ಅಬುಧಾಬಿ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೋಲು ಅನುಭವಿಸಿದ ಬಳಿಕ ಮಾತನಾಡಿದ ನಾಯಕ , ಪ್ಲೇಆಫ್ಸ್ಗೆ ಅರ್ಹತೆ ಪಡೆಯದ ಕಾರಣ ತುಂಬಾ ನೋವಾಗಿದೆ ಹಾಗೂ ನಮ್ಮ ತಂಡದ ಬಗ್ಗೆ ಸಾಕಷ್ಟು ಹೆಮ್ಮೆ ಇದೆ ಎಂದು ಹೇಳಿದರು. ಇಲ್ಲಿನ ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್, ನಿಗದಿತ 20 ಓವರ್ಗಳಿಗೆ 6ವಿಕೆಟ್ಗಳನ್ನು ಕಳೆದುಕೊಂಡು 153 ರನ್ಗಳನ್ನು ಗಳಿಸಿತು. ಬಳಿಕ ಗುರಿ ಹಿಂಬಾಲಿಸಿದ ಚೆನ್ನೈ ಸೂಪರ್ ಕಿಂಗ್ಸ್, ಋತುರಾಜ್ ಗಾಯಕ್ವಾಡ್ (62*) ಹಾಗೂ ಫಾಫ್ ಡು'ಪ್ಲೆಸಿಸ್(48) ಅವರ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ಗಳ ಜಯ ದಾಖಲಿಸಿತು. ಈ ಗೆಲುವಿನೊಂದಿಗೆ ಪಂಜಾಬ್ ಪ್ಲೇಆಫ್ಸ್ ಕನಸು ನುಚ್ಚು ನೂರಾಯಿತು. ಒಟ್ಟು 14 ಪಂದ್ಯಗಳಲ್ಲಿ ಕೆ.ಎಲ್ ರಾಹುಲ್ ಬಳಗ 12 ಅಂಕಗಳನ್ನು ಕಲೆ ಹಾಕಿತು. ಚೆನ್ನೈ ಸೂಪರ್ ಕಿಂಗ್ಸ್ ಕೂಡ ಇಷ್ಟೇ ಅಂಕಗಳನ್ನು ಕಲೆ ಹಾಕಿದೆ. ಈ ಪಂದ್ಯದೊಂದಿಗೆ ಉಭಯ ತಂಡಗಳು 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪಯಣವನ್ನು ಮುಗಿಸಿದವು. ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಲ್ ರಾಹುಲ್, "ಪ್ರತಿಯೊಬ್ಬ ಯುವ ಆಟಗಾರರು ಸಾಕಷ್ಟು ಪರಿಶ್ರಮ ಪಟ್ಟಿದ್ದಾರೆ. ಅವರು ಕೋಚ್ಗಳ ಬಳಿ ಕೆಲಸ ಮಾಡಿದ್ದು, ಗುಣಮಟ್ಟದ ಎದುರಾಳಿಗಳ ಎದುರು ಆಡಿದ್ದಾರೆ. ಇವರು ಒತ್ತಡವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಈ ಆಟಗಾರರ ಮೇಲೆ ಇನ್ನಷ್ಟು ಕೆಲಸ ಮಾಡುತ್ತೇವೆ ಹಾಗೂ ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಆಟದಲ್ಲಿ ಪಕ್ವತೆಯನ್ನು ಸಾಧಿಸಲಿದ್ದಾರೆ," ಎಂದು ಯುವ ಆಟಗಾರರನ್ನು ಶ್ಲಾಘಿಸಿದರು. "ಪ್ಲೇಆಫ್ಸ್ಗೆ ಅರ್ಹತೆ ಪಡೆಯಲು ತುಂಬಾ ಅವಕಾಶವಿತ್ತು, ಆದರೆ, ಪಡೆಯದೇ ಇದ್ದದ್ದು ತುಂಬಾ ನೋವು ತಂದಿದೆ. ಈ ಆವೃತ್ತಿಯಲ್ಲಿ ನಮ್ಮ ತಂಡದ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆ ಇದೆ. ಇನ್ನೊಂದು ಪಂದ್ಯ ಗೆದ್ದು ಪ್ಲೇಆಫ್ಸ್ಗೆ ಅರ್ಹತೆ ಪಡೆದಿದ್ದರೆ ತುಂಬಾ ಚೆನ್ನಾಗಿ ಇರುತ್ತಿತ್ತು. ಈ ಬಗ್ಗೆ ನೆನಪು ಮಾಡಿಕೊಂಡಾಗ ತುಂಬಾ ನೋವಾಗುತ್ತಿದೆ. ಇದರಿಂದ ನಾವು ಪಾಠ ಕಲಿತು, ಶಕ್ತಿಯುತವಾಗಿ ಕಮ್ಬ್ಯಾಕ್ ಮಾಡಬೇಕು," ಎಂದು ಹೇಳಿದರು. ಇದಕ್ಕೂ ಮುನ್ನ ಕಿಂಗ್ಸ್ ಇಲೆವೆನ್ ಪಂಜಾಬ್ 153 ರನ್ಗಳನ್ನು ಗಳಿಸುವಲ್ಲಿ ನೆರವಾಗಿದ್ದ ದೀಪಕ್ ಹೂಡಾ ಅಜೇಯ 61 ರನ್ಗಳನ್ನು ಗಳಿಸಿದ್ದರು. ದೀಪಕ್ ಕೊನೆಯ ಓವರ್ಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು. "ಇದು ಬ್ಯಾಟಿಂಗ್ ಮಾಡಲು ಉತ್ತಮ ವಿಕೆಟ್ ಆಗಿತ್ತು, ನಮಗೆ ಅತ್ಯುತ್ತಮ ಜತೆಯಾಟ ಬರಲಿಲ್ಲ. ಪವರ್ಪ್ಲೇನಲ್ಲಿ 50 ರನ್ಗಳ ಜತೆಯಾಟದ ಬಳಿಕ ಈ ಮೊತ್ತವನ್ನು ದೊಡ್ಡ ಮೊತ್ತವನ್ನಾಗಿ ಬದಲಾಯಿಸಲು ಸಾಧ್ಯವಾಗಲಿಲ್ಲ. 180 ರಿಂದ 190 ರನ್ಗಳು ಭವಿಷ್ಯ ಉತ್ತಮ ಮೊತ್ತವಾಗಿತ್ತು. ದೀಪಕ್ ಹೂಡಾ ಚೆನ್ನಾಗಿ ಬ್ಯಾಟಿಂಗ್ ಮಾಡಿದರು. ಬ್ಯಾಟಿಂಗ್ ಕ್ರಮಾಂಕ ಸರಿಯಿಲ್ಲ ಎಂದು ಹೇಳುವುದಿಲ್ಲ, ಏಕೆಂದರೆ ಈ ಹಿಂದಿನ ಪಂದ್ಯಗಳಲ್ಲಿ ಇದೇ ಕ್ರಮಾಂಕದಲ್ಲಿ ದೊಡ್ಡ-ದೊಡ್ಡ ಮೊತ್ತಗಳನ್ನು ಕಲೆ ಹಾಕಿದ್ದೇವೆ," ಎಂದರು. "ಇದು ನಮಗೆ ತುಂಬಾ ಮುಖ್ಯವಾದ ಪಂದ್ಯವಾಗಿತ್ತು. ಒತ್ತಡವನ್ನು ನಾವು ಸರಿಯಾಗಿ ನಿಯಂತ್ರಿಸಲಿಲ್ಲ. ಸರಿಯಾದ ಜತೆಯಾಟಗಳು ನಮಗೆ ಸಿಗಲಿಲ್ಲ. ಅಗ್ರ ಕ್ರಮಾಂಕದಲ್ಲಿ ಒಂದು ಜೋಡಿಯಿಂದ 70 ರಿಂದ 80 ರನ್ಗಳನ್ನು ಕಲೆ ಹಾಕಿದ್ದರೆ ಚೆನ್ನಾಗಿರುತ್ತಿತ್ತು, ಆದರೆ ಸಾಧ್ಯವಾಗಲಿಲ್ಲ," ಎಂದು ಹೇಳಿದರು. "ಈ ಪಂದ್ಯದ ಗೆಲುವು ನಮಗೆ ಅಗತ್ಯವಾಗಿತ್ತು, ಹಾಗಾಗಿ ಹೆಚ್ಚಿನ ಬ್ಯಾಟಿಂಗ್ ಬಲದಿಂದ ಕಣಕ್ಕೆ ಇಳಿಯಲಾಗಿತ್ತು. ದೀಪಕ್ ಬ್ಯಾಟಿಂಗ್ ನಿಜಕ್ಕೂ ಚೆನ್ನಾಗಿತ್ತು. ಎದುರಾಳಿಗೆ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು. ಅವರು ನಮ್ಮಲ್ಲಿ ನಿರೀಕ್ಷೆಯನ್ನು ಮೂಡಿಸಿದರು. ತಂಡದ ಯಶಸ್ಸಿಗೆ ಕಾರಣರಾದ ಎಲ್ಲಾ ಆಟಗಾರರ ಬಗ್ಗೆ ತುಂಬಾ ಖುಷಿಯಾಗುತ್ತಿದೆ," ಎಂದು ಹೇಳುವ ಮೂಲಕ ಕೆ.ಎಲ್ ರಾಹುಲ್ 13ನೇ ಆವೃತ್ತಿಗೆ ಗುಡ್ಬೈ ಹೇಳಿದರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2TKWtb6