- ಎನ್.ಪ್ರಸನ್ನಕುಮಾರ್, ಬೆಂಗಳೂರು ಗ್ರಾಮಾಂತರ ಲಾಕ್ಡೌನ್ನಿಂದ ಸಂಕಷ್ಟದಲ್ಲಿರುವ ಆಟೊ, ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನೆರವು ನೀಡುವುದಾಗಿ ರಾಜ್ಯ ಸರಕಾರ ತಲಾ ಐದು ಸಾವಿರ ರೂ. ಪರಿಹಾರ ಘೋಷಿಸಿದೆ. ಸರಕಾರದ ಸೇವಾಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬೇಕಾಗಿದ್ದು, ಸದಾ ಸರ್ವರ್ ಸಮಸ್ಯೆಯಿಂದಾಗಿ ಅರ್ಜಿ ಭರ್ತಿ ಮಾಡಲಾಗದೆ ಚಾಲಕರು ಪರದಾಡುವಂತಾಗಿದೆ. ಮತ್ತೊಂದೆಡೆ ಸರಕಾರದ ಸ್ಪಷ್ಟ ಮಾರ್ಗಸೂಚಿ ಇಲ್ಲದೇ ಅರ್ಹರಿಗೆ ಸೌಲಭ್ಯ ಸಿಗದಂತಾಗಿದೆ. ಸೇವಾಸಿಂಧು ವೆಬ್ಸೈಟ್ನಲ್ಲಿ ಅರ್ಜಿ ಅಪ್ಲೋಡ್ ಮಾಡುವಾಗ ಪ್ರತಿ ಹಂತದಲ್ಲೂ ತಾಂತ್ರಿಕ ಸಮಸ್ಯೆಯಿಂದಾಗಿ 'ಎರರ್' ತೋರಿಸುತ್ತಿದೆ. ಆಧಾರ್ ಸಂಖ್ಯೆ, ಚಾಲನಾ ಪರವಾನಗಿ ಸಂಖ್ಯೆ ಎಂಟ್ರಿ ಮಾಡಿದಾಗ ಎರರ್ ಬರುತ್ತಿದೆ. ಕೆಲವೊಮ್ಮೆ ಮೊಬೈಲ್ಗೆ ಒಟಿಪಿಯೇ ಬರುತ್ತಿಲ್ಲ. ಮಾಹಿತಿ ಅಪ್ಲೋಡ್ ಮಾಡುವಷ್ಟರಲ್ಲಿ ವೆಬ್ಸೈಟ್ ಸ್ಥಗಿತಗೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿದೆ. ಇತರ ಮಾಹಿತಿಯನ್ನು ಪಡೆಯಲು ಸೇವಾ ಸಿಂಧುಗೆ ಲಾಗ್ಇನ್ ಆಗಲು ಪ್ರಯತ್ನಿಸಿದರೂ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಬೆಂಗಳೂರು ಬಿಟ್ಟವರಿಗೆ ನೆಟ್ ಪ್ರಾಬ್ಲಂ ಲಾಕ್ಡೌನ್ ಜಾರಿಯಾದ ಬಳಿಕ ಬಹುತೇಕ ಚಾಲಕರು ಬೆಂಗಳೂರು ಬಿಟ್ಟು ಊರು ಸೇರಿದ್ದಾರೆ. ಹಳ್ಳಿಯಲ್ಲಿ ಮೊಬೈಲ್ನಲ್ಲೇ ಅರ್ಜಿ ಅಪ್ ಲೋಡ್ ಮಾಡಬೇಕಾಗಿದೆ. ಗುಡ್ಡಗಾಡು ಸೇರಿದಂತೆ ಕುಗ್ರಾಮ ಸೇರಿರುವರುವ ಚಾಲಕರು ಮೊಬೈಲ್ನಿಂದಲೇ ಅರ್ಜಿ ಸಲ್ಲಿಸಬೇಕಿದೆ. ನೆಟ್ವರ್ಕ್ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ತಕ್ಷಣ ಈ ಬಗ್ಗೆ ರಾಜ್ಯ ಸರಕಾರ ಸೂಕ್ತ ಕ್ರಮ ಕೈಗೊಂಡು ಜನಸಾಮಾನ್ಯರಿಗೆ ಸಹಾಯ ಮಾಡಬೇಕಿದೆ. ಹಳ್ಳಿ ಸೇರಿರುವ ಚಾಲಕರೂ ಸರಾಗವಾಗಿ ಸೇವಾಸಿಂಧು ಮೂಲಕ ಪರಿಹಾರ ಧನಕ್ಕೆ ಅರ್ಜಿ ಸಲ್ಲಿಸಲು ಅನುಕೂಲ ಮಾಡಿಕೊಡಬೇಕಿದೆ.
from India & World News in Kannada | VK Polls https://ift.tt/2ZDs2YO