ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ: ಹಾರಾಡುತ್ತಿದೆ ಭಾರತ!

ಇಂದಿನಿಂದ ದೇಶದಾದ್ಯಂತ ದೇಶೀಯ ವಿಮಾನ ಸಂಚಾರ ಪುನರಾರಂಭಗೊಂಡಿದೆ. ದೇಶದ ಎಲ್ಲಾ ಪ್ರಮುಖ ನಗರಗಳ ವಿಮಾನ ನಿಲ್ದಾಣಗಳಲ್ಲಿ ಚಟುವಟಿಕೆಗಳು ತೀವ್ರಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ದೇಶೀಯ ವಿಮಾನ ಸಂಚಾರ ಆರಂಭಗೊಂಡಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಹೇರಲಾಗಿರುವ ಸರಣಿ ಲಾಕ್‌ಡೌನ್‌ಗಳ ಪರಿಣಾಮವಾಗಿ ದೇಶದಾದ್ಯಂತ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಆದರೆ ಲಾಕ್‌ಡೌನ್ 4.0ದ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಿರುವುದರಿಂದ ಇದೀಗ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅದರಂತೆ ದೇಶದ ಎಲ್ಲಾ ಪ್ರಮುಖ ವಿಮಾನಯಾನ ಸಂಸ್ಥೆಗಳು ಇಂದಿನಿಂದ ಹಾರಾಟ ಆರಂಭಿಸಿವೆ. ಸರಣಿ ಲಾಕ್‌ಡೌನ್‌ನಿಂದಾಗಿ ದೇಶದ ವಾಯುಯಾನ ಕ್ಷೇತ್ರ ಭಾರೀ ನಷ್ಟ ಅನುಭವಿಸುತ್ತಿದೆ. ಎರಡು ತಿಂಗಳಿಗೂ ಅಧಿಕ ಕಾಲ ಹಾರಾಟವಿಲ್ಲದೇ ಆರ್ಥಿಕ ನಷ್ಟ ಅನುಭವಿಸಿರುವ ವಿಮಾನಯಾನ ಕ್ಷೇತ್ರಕ್ಕೆ, ದೇಶೀಯ ವಿಮಾನ ಹಾರಟಕ್ಕೆ ಅನುಮತಿ ನೀಡುವ ಮೂಲಕ ಕೇಂದ್ರ ಸರ್ಕಾರ ಹೊಸ ಚೈತನ್ಯ ತುಂಬಲು ಪ್ರಯತ್ನಿಸಿದೆ. ಹಾಗಾದರೆ ದೇಶದಾದ್ಯಂತ ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ ಇಂದಿನ ಚಟುವಟಿಕೆಯತ್ತ ಗಮನಹರಿಸಿದರೆ...

ರಾಷ್ಟ್ರ ರಾಜಧಾನಿ ನವದೆಹಲಿ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದೇಶೀಯ ವಿಮಾನ ಸಂಚಾರಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಯಿತು. ಬೆಳಗ್ಗೆ 4:45ಕ್ಕೆ ಮೊದಲ ವಿಮಾನ ದೆಹಲಿಯಿಂದ ನಿರ್ಗಮಿಸಿದರೆ, ಬೆಳಗ್ಗೆ 7:45ಕ್ಕೆ ಮೊದಲ ವಿಮಾನ ಆಗಮಿಸಿತು.

ಸೋಮವಾರದಿಂದ ದೇಶಾದ್ಯಂತ ವಿಮಾನ ಸಂಚಾರ ಪುನಾರಂಭ: ಊಟ, ತಿಂಡಿ ಸಿಗಲ್ಲ

ವಿಮಾನ ನಿಲ್ದಾಣಗಳಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಲ್ಲದೇ, ವಿಮಾನದಲ್ಲೂ ಪ್ರಯಾಣಿಕರು ಹಾಗೂ ಸಿಬ್ಬಂದಿಗೆ ಸೂಕ್ತ ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಲಾಗಿತ್ತು. ಅದರಂತೆ ವಿಮಾನದ ಸಿಬ್ಬಂದಿ ಪಿಪಿಇ ಉಡುಪು ಧರಿಸಿದ್ದು ಗಮನ ಸೆಳೆಯಿತು. ಜೊತೆಗೆ ಪ್ರಯಣಿಕರಿಗೆ ಫೇಸ್ ಶೀಲ್ಡ್ಸ್‌ಗಳನ್ನು ನೀಡಲಾಗಿತ್ತು.

ಅದರಂತೆ ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲೂ ದೇಶೀಯ ವಿಮಾನ ಸಂಚಾರ ಆರಂಭಗೊಂಡಿದೆ. ದೇಶದಲ್ಲೇ ಅತಿಹೆಚ್ಚು ಕೊರೊನಾ ವೈರಸ್ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ವಿಮಾನ ಸಂಚಾರಕ್ಕೆ ಅನುಮತಿ ನೀಡುವುದಿಲ್ಲ ಎಂದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಮೊದಲು ಹೇಳಿದ್ದರು.

ಆದರೆ ಕೇಂದ್ರ ವಿಮಾನಯಾನ ಸಚಿವರೊಂದಿಗೆ ಮಾತನಾಡಿದ ಬಳಿಕ ರಾಜಧಾನಿ ಮುಂಬೈನಿಂದ ದಿನಕ್ಕೆ 25 ವಿಮಾನಗಳ ಆಗಮನ ಮತ್ತು ನಿರ್ಗಮನಕ್ಕೆ ಉದ್ಧವ್ ಠಾಕ್ರೆ ಅನುಮತಿ ನೀಡಿದರು. ಈ ಹಿನ್ನೆಲೆಯಲ್ಲಿ ಮುಂಬೈನ ಛತ್ರಪತಿ ಶೀವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಚಟುವಟಿಕೆಗಳು ಆರಂಭಗೊಂಡಿವೆ.

ಒಂದೇ ಗಂಟೆಯಲ್ಲಿ ಯು-ಟರ್ನ್: 25 ವಿಮಾನ ಹಾರಾಟಕ್ಕೆ ಸೈ ಎಂದ ಉದ್ಧವ್!

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಕಟಟುನಿಟ್ಟಾಗಿ ಪಾಲಿಸುತ್ತಾ ಸಿಬ್ಬಂದಿ ಹಾಗೂ ಪ್ರಯಾಣಿಕರು ವಿಮಾನ ಸಂಚಾರ ಕೈಗೊಂಡರು.

ಇನ್ನು ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಿದ ಬಳಿಕ ರಾಜ್ಯ ರಾಜಧಾನಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಚಟುವಟಿಕೆಗಳು ಆರಂಭಗೊಂಡಿವೆ. ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್‌ಗೆ ಗುರಿಪಡಿಸಲಾಗುತ್ತಿದ್ದು, ಸಿಬ್ಬಂದಿಗೆ ಸಂಪೂರ್ಣ ಪಿಪಿಇ ಉಡುಪು ಹಾಗೂ ಪ್ರಯಾಣಿಕರಿಗೆ ಮಾಸ್ಕ್ ಶೀಲ್ಡ್ಸ್‌ಗಳನ್ನು ವಿತರಿಸಲಾಗಿದೆ.

ಮೇ 25ರಿಂದ ದೇಶೀಯ ವಿಮಾನ ಸಂಚಾರ ಆರಂಭ: ಕೇಂದ್ರದ ಘೋಷಣೆ!

ಈ ಮಧ್ಯೆ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಡಬೇಕಿದ್ದ ವಿಮಾನವೊಂದು ಹಾರಾಟವನ್ನು ಏಕಾಏಕಿ ರದ್ದುಗೊಳಿಸಿದ್ದು, ಪ್ರಯಾಣಿಕರ ಅಸಮಾಧಾನಕ್ಕೆ ಕಾರಣವಾದ ಘಟನೆಯೂ ನಡೆದಿದೆ. ಯಾವುದೇ ಮುನ್ಸೂಚನೆ ನೀಡದೇ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದ್ದು, ಇದನ್ನರಿಯದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಏಕಾಏಕಿ ವಿಮಾನ ಸಂಚಾರ ರದ್ದುಗೊಳಿಸಿದ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನು ಅತಿಹೆಚ್ಚು ಕೊರೊನಾ ವೈರಸ್ ಪ್ರಕರಣ ದಾಖಲಾಗಿರುವ ಎರಡನೇ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿರುವ ತಮಿಳುನಾಡಿನಲ್ಲೂ ದೇಶೀಯ ವಿಮಾನ ಸಂಚಾರ ಆರಂಭಗೊಂಡಿದೆ. ಬೆಳಗ್ಗೆಯಿಂದಲೇ ಪ್ರಯಾಣಿಕರು ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದು ಕಂಡುಬಂದಿತು.

ತಮಿಳುನಾಡು ಕೂಡ ದಿನವೊಂದಕ್ಕೆ ಕೇವಲ 25 ವಿಮಾನಗಳ ಹಾರಾಟಕ್ಕೆ ಮಾತ್ರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಬೇಗನೇ ವಿಮಾನ ನಿಲ್ದಾಣಕ್ಕೆ ಬಂದು ತಮ್ಮ ನಿಗದಿತ ವಿಮಾನಗಳನ್ನು ಏರಿ ಪ್ರಯಾಣ ಬೆಳೆಸಿದರು.

ಮುಂದಿನ 3 ತಿಂಗಳುಗಳವರೆಗೆ ವಿಮಾನಗಳ ಕನಿಷ್ಠ ಹಾಗೂ ಗರಿಷ್ಠ ದರ ನಿರ್ಧರಿಸಲಿದೆ ಕೇಂದ್ರ!

ವಿಮಾನ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಹೀಗೆ ದೇಶದ ಎಲ್ಲಾ ಪ್ರಮುಖ ನಗರಗಳಲ್ಲಿ ದೇಶೀಯ ವಿಮಾನ ಸಂಚಾರ ಪುನರಾರಂಭಗೊಂಡಿದ್ದು, ಕೇಂದ್ರದ ಮಾರ್ಗಸೂಚಿಗಳನ್ನು ಅನುಸರಿಸಿ ವಿಮಾನಗಳ ಹಾರಾಟಕ್ಕೆ ಮುನ್ನುಡಿ ಬರೆಯಲಾಗಿದೆ.



from India & World News in Kannada | VK Polls https://vijaykarnataka.com/news/india/india-flies-again-as-domestic-flights-service-resume-across-the-country/articleshow/75964182.cms

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...