ಬೇಸಿಗೆ ಹಂಗಾಮಿನ ಭತ್ತದ ಕಟಾವು ಆರಂಭಗೊಂಡಂತೆ ಕುಸಿದ ಧಾರಣೆ, ಇಲ್ಲಿದೆ ಭತ್ತದ ಬೆಲೆ ವಿವರ

ಬೆಂಗಳೂರು: ರಾಜ್ಯದಲ್ಲಿ ಬೇಸಗೆ ಹಂಗಾಮಿನ ಭತ್ತದ ಕಟಾವು ಆರಂಭಗೊಂಡಿದ್ದು, ಒಮ್ಮಿಂದೊಮ್ಮೆಗೇ ದರ ಕುಸಿದಿರುವುದು ರೈತರನ್ನು ಕಂಗಾಲಾಗಿಸಿದೆ. ಈ ನಡುವೆ, ಮುಂಗಾರು ಹಂಗಾಮಿನ ಭತ್ತಕ್ಕೆ ಕೇಂದ್ರ ಸರಕಾರ ಘೋಷಿಸಿದ ಬೆಂಬಲ ಬೆಲೆಯ ಅವಧಿಯೂ ಮೇ 31ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಕೂಡಲೇ ಬೇಸಗೆ ಹಂಗಾಮಿನ ಬೆಲೆ ಘೋಷಿಸಬೇಕು, ಖರೀದಿ ಕೇಂದ್ರ ಆರಂಭಿಸಬೇಕು ಎಂಬ ಆಗ್ರಹ ಬಲವಾಗಿದೆ.ತುಂಗಾ ಮತ್ತು ಭದ್ರಾ ಅಚ್ಚುಕಟ್ಟು ಪ್ರದೇಶಗಳಾದ ಶಿವಮೊಗ್ಗ, ದಾವಣಗೆರೆ, ಗಂಗಾವತಿ, ಬಳ್ಳಾರಿ, ರಾಯಚೂರು, ಕೊಪ್ಪಳ್ಳಗಳಲ್ಲಿ ಬೇಸಿಗೆ ಹಂಗಾಮಿನಲ್ಲಿ ಭಾರಿ ಪ್ರಮಾಣದಲ್ಲಿ ಭತ್ತ ಬೆಳೆಯಲಾಗಿದೆ. ಉತ್ತಮ ಫಸಲೂ ಬಂದಿದೆ. ಮೇ 2ನೇ ವಾರದಿಂದ ಕೊಯ್ಲು ಆರಂಭವಾಗಿದ್ದು, ಮಾರುಕಟ್ಟೆಗೆ ಭತ್ತದ ಆಗಮಿಸಲು ಆರಂಭವಾಗಿದೆ. ಕೆಲವು ಕಡೆ ವರ್ತಕರು ಗದ್ದೆಗೇ ಹೋಗಿ ಖರೀದಿ ನಡೆಸುತ್ತಿದ್ದಾರೆ.ಈ ನಡುವೆ, ಭತ್ತದ ಕೊಯ್ಲು ಆರಂಭವಾಗುವವರೆಗೂ ಸಾಧಾರಣ ಮಟ್ಟದಲ್ಲಿದ್ದ ಭತ್ತದ ಖರೀದಿ ದರ, ಭತ್ತ ಅಂಗಳಕ್ಕೆ ಬರುತ್ತಿದ್ದಂತೆಯೇ ಇಳಿದಿದೆ.ಹೋಟೆಲ್‌ಗೆ ಸಿಗದ ಗ್ರೀನ್‌ ಸಿಗ್ನಲ್‌, ಮತ್ತೆ ಕೃಷಿ ಉತ್ಪನ್ನಕ್ಕೇ ಹೊಡೆತ!

ಈ ಇಳಿಕೆ ಎಷ್ಟರ ಮಟ್ಟಿಗೆ ಎಂದರೆ, ಶಿವಮೊಗ್ಗದಲ್ಲಿ ಲಾಕ್‌ಡೌನ್‌ಗೆ ಮುನ್ನ ಜ್ಯೋತಿ ಭತ್ತ ಕ್ವಿಂಟಾಲ್‌ಗೆ 2000ದಿಂದ 2200 ರೂ. ಮತ್ತು ಸಣ್ಣ ಭತ್ತ 1900ರಿಂದ 2000 ರೂ. ಇತ್ತು. ಆದರೆ, ಈಗ ಜ್ಯೋತಿ ಭತ್ತಕ್ಕೆ 1400ರಿಂದ 1500 ರೂ.ಗೆ ಇಳಿದಿದೆ. ಸಣ್ಣ ಭತ್ತ 1300ರಿಂದ 1400 ರೂ ಇದೆ.

ದಾವಣಗೆರೆಯಲ್ಲಿ ಶ್ರೀರಾಮ ಸೋನಾ (2000-2200), ಆರ್‌ಎನ್‌ಆರ್‌ (1720-1750) ಬಿಟ್ಟರೆ ಉಳಿದ ಐಆರ್‌-64, ಕಾವೇರಿ ಸೋನಾ, ಸೋನಾಗಳ ಧಾರಣೆ 1450ರಿಂದ 1670 ರೂ.ಗಳ ಆಸುಪಾಸಿನಲ್ಲೇ ಇದೆ.

ದಾವಣಗೆರೆ ಭಾಗದಲ್ಲಿ ಭತ್ತದ ಕೊಯಲು ಮೇ 2ನೆ ವಾರದಿಂದ ಜೂನ್‌ ತಿಂಗಳ ಮಧ್ಯದವರೆಗೂ ಇರುತ್ತದೆ. ಚಾನಲ್‌ ನೀರು ಬೇಗ ಸಿಗುವ ಬಸವಾಪಟ್ಟಣ, ಸಾಸ್ವೆಹಳ್ಳಿ ಹೋಬಳಿಯಲ್ಲಿ ಭತ್ತ ಕೊಯ್ಲುಆರಂಭ ಆಗಿ ಈಗಾಗಲೇ ಮಾರುಕಟ್ಟೆಗೆ ಭತ್ತ ದಾಂಗುಡಿಯಿಡುತ್ತಿದೆ. ಮಲೆಬೆನ್ನೂರು, ದಾವಣಗೆರೆ ಭಾಗದಲ್ಲೂ ಕೊಯ್ಲುನಡೆಯುತ್ತಿದೆ. ಕಳೆದ ಗುರುವಾರ ಒಂದೇ ದಿನ ದಾವಣಗೆರೆ ಎಪಿಎಂಸಿಗೆ ಭರ್ಜರಿ 49,187 ಕ್ವಿಂಟಾಲ್‌ ಆವಕ ಆಗಿದೆ.

ಬಳ್ಳಾರಿ, ಕೊಪ್ಪಳ, ರಾಯಚೂರು ಪ್ರದೇಶದಲ್ಲಿಹಳೆ ಭತ್ತಕ್ಕೆ ಉತ್ತಮ ಧಾರಣೆ ಇದೆಯಾದರೂ ಹೊಸ ಭತ್ತಕ್ಕೆ ಬೇಡಿಕೆ ಕಡಿಮೆಯಾಗಿದೆ. ಹಾಗಾಗಿ ಧಾರಣೆಯೂ ಕುಸಿದಿದೆ.

ಭತ್ತದ ಕೊಯ್ಲು ಹೊತ್ತಿಗೆ ಹೊರ ಜಿಲ್ಲೆಗಳಿಂದ ಭತ್ತದ ವ್ಯಾಪಾರಿಗಳು ಬಂದು ಸ್ಥಳೀಯ ವ್ಯಾಪಾರಿಗಳೊಂದಿಗೆ ಖರೀದಿಯಲ್ಲಿ ಸ್ಪರ್ಧೆಗೆ ಇಳಿಯುತ್ತಿದ್ದರು. ಕೊರೊನಾ ಕಾರಣಕ್ಕೆ ಹೊರ ಜಿಲ್ಲೆಯ ವ್ಯಾಪಾರಿಗಳು ಬರದೆ ಖರೀದಿಗೆ ಸ್ಪರ್ಧೆಯೂ ಇಲ್ಲದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ.

ಭತ್ತ ಬೆಳೆಯಲು ಎಕರೆಗೆ 25 ಸಾವಿರ ರೂ. ಖರ್ಚು ಮಾಡಿದ್ದೇನೆ. ಆದರೆ, ಧಾರಣೆ ನೋಡಿದರೆ ಖರ್ಚು ಸಹ ಬರದಂತಾಗಿದೆ. ಮಾಡಿದ ಸಾಲ ತೀರಿಸುವುದು ಹೇಗೆ? ಜೀವನ ನಡೆಸುವುದು ಹೇಗೆಂಬ ಚಿಂತೆ ಎದುರಾಗಿದೆ. ಸರಕಾರ ಕನಿಷ್ಠ 2 ಸಾವಿರ ರೂ. ಬೆಂಬಲ ಬೆಲೆ ಘೋಷಿಸಿ ಖರೀದಿಸಬೇಕು.

- ಅಲ್ತಾಫ್‌, ಭತ್ತ ಬೆಳೆಗಾರ, ಕೂಡ್ಲಿ

ಪಡಿತರ ಅಕ್ಕಿ ಕಾಳಸಂತೆ ಪಾಲು: ಕೊರೊನಾ ಸಂಕಷ್ಟದಲ್ಲಿ ನೀಡಿದ್ದ ನೆರವಿನ ದುರುಪಯೋಗ!

ಕೇಂದ್ರ ಸರಕಾರ 'ಎ' ಗ್ರೇಡ್‌ ಭತ್ತಕ್ಕೆ ಕ್ವಿಂಟಲ್‌ಗೆ 1835 ರೂ. ಬೆಂಬಲ ಬೆಲೆ ನಿಗದಿಪಡಿಸಿತ್ತು. ಮುಂಗಾರು ಹಂಗಾಮಿಗೆ ಘೋಷಿಸಿದ ಈ ಬೆಲೆಯಲ್ಲಿ ಖರೀದಿ ಅವಧಿ ಮೇ 31ಕ್ಕೆ ಮುಕ್ತಾಯವಾಗುತ್ತಿದೆ. ರಾಜ್ಯ ಸರಕಾರ ಮೇ 14 ರಂದೇ ಭತ್ತ ಖರೀದಿ ಕೇಂದ್ರ ತೆರೆಯಲು ಆದೇಶ ಹೊರಡಿಸಿದೆ. ಈಗ ಮೇ 31ಕ್ಕೆ ಇನ್ನು ಎಂಟು ದಿನ ಬಾಕಿಯಿದೆ. ಇಷ್ಟು ದಿನದಲ್ಲಿ ಖರೀದಿಗೆ ನೋಂದಣಿ ಮಾಡಿ ಅಷ್ಟೂ ಭತ್ತ ಸಾಗಿಸಲು ರೈತರಿಗೆ ಸಾಧ್ಯವೇ ಎಂಬ ಪ್ರಶ್ನೆ ಎದುರಾಗಿದ್ದು ಬೆಂಬಲ ಬೆಲೆ ಸಿಗುವುದಿಲ್ಲ ಎಂಬ ಆತಂಕ ರೈತರಲ್ಲಿದೆ. ಖರೀದಿಸುವ ಅವಧಿ ವಿಸ್ತರಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ನಿಜವೆಂದರೆ, ಕೇಂದ್ರ ಸರಕಾರ ಭತ್ತಕ್ಕೆ ಕ್ವಿಂಟಲ್‌ಗೆ 1835 ರೂ. ಬೆಂಬಲ ಬೆಲೆ ಘೋಷಿಸಿದರೂ ಖರೀದಿ ಕೇಂದ್ರಕ್ಕೆ ಭತ್ತ ಕೊಡುವರು ಕಡಿಮೆ. ಇದಕ್ಕೆ ಮುಖ್ಯ ಕಾರಣ ಖರೀದಿ ಕೇಂದ್ರಗಳು ಎ ಗ್ರೇಡ್‌ ಭತ್ತವನ್ನಷ್ಟೇ ಖರೀದಿ ಮಾಡುತ್ತವೆ. ಕೇಂದ್ರ ಸರಕಾರದ ಆಹಾರ ನಿಗಮ ಸೇರುವ ಈ ಭತ್ತ ಚೆನ್ನಾಗಿ ಒಣಗಿರಬೇಕು, ತೇವಾಂಶ ಕಡಿಮೆ ಇರಬೇಕು. ಆದರೆ, ಈ ಗ್ರೇಡ್‌ನ ಭತ್ತವನ್ನು ಪ್ರತ್ಯೇಕಿಸುವುದು ಕಷ್ಟದ ಕೆಲಸ. ಹೀಗಾಗಿ, ರೈತರು ಕೂಡಾ ಖರೀದಿ ಕೇಂದ್ರದ ಬದಲು ಬೇರೆ ವರ್ತಕರಿಗೆ ಸ್ವಲ್ಪ ಕಡಿಮೆ ಬೆಲೆಗಾದರೂ ಮಾರಾಟ ಮಾಡುತ್ತಾರೆ. ಕೆಲವೊಮ್ಮೆ ರೈತರು ಪೂರ್ವಭಾವಿ ಹಣ ಪಡೆಯುವುದರಿಂದ ಅದೇ ವರ್ತಕರಿಗೆ ಮಾರಾಟ ಮಾಡುವುದು ಅನಿವಾರ್ಯವಾಗುತ್ತದೆ.

ಹಾಗಂತ, ಬೆಂಬಲ ಬೆಲೆ ಘೋಷಿಸದೆ ಹೋದರೆ ವರ್ತಕರು ಕಡಿಮೆ ಬೆಲೆಗೆ ಭತ್ತ ಕೇಳುತ್ತಾರೆ. ಬೆಲೆ ಘೋಷಣೆಯಾದರೆ ಅದರ ಆಸುಪಾಸಿನ ಧಾರಣೆಯಾದರೂ ಸಿಗುತ್ತದೆ!



from India & World News in Kannada | VK Polls https://ift.tt/3emqt5D

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...