ಗೊಂದಲದಿಂದ ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ಥ, ಪ್ರಯಾಣಿಕರ ಪರದಾಟ

ಹೊಸದಿಲ್ಲಿ: ಲಾಕ್‌ಡೌನ್‌ನಿಂದ ಸ್ಥಗಿತವಾಗಿದ್ದ ವಿಮಾನ ಸಂಚಾರ 2 ತಿಂಗಳ ನಂತರ ಪ್ರಾರಂಭವಾಗಿದ್ದು, ಮೊದಲ ದಿನವೇ ಗೊಂದಲ ಹಾಗೂ ಅವ್ಯವಸ್ಥೆಯ ಕಾರಣದಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಮುಂಬೈ, ದೆಹಲಿ ಮತ್ತಿತರ ನಗರಗಳಲ್ಲಿ ಬಹಳಷ್ಟು ವಿಮಾನಗಳು ತಮ್ಮ ಸಂಚಾರವನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸಿದ್ದು, ಪ್ರಯಾಣಿಕರಿಗೆ ಯಾವುದೇ ಮಾಹಿತಿಯನ್ನು ಸಹ ನೀಡಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ 82 ವಿಮಾನಗಳು ಸಂಚಾರವನ್ನು ರದ್ದುಪಡಿಸಿದ್ದು, ಮುಂಬೈನಲ್ಲಿ ವಿಮಾನ ಪ್ರಯಾಣಕ್ಕೆ ಕೊನೆ ಕ್ಷಣದಲ್ಲಿ ಅನುಮತಿ ನೀಡಿದ್ದರಿಂದ ಗೊಂದಲ ಸೃಷ್ಟಿಯಾಗಿತ್ತು. ತಮಿಳುನಾಡು ಕೂಡ ವಿಮಾನಯಾನ ಸೇವೆ ನೀಡಲು ಸಜ್ಜಾಗಿದ್ದಿಲ್ಲ. ಆಂಫಾನ್‌ ಚಂಡಮಾರುತದಿಂದ ಕೊಲ್ಕತ್ತಾ ವಿಮಾನ ನಿಲ್ದಾಣ ಹಾನಿಗೊಳಗಾಗಿದ್ದರಿಂದ ಈಶಾನ್ಯ ಭಾರತದ ಅನೇಕ ನಗರಗಳಿಗೆ ವಿಮಾನ ಸಂಚಾರ ಸಾಧ್ಯವಾಗಲಿಲ್ಲ. ಎಲ್ಲ ವಿಮಾನ ನಿಲ್ದಾಣದ ಮುಂದೆ ಪ್ರಯಾಣಿಕರ ಉದ್ದುದ್ದ ಕ್ಯೂ ಸಾಮಾನ್ಯವಾಗಿದ್ದರೆ, ವಿಮಾನ ಸಂಚಾರ ರದ್ದಾಗಿದ್ದರಿಂದ ಪ್ರಯಾಣಿಕರ ಸಪ್ಪೆ ಮುಖಗಳು ಎಲ್ಲ ಕಡೆ ಸಾಮಾನ್ಯವಾಗಿತ್ತು.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ 82 ವಿಮಾನಗಳು ಸಂಚಾರವನ್ನು ರದ್ದುಪಡಿಸಿವೆ. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ಕೊನರ ಕ್ಷಣದವರೆಗೂ ವಿಮಾನ ರದ್ದತಿ ಬಗ್ಗೆ ನಮಗೆ ಯಾವುದೇ ಮಾಹಿತಿಯನ್ನು ಅಧಿಕಾರಿಗಳು ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ, ರಾಜ್ಯಗಳು ಕೇಂದ್ರಕ್ಕೆ ತಿಳಿಸಿದಂತೆ ವಿಮಾನ ಸಂಚಾರವನ್ನು ಆರಂಭಿಸದಿರುವುದಕ್ಕೆ ಈ ಸಮಸ್ಯೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿ ವಿಮಾನ ನಿಲ್ದಾಣದಿಂದ ಇಂದು 125 ವಿಮಾನಗಳು ವಿವಿಧ ನಗರಗಳಿಗೆ ಸಂಚರಿಸಬೇಕಿದ್ದವು. ಇನ್ನು, ದೇಶದ ವಿವಿಧ ನಗರಗಳಿಂದ 118 ವಿಮಾನಗಳು ದೆಹಲಿಗೆ ಆಗಮಿಸಬೇಕಿತ್ತು.

ದೆಹಲಿ ತರಹದ ಸನ್ನಿವೇಶ ಮಹಾರಾಷ್ಟ್ರದ ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಕಂಡುಬಂದಿದ್ದು, ಅನೇಕ ವಿಮಾನಗಳು ಸಂಚಾರವನ್ನು ರದ್ದುಗೊಳಿಸಿದ ನಂತರ ಪ್ರಯಾಣಿಕರು ಏರ್‌ಪೋರ್ಟ್‌ ಹೊರಗಡೆ ನಿಂತಿರುವುದು ಕಾಣುತ್ತಿತ್ತು. ಪುಣೆಗೆ ಬೆಳಗ್ಗೆ 4.45ಕ್ಕೆ ದೆಹಲಿಯಿಂದ ಒಂದು ವಿಮಾನ ಸಂಚರಿಸಿದ್ದು, ಮುಂಬೈನಿಂದ ಬೆಳಗ್ಗೆ 6.45ಕ್ಕೆ ಬಿಹಾರದ ಪಾಟ್ನಾಗೆ ವಿಮಾನ ತೆರಳಿದೆ. ಮುಂಬೈ ವಿಮಾನ ನಿಲ್ದಾಣದಲ್ಲಿ ದಿನಕ್ಕೆ 50 ವಿಮಾನಗಳು ಕಾರ್ಯನಿರ್ವಹಿಸಲಿದ್ದು, 25 ಇಲ್ಲಿಂದ ಬೇರೆ ಕಡೆ ತೆರಳಿದರೆ, 25 ವಿಮಾನಗಳು ಬೇರೆ ಕಡೆಯಿಂದ ಮುಂಬೈಗೆ ಬರಲಿವೆ. ಆದರೆ, ಕೊನೆ ಕ್ಷಣದಲ್ಲಿ ಹಲವು ವಿಮಾನಗಳ ಸಂಚಾರ ರದ್ದುಗೊಂಡಿದೆ.

2 ತಿಂಗಳ ನಂತರ ದೇಶಿಯ ವಿಮಾನಯಾನ ಆರಂಭವಾಗಿದ್ದು, ಪ್ರಯಾಣಿಕರು ತಮ್ಮ ಊರಿನ ಕಡೆ, ಕೆಲಸದ ಸ್ಥಳದ ಕಡೆ ತೆರಳಲು ಟಿಕೆಟ್‌ ಬುಕ್‌ ಮಾಡಿ ಉತ್ಸುಕರಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆದರೆ, ಕೊನೆ ಕ್ಷಣದಲ್ಲಿ ವಿಮಾನ ಸಂಚಾರ ರದ್ದಾಗಿರುವುದರಿಂದ ಪ್ರಯಾಣಿಕರನ್ನು ಪರದಾಡುವಂತೆ ಮಾಡಿತು. ಮುಂಬೈ ನಿಲ್ದಾಣದಲ್ಲಿ ಕುಳಿತಿದ್ದ ಮಹಿಳೆಯೊಬ್ಬರು ಹೇಳುವಂತೆ ನಾವು ದೆಹಲಿಗೆ ತೆರಳಬೇಕಿತ್ತು. ಆದರೆ, ನಾವು ವಿಮಾನ ನಿಲ್ದಾಣಕ್ಕೆ ಬಂದ ನಂತರ ವಿಮಾನ ಸಂಚಾರ ರದ್ದಾಗಿದೆ ಎಂದು ಹೇಳಿದ್ದಾರೆ. ಗ್ರಾಹಕರ ಸೇವಾ ಪ್ರತಿನಿಧಿಗೆ ಸಂಪರ್ಕಿಸಿದರೆ, ಈ ರಾತ್ರಿ ವಿಮಾನ ಹೊರಡುತ್ತದೆ. ಟಿಕೆಟ್‌ನ್ನು ರಿಸೆಡ್ಯೂಲ್‌ ಮಾಡಿಕೊಡುತ್ತೇವೆ ಎನ್ನುತ್ತಾರೆ. ಆದರೆ, ಅದು ಖಚಿತವಲ್ಲ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮುಂಬೈನ ಡಿಪಾರ್ಚರ್‌ ಟರ್ಮಿನಲ್‌ನಲ್ಲಿ ಪ್ರಯಾಣಿಕರ ಬೃಹತ್‌ ಸಾಲು ಕಂಡುಬರುತ್ತಿತ್ತು. ಭದ್ರತಾ ಸಿಬ್ಬಂದಿ ಪ್ರತಿಯೊಬ್ಬರ ಥರ್ಮಲ್‌ ಸ್ಕ್ರೀನಿಂಗ್‌ ಮಾಡಿ. ಅವರ ಮೊಬೈಲ್‌ನಲ್ಲಿ ಆರೋಗ್ಯ ಸೇತು ಆಪ್‌ ಇದೆಯೋ ಇಲ್ಲ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದರಿಂದ ಬಹಳಷ್ಟು ನಿಧಾನವಾಗಿ ಪ್ರಯಾಣಿಕರ ಸಾಲು ಮುಂದಕ್ಕೆ ಹೋಗುತ್ತಿತ್ತು. ಮುಂಬೈನಲ್ಲಿ ವಿಮಾನ ಸಂಚಾರಕ್ಕೆ ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಒಪ್ಪಿಗೆ ನೀಡಿದ್ದರಿಂದ ಈ ಸಮಸ್ಯೆ ಸೃಷ್ಟಿಯಾಗಿತ್ತು. ಮುಂಬೈ ನಿಲ್ದಾಣದ ತರಹದಂತೆ ಪ್ರಯಾಣಿಕರ ಉದ್ದುದ್ದ ಸಾಲುಗಳು ದೇಶದ ಬಹುತೇಕ ವಿಮಾನ ನಿಲ್ದಾಣಗಳಲ್ಲಿ ಕಂಡುಬಂತು.

ಚೆನ್ನೈ ವಿಮಾನ ನಿಲ್ದಾಣದಲ್ಲಿಯೂ ಮುಂಬೈ, ದೆಹಲಿಯ ಸಮಸ್ಯೆಯೇ ಕಂಡುಬಂತು. ವಿಮಾನ ಸಂಚಾರ ರದ್ದಾಗಿದ್ದರಿಂದ ಪ್ರಯಾಣಿಕರು ಸಪ್ಪೆ ಮುಖ ಹಾಕಿಕೊಂಡಿದ್ದರು. ಇನ್ನು, ವಿಶ್ವನಾಥನ್‌ ಎಂಬುವವರು ಎಎನ್‌ಐಗೆ ಪ್ರತಿಕ್ರಿಯಿಸಿದ್ದು, ಲಾಕ್‌ಡೌನ್‌ನಿಂದ ಮಾರ್ಚ್‌ 15ರಿಂದ ತಮಿಳುನಾಡಿನಲ್ಲಿಯೇ ಸಿಕ್ಕಾಕಿಕೊಂಡಿದ್ದೇವೆ. ಕಳೆದ ರಾತ್ರಿ ಮುಂಬೈಗೆ ತೆರಳಲು ನಾಲ್ಕು ಟಿಕೆಟ್‌ ಬುಕ್‌ ಮಾಡಲಾಗಿತ್ತು. ಆದರೆ, ಇಲ್ಲಿಗೆ ಬಂದರ ನಮ್ಮ ವಿಮಾನ ಸಂಚಾರ ರದ್ಧಾಗಿರುವುದು ಗೊತ್ತಾಗಿದೆ. ಸಹಾಯ ಕೇಂದ್ರದಲ್ಲಿಯೂ ನಮಗೆ ಯಾರು ಉತ್ತರ ನೀಡುತ್ತಿಲ್ಲ. ಈಗ ನಾವೇನು ಮಾಡಬೇಕೆಂದು ಸಮಸ್ಯೆ ಹಂಚಿಕೊಂಡರು.

ಕೇವಲ ಪ್ರಮುಖ ನಗರಗಳಷ್ಟೇ ಅಲ್ಲದೇ ಈಶಾನ್ಯ ರಾಜ್ಯಗಳಲ್ಲಿಯೂ ವಿಮಾನ ಸಂಚಾರ ಅಸ್ತವ್ಯಸ್ಥಗೊಂಡಿತ್ತು. ಅಸ್ಸಾಂನ ಗುವಾಹಟಿ ಮತ್ತು ಮಣಿಪುರದ ಇಂಪಾಲ್‌ ವಿಮಾನ ನಿಲ್ದಾಣಗಳಿಗೆ ಮಾತ್ರ ವಿಮಾನ ನಿಲ್ದಾಣಗಳು ಆಗಮಿಸುತ್ತಿದ್ದವು. ಕೊಲ್ಕತ್ತಾ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡದೇ ಇರುವುದರಿಂದ ಅಗರ್ತಲಾ, ದಿಬ್ರುಗರ್‌, ಸಿಲ್ಚಾರ್‌, ಐಜ್ವಾಲ್‌ ಮತ್ತು ದಿಮಾಪುರ್‌ಗಳ ವಿಮಾನ ಸಂಚಾರ ರದ್ದಾಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಆಂಫಾನ್‌ನಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಹಾನಿಯುಂಟಾಗಿದ್ದು, ಪಶ್ಚಿಮ ಬಂಗಾಳ ಸರಕಾರ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ಹೆಚ್ಚಿನ ಸಮಯ ಕೇಳಿದೆ. ಬೆಂಗಳೂರಿನಲ್ಲಿಯೂ ರಾತ್ರಿ ಪಾಳಿಯ ವಿಮಾನಗಳ ಸಂಚಾರವನ್ನು ರದ್ದು ಮಾಡಲಾಗಿದೆ.



from India & World News in Kannada | VK Polls https://ift.tt/3dd0blO

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...