ಕೋಲ್ಕೊತಾ: ಹಿಂದೊಮ್ಮೆ ಭಾರತದ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಅಸ್ಥಿರಗೊಳಿಸಲು ಬಹುದೊಡ್ಡ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ () , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪಪ್ರಧಾನಿ ಎಲ್.ಕೆ. ಆಡ್ವಾಣಿ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಅವರ ಹತ್ಯೆಗೆ ಯತ್ನ ನಡೆಸಿದ್ದರು ಎನ್ನುವ ಸಂಗತಿ ಈಗ ಬಯಲಾಗಿದೆ. ನಿವೃತ್ತ ಐಪಿಎಸ್ ಅಧಿಕಾರಿ ದಿಲೀಪ್ ಮಿತ್ರಾ ಬರೆದಿರುವ 'ಆಪರೇಷನ್ ಬ್ಲಾಕ್ ಸ್ಟಿಲೆಟ್ಟೊ: ಮೈ ಇಯರ್ಸ್ ಇನ್ ಇಂಟಲಿಜನ್ಸ್' ಪುಸ್ತಕದಲ್ಲಿ ಈ ಕಳವಳಕಾರಿ ಸಂಗತಿಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. 2001ರಿಂದ 2008ರ ಅವಧಿಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬೇಹುಗಾರಿಕಾ ಮುಖ್ಯಸ್ಥರಾಗಿ ಕೆಲಸ ಮಾಡಿದ್ದ ಮಿತ್ರಾ, ಆ ಅವಧಿಯಲ್ಲಿ ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ಪಾತಕಿಗಳು ನಂದಿಗ್ರಾಮದಲ್ಲಿ ರೂಪಿಸಿದ್ದ ವಿಧ್ವಂಸಕ ಸಂಚಿನ ಸಮಗ್ರ ವಿವರ ನೀಡಿದ್ದಾರೆ. ''ಒಂದು ದಿನ ಡನ್ಲೂಪ್ ಕ್ರಾಸಿಂಗ್ ಬಳಿ ಬಾಂಗ್ಲಾದಿಂದ ಬಂದ ನುಸುಳುಕೋರನೊಬ್ಬ ಸೆರೆ ಸಿಕ್ಕ. ಬಾಂಗ್ಲಾ ಭಾಷೆ ಮಾತಾಡುತ್ತಿದ್ದ ಆತನ ವರ್ತನೆ ತೀರಾ ಸಂಶಯಾಸ್ಪದವಾಗಿತ್ತು. ಏಕಾಂತ ಕೋಣೆಗೆ ಎಳೆದೊಯ್ದು ವಿಚಾರಿಸಿದೆ. ಮೊದಲೇ ತರಬೇತಿ ಪಡೆದಿದ್ದ ಆಸಾಮಿ, ಏನು ಮಾಡಿದರೂ ಬಾಯಿ ಬಿಡಲಿಲ್ಲ. ಕೊನೆಗೆ ದಂಡ ಪ್ರಯೋಗಕ್ಕೆ ತಲೆಬಾಗಿದ. ಅಕ್ರಮ ವಲಸಿಗರಿಗೆ ಗಡಿ ಪ್ರವೇಶ ಬಿಗಿಗೊಳಿಸುತ್ತಿರುವ ಅಂದಿನ ಸಿಎಂ ಬುದ್ಧದೇವ್ ಭಟ್ಟಾಚಾರ್ಯ ಬಗ್ಗೆ ಬಾಂಗ್ಲಾ ಉಗ್ರರಿಗೆ ಸಿಟ್ಟಿತ್ತು. ಅವರನ್ನು ಮುಗಿಸುವ ಸಲುವಾಗಿ ತರಬೇತು ಪಡೆದ ಉಗ್ರರನ್ನು ಕಳಿಸಿಕೊಡಲಾಗಿತ್ತು. ಕಾರ್ಯಕ್ರಮಕ್ಕೆ ಹೋಗುವ ಮಾರ್ಗ ಮಧ್ಯೆ ಹೆದ್ದಾರಿ 34ರಲ್ಲಿ ಗ್ರೆನೇಡ್ ದಾಳಿ ನಡೆಸಿ ಮುಖ್ಯಮಂತ್ರಿಯನ್ನು ಹತ್ಯೆಗೈಯುವ ಸಂಚು ರೂಪಿಸಿದ್ದರು. ಅದನ್ನು ಈ ಆಸಾಮಿಯ ಬಂಧನದ ಮೂಲಕ ನಿಷ್ಕ್ರಿಯಗೊಳಿಸಲಾಗಿತ್ತು. ಅಂತೆಯೇ ವಾಜಪೇಯಿ ಮತ್ತು ಆಡ್ವಾಣಿ ಅವರನ್ನು ಕೂಡ ಗಲಭೆಗ್ರಸ್ತ ನಂದಿಗ್ರಾಮದಲ್ಲಿ ಹತ್ಯೆ ಮಾಡುವ ಸಂಚನ್ನು ಪಾಕಿಸ್ತಾನಿ ಉಗ್ರರು ರೂಪಿಸಿದ್ದರು. ದಾಳಿಗೆ ಬೇಕಾದ ಮದ್ದುಗುಂಡುಗಳನ್ನು ಕೂಡ ಬಾಂಗ್ಲಾ ಮೂಲಕ ಸಾಗಿಸಿದ್ದರು,'' ಎಂದು ದಿಲೀಪ್ ಮಿತ್ರಾ ತಮ್ಮ ಪುಸ್ತಕರದಲ್ಲಿ ವಿವರಿಸಿದ್ದಾರೆ. ಶ್ರೀನಗರದಲ್ಲಿ ಮುಂದುವರಿದ ಉಗ್ರರ ಬೇಟೆ ಶ್ರೀನಗರ: ಅನಂತನಾಗ್ ಜಿಲ್ಲೆಯಲ್ಲಿ ವಾರದ ಹಿಂದೆ ಪೊಲೀಸ್ ಮುಖ್ಯ ಪೇದೆ ಅಲಿ ಮೊಹಮದ್ ಘನಿ ಅವರನ್ನು ಹತ್ಯೆ ಮಾಡಿದ್ದ ಉಗ್ರ ಸೇರಿದಂತೆ, ಲಷ್ಕರೆ ತಯ್ಬಾದ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಶನಿವಾರ ಹೊಡೆದುರುಳಿಸಿವೆ. ‘‘ಶ್ರೀನಗರ ಬಳಿಯ ಝಕುರಾ ಪ್ರದೇಶದಲ್ಲಿಉಗ್ರರು ಅಡಗಿರುವ ಮಾಹಿತಿ ಆಧರಿಸಿ ಕಾರ್ಯಾಚರಣೆ ಆರಂಭಿಸಲಾಯಿತು. ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಇಬ್ಬರೂ ಲಷ್ಕರೆ ತಯ್ಬಾದ ಘಟಕವಾಗಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್)ಗೆ ಸೇರಿದವರು. ಆ ಪೈಕಿ ಇಖ್ಲಾಕ್ ಹಜಾಮ್ ಎಂಬಾತ ಪೊಲೀಸ್ ಹೆಡ್ಕಾನ್ಸ್ಟೆಬಲ್ ಹತ್ಯೆಯಲ್ಲಿ ಭಾಗಿಯಾಗಿದ್ದ. ಮೃತರಿಂದ ಎರಡು ಪಿಸ್ತೂಲ್ ಹಾಗೂ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ,’’ ಎಂದು ಕಾಶ್ಮೀರ ಐಜಿಪಿ ವಿಜಯಕುಮಾರ್ ತಿಳಿಸಿದ್ದಾರೆ. ಇಬ್ಬರು ಉಗ್ರರು ಸಹ ಕಣಿವೆಯಲ್ಲಿ ನಡೆದ ಹಲವು ಉಗ್ರರ ದಾಳಿಯ ಭಾಗವಾಗಿದ್ದರು. ಇಬ್ಬರಿಗಾಗಿ ಹಲವು ದಿನದಿಂದ ಯೋಧರು ಹುಡುಕಾಟ ನಡೆಸುತ್ತಿದ್ದರು. 18 ಕೋಟಿ ಮೌಲ್ಯದ ಮಾದಕವಸ್ತು ವಶ ಬಾರಾಮುಲ್ಲಾ ಜಿಲ್ಲೆಯಲ್ಲಿ ಪೊಲೀಸರು ಬೃಹತ್ ಮಾದಕವಸ್ತು ಜಾಲವೊಂದನ್ನು ಭೇದಿಸಿದ್ದು, 18 ಕೋಟಿ ರೂ. ಮೌಲ್ಯದ ಮಾದಕವಸ್ತು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರು ಪೊಲೀಸರು ಪರಿಶೀಲನೆ ನಡೆಸಲು ವಾಹನ ನಿಲ್ಲಿಸುತ್ತಲೇ ಚಾಲಕರು ಪರಾರಿಯಾಗಲು ಯತ್ನಿಸಿದರು. ಆದರೆ, ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.
from India & World News in Kannada | VK Polls https://ift.tt/XLTkpV8