ಚಾಮರಾಜನಗರದಲ್ಲಿ ಹೆದ್ದಾರಿ ಬೈಪಾಸ್‌ ಕಾಮಗಾರಿ ಪುನಾರಂಭ: ಪುಣಜೂರು ರಸ್ತೆಯು ದುರಸ್ತಿ!

ಫಾಲಲೋಚನ ಆರಾಧ್ಯ ಚಾಮರಾಜನಗರ: ಕಳೆದ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಬೆಂಗಳೂರು ತಮಿಳುನಾಡಿನ ದಿಂಡಿಗಲ್‌ಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ (209)ಯ ಬೈಪಾಸ್‌ ಇದೀಗ ಪುನಾರಂಭಗೊಂಡಿದೆ. ಈ ಹೆದ್ದಾರಿ ಜಿಲ್ಲೆಯ ಕೊಳ್ಳೇಗಾಲದ ಸತ್ತೇಗಾಲದಿಂದ ಚಾ.ನಗರ ತಾಲೂಕಿನ ಪುಣಜನೂರಿನವರೆಗೆ ಹಾದು ಹೋಗಿದ್ದು, ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗಿತ್ತಲ್ಲದೇ, ಸಾರ್ವಜನಿಕರಿಂದ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆದರೀಗ ಬೈಪಾಸ್‌ ನಿರ್ಮಾಣ ಕಾಮಗಾರಿ ಚಾ.ನಗರದ ಸೋಮವಾರಪೇಟೆ ಹೊರ ವಲಯದಿಂದ ಪುನಾರಂಭಗೊಂಡಿದೆ. ಇನ್ನು ಸುವರ್ಣಾವತಿಯಿಂದ ಪುಣಜೂರುವರೆಗೆ ಕೆಟ್ಟು ರಾಡಿ ಹಿಡಿದಿದ್ದ ರಸ್ತೆ ದುರಸ್ತಿ ಕಾರ್ಯವೂ ಕಳೆದ ಮೂರ್ನಾಲ್ಕು ದಿನಗಳಿಂದ ಆರಂಭಗೊಂಡಿದ್ದು, ಸವಾರರು ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಹೆದ್ದಾರಿ ಜಿಲ್ಲೆಯಲ್ಲೇ ಒಟ್ಟು 80 ಕಿ.ಮೀ. ಅಂತರವನ್ನು ಹೊಂದಿದ್ದು, ಈ ಪೈಕಿ ಬೈಪಾಸ್‌ ಸೇರಿದಂತೆ ಒಟ್ಟು 65 ಕಿ.ಮೀ. ಹೊಸದಾಗಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ 2017ರಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆರಂಭದಲ್ಲಿ ತ್ವರಿತಗತಿಯಲ್ಲಿ ನಡೆದ ಕಾಮಗಾರಿ ನಂತರ ತೆವಳುತ್ತಾ ಸಾಗಿತು. ಆನಂತರದಲ್ಲಿ ಕಾಮಗಾರಿಯೇ ನಿಂತಿತು. ಈ ಕಾಮಗಾರಿ ಸ್ಥಗಿತಗೊಂಡ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ಹಾಗೂ ಟೀಕೆ ಎದುರಾಗಿತ್ತು. ಸಂಸದ ಶ್ರೀನಿವಾಸಪ್ರಸಾದ್‌ ಸೇರಿದಂತೆ ಜನಪ್ರತಿನಿಧಿಗಳ ವಿರುದ್ಧ ಜನತೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೊನೆಗೂ ಅಪೂರ್ಣ ಸ್ಥಿತಿಯಲ್ಲಿದ್ದ ಬೈಪಾಸ್‌ ನಿರ್ಮಾಣ ಕಾಮಗಾರಿ ಪುನಾರಂಭಗೊಂಡಿದೆ. ಇನ್ನಾದರೂ ತ್ವರಿತಗತಿಯಲ್ಲಿ ಕಾಮಗಾರಿ ಸಾಗಲಿ, ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂಬ ಆಶಯವನ್ನು ಸಾರ್ವಜನಿಕರು ವ್ಯಕ್ತಪಡಿಸಿದ್ದಾರೆ. ಈ ಹೆದ್ದಾರಿ ಹಾದು ಹೋಗಿರುವ ಪೈಕಿ ಕೊಳ್ಳೇಗಾಲ, ಅಗರ, ಮಾಂಬಳ್ಳಿ, ಯಳಂದೂರು, ಸಂತೇಮರಹಳ್ಳಿ ಹಾಗೂ ಚಾ.ನಗರದಲ್ಲಿ ಹೊಸ ಬೈಪಾಸ್‌ ರಸ್ತೆ ನಿರ್ಮಾಣವಾಗುತ್ತಿದೆ ಎಂಬುದು ಗಮನಾರ್ಹ. ಸಾವಿರಾರು ಕೋಟಿ ರೂ. ಯೋಜನೆ ಬೆಂಗಳೂರು-ದಿಂಡಿಗಲ್‌ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಒಟ್ಟು 171 ಕಿ.ಮೀ. ರಸ್ತೆ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ಈ ಪೈಕಿ ಬೈಪಾಸ್‌ ರಸ್ತೆ ಹಾಗೂ ಅಗಲೀಕರಣಕ್ಕೆ ಅಗತ್ಯ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು 954 ಕೋಟಿ ರೂ. ಹಾಗೂ ರಸ್ತೆ ನಿರ್ಮಾಣ ಕಾಮಗಾರಿಗೆ 1008 ಕೋಟಿ ರೂ. ವೆಚ್ಚ ಕಾಯ್ದಿರಿಸಿ ಕಾಮಗಾರಿಯನ್ನು ಬೆಂಗಳೂರಿನ ಸದ್ಬವ್‌ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ಕಾಮಗಾರಿ ಪ್ರಕ್ರಿಯೆ ಕಳೆದ 2017ರ ಆಗಸ್ಟ್‌ನಲ್ಲಿ ಪ್ರಾರಂಭಗೊಂಡಿದ್ದು, ಯೋಜನೆ ಪ್ರಕಾರ ಪ್ರಾರಂಭವಾದ 2 ವರ್ಷಗಳಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೀಗ ಮೂರು ವರ್ಷ ಕಳೆದರೂ ಇನ್ನು ಶೇ.50ರಷ್ಟು ಕಾಮಗಾರಿಯೂ ನಡೆದಿಲ್ಲ. ಗುತ್ತಿಗೆ ತೆಗೆದುಕೊಂಡಿರುವ ಉದ್ಭವ್‌ ಸಂಸ್ಥೆಯಲ್ಲಿ ಉಂಟಾದ ನಾನಾ ಸಮಸ್ಯೆಗಳು ಕಾಮಗಾರಿ ಸ್ಥಗಿತಗೊಂಡಿದ್ದಕ್ಕೆ ಕಾರಣ ಎನ್ನುತ್ತಾರೆ ಅಧಿಕಾರಿಗಳು. ನಾನಾ ಕಡೆ ಫ್ಲೈಓವರ್‌ಈ ಹೆದ್ದಾರಿಯಲ್ಲಿ ಹಲವು ಸೇತುವೆಗಳು ಹಾಗೂ ಮೇಲ್ಸೆತುವೆ ಕಾಮಗಾರಿ ನಡೆಯಬೇಕಾಗಿದ್ದು, ನಗರದಲ್ಲಿ ಮೂಡಲಪುರ, ನಂಜನಗೂಡು ರಸ್ತೆ ಹಾಗೂ ರೈಲ್ವೆ ಹಳಿ ಬಳಿ ಮೇಲ್ಸೆತುವೆ ನಿರ್ಮಾಣವಾಗಬೇಕಾಗಿದೆ. ಇದಲ್ಲದೇ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿ, ಹಂಪಾಪುರ ಹಾಗೂ ಮುಡಿಗುಂಡದ ಬಳಿ ಫ್ಲೈಓವರ್‌ ಹಾಗೂ ದೊಡ್ಡ ಸೇತುವೆ ನಿರ್ಮಾಣವಾಗಬೇಕಾಗಿದೆ. ಉತ್ತಂಬಳ್ಳಿ ಬಳಿಯು ಸೇತುವೆ ಕಾಮಗಾರಿ ಅಪೂರ್ಣಾವಸ್ಥೆಯಲ್ಲೇ ಇದೆ. ಜೋಕಾಲಿ ರಸ್ತೆ ನಗರದಲ್ಲಿ ಹಾದು ಹೋಗಿರುವ ಇದೇ ಹೆದ್ದಾರಿಯ ಕಾಮಗಾರಿ ಸುಲ್ತಾನ್‌ ಷರೀಫ್‌ ವೃತ್ತದಿಂದ ಸೋಮವಾರಪೇಟೆ ಹೊರವಲಯದವರೆಗೂ ಕಳಪೆಯಾಗಿದೆ. ಎರಡು ಬದಿಯಲ್ಲೂ ರಸ್ತೆ ಒಂದು ಮಟ್ಟದಿಂದ ಕೂಡಿಲ್ಲ. ಹೀಗಾಗಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಸಾಗಿದರೆ ಜೋಕಾಲಿ ಅನುಭವವಾಗುತ್ತದೆ. ಈ ಕಳಪೆ ಕಾಮಗಾರಿಯಿಂದ ಈ ರಸ್ತೆಯಲ್ಲಿ ಹಲವು ಅಪಘಾತಗಳು ನಡೆದಿವೆ. ಆದ್ದರಿಂದ ಈ ಭಾಗದ ರಸ್ತೆಯನ್ನು ದುರಸ್ತಿಪಡಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಾಗಿದೆ ಎಂಬುದು ವಾಹನ ಸವಾರರ ಒತ್ತಾಯ. ಸ್ಥಗಿತಗೊಂಡಿದ್ದ ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ಕಾಮಗಾರಿ ಇದೀಗ ಪುನಾರಂಭಗೊಂಡಿದೆ. ಕಾಮಗಾರಿ ಸ್ಥಗಿತಗೊಂಡಿದ್ದ ವೇಳೆ ತಾವು ಸಹ ಈ ಬಗ್ಗೆ ಪ್ರಶ್ನಿಸಿದ್ದೆ. ಆದರೀಗ ಕೆಲದಿನಗಳಿಂದ ಕಾಮಗಾರಿ ಶುರುವಾಗಿದೆ. ಇನ್ನಾದರೂ ಕಾಮಗಾರಿ ತ್ವರಿತಗತಿಯಲ್ಲಿ ಪೂರ್ಣಗೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗುವುದು. ಸಿ.ಪುಟ್ಟರಂಗಶೆಟ್ಟಿ, ಶಾಸಕ


from India & World News in Kannada | VK Polls https://ift.tt/338IbWK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...