ಬೆಂಗಳೂರು: ಕೆಎಸ್ಆರ್ಪಿ, ಕಾನ್ಸ್ಟೆಬಲ್ ಹುದ್ದೆಗೆ ಲಿಖಿತ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಲಕ್ಷಾಂತರ ರೂ. ಶುಲ್ಕ ನಿಗದಿಪಡಿಸಿದ್ದು, ಅಭ್ಯರ್ಥಿಗಳಿಂದ ಮುಂಗಡವಾಗಿ 2.50 ಲಕ್ಷ ರೂ. ಪಡೆದಿರುವುದು ಬೆಳಕಿಗೆ ಬಂದಿದೆ. ಬಸವನಗುಡಿ ಪರೀಕ್ಷಾ ಕೇಂದ್ರದಲ್ಲಿ ಬೇರೆ ಅಭ್ಯರ್ಥಿ ಪರವಾಗಿ ಬರೆದು ಹೊರ ಬಂದಾಗ ಸಿಕ್ಕಿಬಿದ್ದ ಲಕ್ಷ್ಮಣ ಪರಣ್ಣನವರ್ ಮತ್ತು ಸೋಮಯ್ಯನನ್ನು ವಿಚಾರಣೆ ನಡೆಸಿದಾಗ ಆರೋಪಿ ಲಕ್ಷ್ಮಣನೇ ಈ ಜಾಲದ ಪ್ರಮುಖ ಸೂತ್ರದಾರ ಆಗಿರುವುದು ಗೊತ್ತಾಗಿದೆ. ಅಭ್ಯರ್ಥಿಗಳ ಪರವಾಗಿ ಪರೀಕ್ಷೆಗೆ ಕುಳಿತುಕೊಳ್ಳಲು ಮುಂಗಡವಾಗಿ ಎರಡೂವರೆ ಲಕ್ಷ ರೂ.ಗಳನ್ನು ಲಕ್ಷ್ಮಣ ಪಡೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಹಣ ಬ್ಯಾಂಕ್ ಮೂಲಕವೇ ಈತನ ಖಾತೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು. ಪರೀಕ್ಷೆ ಬರೆಯುವುದೇ ವೃತ್ತಿ! ಬೆಂಗಳೂರಿನಲ್ಲಿ ಆರು ಮಂದಿ ಆರೋಪಿಗಳು, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಬಂಧಿತರಾಗಿರುವ ನಕಲಿ ಪರೀಕ್ಷಾರ್ಥಿಗಳ ಜತೆ ಲಕ್ಷ್ಮಣ ನಂಟು ಹೊಂದಿದ್ದಾನೆ. ಈತನ ಜತೆಗೆ ಬೇರೆ ಯಾರ್ಯಾರು ಸಂಪರ್ಕದಲ್ಲಿದ್ದಾರೆ ಮತ್ತು ಇದೇ ರೀತಿ ಇನ್ನೂ ಯಾರ್ಯಾರು ಪರೀಕ್ಷೆ ಬರೆದಿದ್ದಾರೆ ಎಂಬುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಸಿಕ್ಕಿ ಬೀಳದಂತೆ ಸಾಕಷ್ಟು ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿ, ಪರೀಕ್ಷೆ ಬರೆಯುವ ವ್ಯವಸ್ಥಿತ ಜಾಲದ ಕುರಿತು ವಿವರವಾದ ತನಿಖೆ ನಡೆಸಲಾಗುವುದು ಎಂದು ಡಿಸಿಪಿ ತಿಳಿಸಿದರು.
from India & World News in Kannada | VK Polls https://ift.tt/3l43TBE