
ಬೆಂಗಳೂರು: ಪ್ರತಿ ವರ್ಷ ಅನುದಾನರಹಿತ ಖಾಸಗಿ ಶಾಲೆಗಳ ಮಾನ್ಯತೆ ನವೀಕರಿಸಲು ಒತ್ತಾಯ ಮಾಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್, ರಾಜ್ಯ ಸರಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಿದೆ. ನೋಂದಾಯಿತ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ () ಮತ್ತು ಬೆಂಗಳೂರಿನ ಗುರುಸಿದ್ಧಾರ್ಥ್ ಶೈಕ್ಷಣಿಕ ಟ್ರಸ್ಟ್ ಹಾಗೂ ರಾಜ್ಯದ ಇತರ ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿಗಳು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿದ್ದವು. ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ತುರ್ತು ನೋಟಿಸ್ ಜಾರಿ ಮಾಡಿತು. ‘ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಶಾಲಾ ಮಾನ್ಯತೆಯ ವಾರ್ಷಿಕ ನವೀಕರಣಕ್ಕೆ ಬಲವಂತ ಮಾಡದೆ ಅರ್ಜಿದಾರರ ಶಾಲೆಗಳ ಅರ್ಹ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ವಾರ್ಷಿಕ ಪರೀಕ್ಷಾ ನೋಂದಣಿಗೆ ಅರ್ಜಿ ಸ್ವೀಕರಿಸಬೇಕು. ಆದರೆ, ನ್ಯಾಯಾಲಯದ ಅನುಮತಿ ಪಡೆಯದೆ ಪರೀಕ್ಷಾ ಫಲಿತಾಂಶ ಪ್ರಕಟಿಸಬಾರದು’ ಎಂದು ಮಧ್ಯಂತರ ಆದೇಶ ಮಾಡಿದೆ. ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲ ಎಸ್.ಬಸವರಾಜು, ‘ಕರ್ನಾಟಕ ಶಿಕ್ಷಣ ಕಾಯಿದೆ ಪ್ರಕಾರ, 10 ವರ್ಷಗಳಿಗೊಮ್ಮೆ ಶಾಲಾ ಮಾನ್ಯತೆ ನವೀಕರಿಸಬೇಕಿದೆ. ಆದರೆ, ಸರಕಾರವು ಪ್ರತಿ ವರ್ಷ ಮಾನ್ಯತೆ ನವೀಕರಣ ಮಾಡಲು ಶಾಲಾ ಆಡಳಿತ ಮಂಡಳಿಗಳಿಗೆ ಸೂಚಿಸುತ್ತಿದೆ. ಅದರಂತೆ 2021ರ ಡಿ.12ರಂದು ಸುತ್ತೋಲೆ ಹೊರಡಿಸಿ, 2022ರ ಆ.31ರೊಳಗೆ ಶಾಲಾ ಮಾನ್ಯತೆ ನವೀಕರಿಸುವಂತೆ ಸೂಚನೆ ನೀಡಿದೆ’ ಎಂದು ವಿವರಿಸಿದರು.
from India & World News in Kannada | VK Polls https://ift.tt/a8P0Ckj