ಹೊಸದಿಲ್ಲಿ: ದೇಶದಲ್ಲಿ ಕೊರೊನಾ ರೂಪಾಂತರಿಯಿಂದ ಉಂಟಾಗಿದ್ದ ಮೂರನೇ ಅಲೆಯ ಪರಿಣಾಮ ತಗ್ಗಿದ ಕಾರಣ ಕೇಂದ್ರ ಸರಕಾರವು ಅಂತಾರಾಷ್ಟ್ರೀಯ ಪ್ರಯಾಣಿಕರ ಮಾರ್ಗಸೂಚಿಗಳನ್ನು ಪರಿಷ್ಕರಿಸಿದ್ದು, ವಿದೇಶದಿಂದ ಆಗಮಿಸುವವರಿಗೆ ಕ್ವಾರಂಟೈನ್ ಇಲ್ಲ ಎಂದು ತಿಳಿಸಿದೆ. ‘ವಿದೇಶದಿಂದ ಆಗಮಿಸುವವರು ಏಳು ದಿನ ಕಡ್ಡಾಯವಾಗಿ ಕ್ವಾರಂಟೈನ್ ಆಗುವಂತಿಲ್ಲ. ಆದರೆ, ಭಾರತಕ್ಕೆ ಬಂದ 14 ದಿನಗಳವರೆಗೆ ಆರೋಗ್ಯದ ಮೇಲೆ ಸ್ವಯಂ ನಿಗಾ ಇಡಬೇಕು ಹಾಗೂ ಆಗಮಿಸಿದ ಎಂಟನೇ ದಿನ ಆರ್ಟಿಪಿಸಿಆರ್ ತಪಾಸಣೆ ಮಾಡಿಸಿಕೊಂಡು ‘ಏರ್ ಸುವಿಧಾ’ ಪೋರ್ಟಲ್ನಲ್ಲಿ ತಪಾಸಣೆ ವರದಿಯ ಫಲಿತಾಂಶ ಅಪ್ಲೋಡ್ ಮಾಡಬೇಕು’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಂಡಾವಿಯ ತಿಳಿಸಿದ್ದಾರೆ. ‘ವಿಮಾನ ನಿಲ್ದಾಣಕ್ಕೆ ಆಗಮಿಸುವವರ ತಪಾಸಣೆ ವೇಳೆ ಪ್ರಯಾಣಿಕರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಕೂಡಲೇ ಅವರು ಐಸೋಟ್ ಆಗುವ ಜತೆಗೆ ವೈದ್ಯಕೀಯ ಚಿಕಿತ್ಸೆ ಪಡೆಯಬೇಕು. ಹಾಗೆಯೇ, ಪ್ರಯಾಣಕ್ಕೂ ಮೊದಲಿನ 72 ಗಂಟೆಯೊಳಗೆ ಮಾಡಿಸಿದ ಕೊರೊನಾ ತಪಾಸಣೆ ವರದಿ ಹಾಗೂ ಸಂಪೂರ್ಣ ಲಸಿಕೆ ಪಡೆದ ಕುರಿತ ದಾಖಲೆ ಸಲ್ಲಿಸಬೇಕು’ ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಮೆರಿಕ, ಬ್ರಿಟನ್, ನ್ಯೂಜಿಲೆಂಡ್, ಸ್ವಿಟ್ಜರ್ಲೆಂಡ್, ಆಸ್ಪ್ರೇಲಿಯಾ, ಹಾಂಕಾಂಗ್, ಸಿಂಗಾಪುರ, ಸೌದಿ ಅರೇಬಿಯಾ, ಇಸ್ರೇಲ್, ಬಾಂಗ್ಲಾದೇಶ, ನೇಪಾಳ ಸೇರಿ ಸುಮಾರು 82 ದೇಶಗಳಿಂದ ಬರುವವರಿಗೆ ಕ್ವಾರಂಟೈನ್ ನಿರ್ಬಂಧದಿಂದ ಮುಕ್ತಗೊಳಿಸಲಾಗಿದೆ.
from India & World News in Kannada | VK Polls https://ift.tt/QZI5qBV