ಮೇಲೆ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಗಮನಕ್ಕೆ ಬಂತು. ನಮ್ಮ ಇಲಾಖೆಯಲ್ಲಿಯೇ ಸಾಕಷ್ಟು ಕೆಲಸಗಳು ಬಾಕಿ ಇರುವಾಗ ಹೇಗೆ ಅವರನ್ನು ಡೆಪ್ಯುಟೇಷನ್ ಮೂಲಕ ಕಳುಹಿಸಲಾಗಿದೆಯೋ ಅರ್ಥವಾಗಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯನ್ನು ಬಲಗೊಳಿಸಬೇಕಿದ್ದು, ಅವರನ್ನೆಲ್ಲ ವಾಪಸ್ ಕರೆಸಿಕೊಳ್ಳಲು ಪತ್ರ ಬರೆದಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡು ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.



from India & World News in Kannada | VK Polls https://ift.tt/2yyfLJY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...