ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ನಡುವೆ ಸಡಿಲಗೊಳಿಸಿದರೂ ಭಾನುವಾರ ಒಂದು ದಿನ ಕರ್ಫ್ಯೂ ಮಾದರಿಯ ಸಂಪೂರ್ಣ ಲಾಕ್ಡೌನ್ನನ್ನು ಸರ್ಕಾರ ಜಾರಿಗೊಳಿಸಿದೆ. ಆದರೆ ಒಂದು ದಿನದ ಲಾಕ್ಡೌನ್ನಿಂದಾಗುವ ಪ್ರಯೋಜನಗಳೇನು ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತದೆ. ವಾರದ ಆರು ದಿನಗಳನ್ನು ಸಡಿಲಗೊಳಿಸಿ ಭಾನುವಾರ ಮಾತ್ರ ಲಾಕ್ಡೌನ್ ಮಾಡೋದರಿಂದ ಕೊರೊನಾ ನಿಯಂತ್ರಣ ಮಾಡಲು ಸಾಧ್ಯವೇ ಎಂಬ ಪ್ರಶ್ನೆಯನ್ನು ಸಾಮಾಜಿಕ ಜಾಲತಾಣಗಳಲ್ಲೂ ಹಲವು ಕೇಳುತ್ತಿದ್ದಾರೆ. ರಾಜ್ಯದಲ್ಲಿ ಸದ್ಯ ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಸ್ವರೂಪದಲ್ಲಿ ಏರಿಕೆಯಾಗುತ್ತಿದೆ. ಈ ನಡುವೆಯೇ ಆರ್ಥಿಕ ಚೇತರಿಕೆ ಕಂಡುಕೊಳ್ಳುವ ನಿಟ್ಟಿನಲ್ಲಿ ಲಾಕ್ಡೌನ್ ಸಡಿಲಗೊಳಿಸಲಾಗಿದೆ. ಪರಿಣಾಮ ಅಂಗಡಿ ಮುಂಗಟ್ಟುಗಳು ತೆರೆದಿವೆ. ಬಸ್ ಸಂಚಾರ ಆರಂಭಗೊಂಡಿವೆ. ರಸ್ತೆಯಲ್ಲಿ ಜನರ ಸಂಚಾರ ಕೂಡಾ ಹೆಚ್ಚಾಗಿದೆ. ಕೈಗಾರಿಕೆಗಳು ಹಾಗೂ ನಿರ್ಮಾಣ ಕೆಲಸ ಕಾರ್ಯಗಳು ಚುರುಕು ಪಡೆದುಕೊಂಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಡಿಲಿಕೆಗಳನ್ನು ಮಾಡಲು ಸರ್ಕಾರ ಮುಂದಾಗಿದೆ. ಲಾಕ್ಡೌನ್ ಸಡಿಲಿಕೆಗೊಂಡ ಹಿನ್ನೆಲೆಯಲ್ಲಿ ಜನರು ಕೊರೊನಾ ಅಪಾಯವನ್ನು ಮರೆತಿದ್ದಾರೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತಿಲ್ಲ. ಮಾಸ್ಕ್ಗಳನ್ನು ಧರಿಸದಿರುವುದು ಕಂಡುಬರುತ್ತಿದೆ. ಸಾರ್ವಜನಿಕ ವಾಹನಗಳಲ್ಲೂ ಕೊರೊನಾ ಕುರಿತಾದ ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲನೆ ಮಾಡುತ್ತಿಲ್ಲ. ಈ ನಡುವೆ ಅಂತರರಾಜ್ಯ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ಸೋಂಕು ಪ್ರಕರಣ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ವಾರ ಒಂದು ದಿನ ಕಟ್ಟುನಿಟ್ಟಿನ ಲಾಕ್ಡೌನ್ ಜಾರಿಗೊಳಿಸುವುದರಲ್ಲಿ ಅರ್ಥ ಏನಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಕೊರೊನಾ ನಿಯಂತ್ರಣದ ಆರ್ಥಿಕ ಚಟುವಟಿಕೆಗೆ ಅವಕಾಶ ಕಲ್ಪಿಸುವುದರ ಮೂಲಕ ಆರ್ಥಿಕ ಸಂಕಷ್ಟವನ್ನು ದೂರಮಾಡುವುದು ಲಾಕ್ಡೌನ್ ಸಡಿಲಿಕೆಯ ಉದ್ದೇಶ. ಈಗಾಗಲೇ ಸುದೀರ್ಘ ಲಾಕ್ಡೌನ್ನಿಂದ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ. ಜನರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಸರಿಪಡಿಸಲು ಲಾಕ್ಡೌನ್ ಸಡಿಲಿಕೆ ಅಗತ್ಯವಾಗಿದೆ. ಹೀಗಿದ್ದರೂ ಕೊರೊನಾದ ವಿರುದ್ಧ ಹೋರಾಟ ನಡೆಸಲೇ ಬೇಕಾಗಿದೆ. ಲಾಕ್ಡೌನ್ ಸಡಿಲಿಕೆಗೊಂಡಿದೆ ಅಂದರೆ ಕೊರೊನಾ ಮಾಯವಾಗಿದೆ ಎಂದು ಅರ್ಥವಲ್ಲ. ಇದನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಭಾನುವಾರದ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಕೊರೊನಾದ ಅಪಾಯದ ಕುರಿತಾಗಿ ಜನರಲ್ಲಿ ಅರಿವು ಮೂಡಿಸುವುದು ಇದರ ಉದ್ಧೇಶವಾಗಿದೆ ಎಂಬ ಅಭಿಪ್ರಾಯಗಳು ಸರ್ಕಾರದ ಕಡೆಯಿಂದ ಕೇಳಿಬರುತ್ತಿದೆ. ಒಟ್ಟಿನಲ್ಲಿ ಕೊರೊನಾ ನಿಯಂತ್ರಣದ ಜೊತೆಗೆ ಜನಜೀವನವನ್ನು ನಿತ್ಯದ ಸ್ವರೂಪಕ್ಕೆ ಮರಳಿಸಬೇಕಾದ ಕೆಲಸನೂ ನಡೆಯಬೇಕಾಗಿದೆ.
from India & World News in Kannada | VK Polls https://ift.tt/2LQULRL