- ರವಿಕುಮಾರ ಬೆಟ್ಟದಪುರ, ಬೆಂಗಳೂರು ಬೆಳೆ ನಷ್ಟ ಮತ್ತು ಪ್ರಕೃತಿ ವಿಕೋಪದಿಂದ ಹಾನಿಯಾದ ಬೆಳೆಗೆ ಪರಿಹಾರ ನೀಡಬೇಕಾದರೆ ಅವರು ನಿರ್ದಿಷ್ಟ ಬೆಳೆಯನ್ನು ಬೆಳೆಯುತ್ತಿದ್ದ ಬಗ್ಗೆ ಅಧಿಕಾರಿಗಳು ದೃಢೀಕರಣ ನೀಡಬೇಕು. ಗ್ರಾಮ ಲೆಕ್ಕಿಗರು, ಸಹಾಯಕ ತೋಟಗಾರಿಕಾ ಅಧಿಕಾರಿ ಸ್ಥಳ ಪರಿಶೀಲನೆ ನಡೆಸಿ ವರದಿ ನೀಡಬೇಕಾಗುತ್ತದೆ. ಈ ಭೇಟಿಗಾಗಿ ಒಬ್ಬೊಬ್ಬ ರೈತರಿಂದ ತಲಾ 5000 ರೂ. ವಸೂಲಿ ಮಾಡಲಾಗುತ್ತಿದೆ. ಚಾಮರಾಜ ನಗರ ಜಿಲ್ಲೆಯಲ್ಲಿ ಸಾವಿರಾರು ರೈತರಿಂದ ಈಗಾಗಲೇ ಹಣ ಸಂಗ್ರಹ ನಡೆದಿದೆ. ಕೋಲಾರ, ಬೆಂಗಳೂರು, ಗ್ರಾಮಾಂತರ, ಮಂಡ್ಯ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿಅರ್ಜಿ ಸಲ್ಲಿಕೆ ಹಂತ ದಾಟಿದ್ದು, ಅಲ್ಲೆಲ್ಲ ಹಣ ಸಂಗ್ರಹದ ಆರೋಪ ಕೇಳಿಬಂದಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಮಾರುಕಟ್ಟೆ ಇಲ್ಲದೆ ನಷ್ಟ ಅನುಭವಿಸಿದ ಹೂವು, ಹಣ್ಣು, ತರಕಾರಿ ಬೆಳೆಗಾರರು, ಮೆಕ್ಕೆಜೋಳ ರೈತರಿಗೆ ರಾಜ್ಯ ಸರಕಾರ ಪರಿಹಾರ ಪ್ರಕಟಿಸಿದೆ. ಆಟೋ, ಟ್ಯಾಕ್ಸಿ ಚಾಲಕರು, ಕಟ್ಟಡ ಕಾರ್ಮಿಕರಿಗೂ ಹಣ ಬಿಡುಗಡೆಗೆ ಮುಂದಾಗಿ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಿದೆ. ಪ್ರತಿಯೊಂದರಲ್ಲೂ ದಲ್ಲಾಳಿಗಳು ಎಲ್ಲ ಪ್ರಕ್ರಿಯೆ ಮಾಡಿಕೊಡುವುದಾಗಿ 500 ರೂ. ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಆದರೆ, ಬೆಳೆಗಳಲ್ಲಿ ಅಧಿಕಾರಿಗಳೂ ದಲ್ಲಾಳಿಗಳ ಜತೆ ಸೇರಿದ್ದು ಆತಂಕ ಮೂಡಿಸಿದೆ. ಎಲ್ಲದಕ್ಕೂ ಹಣ ಕೊಡಬೇಕು: ಕೊರೊನಾ ಪರಿಹಾರವೊಂದೇ ಅಲ್ಲ, ಸಾಮಾನ್ಯ ಪ್ರಕೃತಿ ವಿಕೋಪದಿಂದ ಉಂಟಾಗುವ ನಷ್ಟಕ್ಕೆ ಪರಿಹಾರ ನೀಡುವಾಗಲೂ ಸಮೀಕ್ಷೆ ಹೆಸರಿನಲ್ಲಿ ಹಣ ವಸೂಲು ಮಾಡಲಾಗುತ್ತದೆ. ಇತ್ತೀಚೆಗೆ ಸುರಿದ ಮುಂಗಾರುಪೂರ್ವ ಬಿರುಗಾಳಿ ಮಳೆಯಿಂದ ಬಾಳೆ, ಟೊಮೋಟೊ, ತೆಂಗಿನ ಮರ, ಸೋಲಾರ್ ಬೀನ್ಸ್, ಬಳ್ಳಿಯ ಬೆಳೆಗಳು ಹಾನಿಗೊಳಗಾಗಿವೆ. ಇದನ್ನು ವರದಿ ಮಾಡುವಾಗಲೂ ದಲ್ಲಾಳಿಗಳ ಮೂಲಕ ಹಣ ವಸೂಲಿ ಮಾಡಲಾಗಿದೆ ಎಂದು ರೈತರು ದೂರಿದ್ದಾರೆ. ಯಾವುದಕ್ಕೆ ಎಷ್ಟು ಪರಿಹಾರ? ಹಣ್ಣು, ತರಕಾರಿ 15000 ರೂ. (ಒಂದು ಹೆಕ್ಟೇರ್ಗೆ ಪರಿಹಾರ) ಮೆಕ್ಕೆಜೋಳ 5000 ರೂ. ಅರ್ಜಿ ಸಲ್ಲಿಕೆ, ಪರಿಶೀಲನೆ ಹೇಗೆ? - ಹಣ್ಣು, ಹೂವು, ತರಕಾರಿ ಬೆಳೆದವರು ಹೋಬಳಿ ಮಟ್ಟದಲ್ಲಿ ಅರ್ಜಿ ಸಲ್ಲಿಸಬೇಕು. - ವಿಎ, ಆರ್ಐ, ಸಹಾಯಕ ಕೃಷಿ ನಿರ್ದೇಶಕರು, ಕೃಷಿ ಅಧಿಕಾರಿಗಳನ್ನು ಒಳಗೊಂಡ ತಂಡ ಪರಿಶೀಲಿಸಿ ಅನುಮೋದನೆ ನೀಡಲಿದೆ. - ತೋಟಗಾರಿಕೆ ಅಧಿಕಾರಿಗಳು ಕ್ಷೇತ್ರ ಸಮೀಕ್ಷೆಯ ಮೂಲಕ ಬೆಳೆ ನಷ್ಟವನ್ನು ದೃಢೀಕರಿಸುತ್ತಾರೆ. ರೈತರ ಪ್ರತಿಯೊಂದು ಬೆಳೆ ದೃಢೀಕರಣ ಪತ್ರವನ್ನು ಗ್ರಾಮ ಲೆಕ್ಕಿಗರೇ ನೀಡಬೇಕು. ಹಣ ಕೊಡದಿದ್ದರೆ ನಮ್ಮ ಬೆಳೆ ವರದಿಯನ್ನು ಸರಕಾರಕ್ಕೆ ಸಲ್ಲಿಸುವುದಿಲ್ಲ. - ಕುಮಾರಸ್ವಾಮಿ, ಚಾಮರಾಜನಗರದ ರೈತ ಹೂ ಬೆಳೆಗಾರರ ವರದಿ ಮಾಡಲಾಗುತ್ತಿದೆ. ಹಣ ವಸೂಲಿ ಮಾಡುವ ವಿಚಾರ ನನಗೆ ತಿಳಿದಿರಲಿಲ್ಲ. ಇದನ್ನು ತಹಸೀಲ್ದಾರ್ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. - ಶಿವಪ್ರಸಾದ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ಚಾಮರಾಜನಗರ
from India & World News in Kannada | VK Polls https://ift.tt/3ebdJyy