ಹೊಸ ದಿಲ್ಲಿ: ಉತ್ತರ ಭಾರತದ ಹಲವು ಕಡೆ ಭಾನುವಾರ ಉಷ್ಣಾಂಶ 45 ಡಿಗ್ರಿ ಸೆಲ್ಶಿಯಸ್ ದಾಟಿದ್ದು, ಮುಂದಿನ 2-3 ದಿನದಲ್ಲಿ 47 ಡಿಗ್ರಿಗೆ ಏರಬಹುದು ಎಂದು ಹವಾಮಾನ ಇಲಾಖೆ ಹೇಳಿದೆ. ಇದೇ ವೇಳೆ, ದಿಲ್ಲಿ, ಪಂಜಾಬ್, ಹರಿಯಾಣ, ಚಂಡೀಗಢ ಮತ್ತು ರಾಜಸ್ಥಾನಗಳಲ್ಲಿ 'ರೆಡ್' ಅಲರ್ಟ್ ಘೋಷಿಸಿದ್ದು, ಮಧ್ಯಾಹ್ನ 1 ರಿಂದ ಸಂಜೆ 5 ಗಂಟೆವರೆಗೆ ಮನೆಗಳಿಂದ ಹೊರ ಬರದಂತೆ ಈ ಪ್ರದೇಶದ ಜನರಿಗೆ ಸೂಚಿಸಿದೆ. ಬೇಸಿಗೆ ಕಾಲದಲ್ಲಿ ಹೀಗೆ ಉಷ್ಣ ಮಾರುತಕ್ಕಾಗಿ ರೆಡ್ ಅಲರ್ಟ್ ನೀಡಿರುವುದು ಇದೇ ಮೊದಲು ಎಂದು ಹವಾಮಾನ ಇಲಾಖೆ ಪಾದೇಶಿಕ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ''ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇ ಮಧ್ಯಾವಧಿವರೆಗೂ ಮಳೆಯಾಗುವುದರಿಂದ ಉತ್ತರ ಮತ್ತು ಮಧ್ಯ ಭಾರತದಲ್ಲಿ ಈ ಸಮಯದಲ್ಲಿ ಉಷ್ಣಾಂಶ ಇಷ್ಟೊಂದು ಏರಿಕೆಯಾಗುವುದಿಲ್ಲ. ಆದರೆ ಈ ಬಾರಿ ಪರಿಸ್ಥಿತಿ ಸಂಪೂರ್ಣ ಭಿನ್ನವಾಗಿದೆ'' ಎಂದು ಅವರ ಹೇಳಿದ್ದಾರೆ. ಕರ್ನಾಟಕಕ್ಕೂ ಬಿಸಿ: ಕರ್ನಾಟಕದ ಒಳನಾಡು, ಆಂಧ್ರದ ರಾಯಲಸೀಮೆ, ಛಿತ್ತೀಸ್ಗಢ, ಒಡಿಶಾ, ಗುಜರಾತ್ನ ಹಲವು ಭಾಗಗಳಲ್ಲೂ 3-4 ದಿನದಲ್ಲಿ ಉಷ್ಣತೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ. ಗರಿಷ್ಠ ಉಷ್ಣಾಂಶ 40 ಡಿಗ್ರಿ ಸೆಲ್ಶಿಯಸ್ಗಿಂತ ಹೆಚ್ಚಾದಾಗ ಮತ್ತು ಸಾಮಾನ್ಯ ಉಷ್ಣಾಂಶ ಸಾಮಾನ್ಯಕ್ಕಿಂತಲೂ 4.5 ರಿಂದ 6.4 ಡಿಗ್ರಿ ಸೆಲ್ಶಿಯಸ್ವೆಗೂ ಏರಿಕೆಯಾದಾಗ ಅದನ್ನು ಎಂದು ಪರಿಗಣಿಸಲಾಗುತ್ತದೆ. ಮೇ 28ರ ಬಳಿಕ ಪರಿಸ್ಥಿತಿ ಸುಧಾರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆತಂಕ ತಂದ ಭಾರಿ ಮಿಡತೆ ಉತ್ತರ ಪ್ರದೇಶದ ಝಾನ್ಸಿ ನಗರದ ಹೊರವಲಯದಲ್ಲಿ ಶನಿವಾರ ಸಂಜೆಯಿಂದ ಭಾರಿ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವ ಮಿಡತೆಗಳು ಆತಂಕ ಮೂಡಿಸಿವೆ. ವಿಷಯ ಗಮನಕ್ಕೆ ಬರುತ್ತಿದ್ದಂತೆಯೇ ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ, ರಾಸಾಯನಿಕ ಸಿಂಪಡಣೆ ಸೇರಿದಂತೆ ಅಗತ್ಯ ಕಾರ್ಯಾಚರಣೆಗೆ ಸನ್ನದ್ಧ ಸ್ಥಿತಿಯಲ್ಲಿ ಇರುವಂತೆ ಅಗ್ನಿಶಾಮಕ ದಳಕ್ಕೆ ನಿರ್ದೇಶನ ನೀಡಿದ್ದಾರೆ. ''ಸಾಮಾನ್ಯವಾಗಿ ಮಿಡತೆಗಳು ಹಸಿರು ಇರುವಲ್ಲಿಗೆ ಹೋಗುತ್ತವೆ. ಆದರೆ ಉತ್ತರ ಪ್ರದೇಶ ಸೇರಿದಂತೆ ದೇಶದ ಕೆಲವು ಕಡೆಗಳಲ್ಲಿ 2-3 ಕಿ.ಮೀವರೆಗೆ ಮಿಡತೆಗಳ ಹಾರಾಟ ಕಂಡುಬಂದಿದೆ. ಇಂತಹ ವಿದ್ಯಮಾನದ ಮೂಲ ರಾಜಸ್ಥಾನದ ಕೋಟಾ ಎನ್ನುವುದು ತಿಳಿದುಬಂದಿದೆ. ಭಾರಿ ಸಂಖ್ಯೆಯ ಮಿಡತೆಗಳು ಹೀಗೆ ದಿಢೀರ್ ಕಾಣಿಸಿಕೊಳ್ಳಲು ಏನು ಕಾರಣ ಎನ್ನುವುದು ತಿಳಿದುಬಂದಿಲ್ಲ'' ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಆತಂಕಗೊಂಡಿರುವ ಝಾನ್ಸಿ ಸುತ್ತಮುತ್ತಲಿನ ರೈತರು ರಾತ್ರೋರಾತ್ರಿ ಹೊಲಗಳಿಗೆ ಕೀಟನಾಶಕ ಸಿಂಪಡಿಸಿದ್ದಾರೆ.
from India & World News in Kannada | VK Polls https://ift.tt/36pdVHO