ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಬ್ಬರ ಸ್ವಲ್ಪ ತಗ್ಗಿದ್ದು, ಕಳೆದ 4 ದಿನಗಳ ಹೊಸ ಪಾಸಿಟಿವ್ ಕೇಸ್ಗಳ ಸಂಖ್ಯೆಗೆ ಹೋಲಿಸಿದರೆ ಸೋಮವಾರದ ಪ್ರಕರಣಗಳ ಸಂಖ್ಯೆ ತುಸು ಕಡಿಮೆಯಾಗಿದೆ. ಸೋಮವಾರ 69 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢವಾಗಿದ್ದು, ಇದರೊಂದಿಗೆ ಕರ್ನಾಟಕದಲ್ಲಿ ಕೊರೊನಾ ಪೀಡಿತರ ಸಂಖ್ಯೆ 2,158ಕ್ಕೆ ಏರಿಕೆಯಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಮಧ್ಯಾಹ್ನದ ಹೆಲ್ತ್ ಬುಲೆಟಿನ್ನಲ್ಲಿ ತಿಳಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಹೆಚ್ಚು ಎಂಬಂತೆ 16 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಇನ್ನು, 5 ದಿನದಲ್ಲಿ ಕೊರೊನಾ ಶತಕ ದಾಖಲೆ ಮಾಡಿದ ಯಾದಗಿರಿ ಜಿಲ್ಲೆಯಲ್ಲಿ ಸೋಮವಾರ ಮತ್ತೆ 15 ಮಂದಿಗೆ ಕೊರೊನಾ ಸೋಂಕು ದೃಢವಾಗಿದ್ದು, ಪಕ್ಕದ ಕಲಬುರಗಿಯಲ್ಲೂ ಹೊಸದಾಗಿ 14 ಸೋಂಕಿತರು ಕಂಡುಬಂದಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು 6 ಪ್ರಕರಣಗಳು ಕಂಡುಬಂದಿದ್ದು, ಧಾರವಾಡ, ಬಳ್ಳಾರಿ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ 3 ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ. ಮಂಡ್ಯ ಮತ್ತು ಕೋಲಾರದಲ್ಲಿ ತಲಾ 2 ಹಾಗೂ ಬೆಳಗಾವಿ, ರಾಮನಗರ, ಬೀದರ್, ವಿಜಯಪುರ ಮತ್ತು ತುಮಕೂರಲ್ಲಿ ತಲಾ ಒಬ್ಬರು ಸೋಂಕಿತರು ಕಂಡುಬಂದಿದ್ದಾರೆ. ಇಂದು ಕಂಡು ಬಂದ ಹೊಸ ಸೋಂಕಿತರ ಪೈಕಿ 51 ಜನ ಮಹಾರಾಷ್ಟ್ರದಿಂದ ಬಂದವರು ಎಂಬುದನ್ನು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದ್ದು, ಕರ್ನಾಟಕದ ಮೇಲೆ ಮಹಾರಾಷ್ಟ್ರ ಕೊರೊನಾದ ಅವಕೃಪೆ ಮುಂದುವರೆದಿದೆ. ಉಳಿದಂತೆ ನಾಲ್ಕು ಜನ ವಿದೇಶದಿಂದ ಬಂದಿದ್ದು, ತಮಿಳುನಾಡು, ಉತ್ತರ ಪ್ರದೇಶ ಹಾಗೂ ದೆಹಲಿಯಿಂದ ಬಂದ ತಲಾ ಒಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು, ರಾಜ್ಯದಲ್ಲಿ ಮತ್ತೊಂದು ಕೊರೊನಾ ಸಂಬಂಧಿತ ಸಾವು ಸಂಭವಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 55 ವರ್ಷದ ಮಹಿಳೆ ಸಾವನ್ನಪ್ಪಿದ್ದು, SARI ಹಿನ್ನೆಲೆಯಲ್ಲಿ ಮೇ 19ಕ್ಕೆ ನಿಗದಿತ ಆಸ್ಪತ್ರೆಗೆ ದಾಖಲಾಗಿದ್ದು, ಮೇ 24 ರಂದು ಸಾವನ್ನಪ್ಪಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸಾವಿನ ಸಂಖ್ಯೆ 43ಕ್ಕೆ ಏರಿಕೆಯಾಗಿದ್ದು, ಇಬ್ಬರು ಕೊರೊನಾ ಅಲ್ಲದ ಕಾರಣದಿಂದ ಮೃತಪಟ್ಟಿದ್ದಾರೆ. ಜಿಲ್ಲಾವಾರು ಹೊಸ ಸೋಂಕಿತರು * ಉಡುಪಿ - 16 * ಯಾದಗಿರಿ - 15 * ಕಲಬುರಗಿ - 14 * ಬೆಂಗಳೂರು ನಗರ - 6 * ಧಾರವಾಡ - 3 * ಬಳ್ಳಾರಿ - 3 * ದಕ್ಷಿಣ ಕನ್ನಡ - 3 * ಮಂಡ್ಯ - 2 * ಕೋಲಾರ - 2 * ಬೆಳಗಾವಿ - 1 * ರಾಮನಗರ - 1 * ಬೀದರ್ - 1 * ವಿಜಯಪುರ - 1 * ತುಮಕೂರು - 1
from India & World News in Kannada | VK Polls https://ift.tt/2LYDqX3