ಹೊಸದಿಲ್ಲಿ: ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಅಭ್ಯಾಸ ನಡೆಸುತ್ತಿರುವ ವೇಳೆ ಬಾಲಕಿಯ ಭುಜಕ್ಕೆ ಬಾಣ ಚುಚ್ಚಿರುವ ಆಘಾತಕಾರಿ ಘಟನೆ ಅಸ್ಸಾಂನಿಂದ ವರದಿಯಾಗಿದೆ. ಅದೃಷ್ಟವಶಾತ್ ಯುವ ಪಟು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗುವಾಹಟಿಯ ದಿಬ್ರುಗರ್ ಜಿಲ್ಲೆಯ ಚಬುವಾದಲ್ಲಿ ಆರ್ಚರಿ ಅಭ್ಯಾಸಿಸುತ್ತಿರುವ ವೇಳೆಯಲ್ಲಿ 12ರ ಹರೆಯದ ಬಾಲಕಿ ಭುಜಕ್ಕೆ ತೀಕ್ಷ್ಣವಾದ ಬಾಣ ಚುಚ್ಚಿಕೊಂಡಿದೆ. ಆರಂಭದಲ್ಲಿ ಖೇಲೋ ಇಂಡಿಯಾ ಗೇಮ್ಸ್ನಲ್ಲಿ ಅನಾಹುತ ಸಂಭವಿಸಿದೆ ಎಂಬ ವರದಿಗಳು ಬಂದಿದ್ದವು. ಆದರೆ ಬಳಿಕ ಅಸ್ಸಾಂ ಆರ್ಚರಿ ಅಸೋಸಿಯೇಷನ್ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ದೈನಂದಿನ ಅಭ್ಯಾಸದ ವೇಳೆ ಅವಘಡ ನಡೆದಿದೆ ಎಂಬುದನ್ನು ತಿಳಿಸಿದೆ. ಶಿವಾಂಗಿನಿ ಖೇಲೋ ಇಂಡಿಯಾ ಟೂರ್ನಿಯಲ್ಲಿ ಭಾಗವಹಿಸಲು ಅಭ್ಯಾಸ ನಡೆಸುತ್ತಿದ್ದರು ಎನ್ನಲಾಗಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದ (ಸಾಯ್) ಕೇಂದ್ರದಲ್ಲಿ ಘಟನೆ ನಡೆದಿದ್ದು, ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿ ಪ್ರಾಥಮಿ ಚಿಕಿತ್ಸೆ ನೀಡಲಾಯಿತು. ಬಳಿಕ ಶಸ್ತ್ರ ಚಿಕಿತ್ಸೆಗಾಗಿ ಹೊಸದಿಲ್ಲಿಯ ಏಮ್ಸ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಯಿತು. ಬಾಲಕಿ ಈಗ ಚೇತರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಯ ಗಂಭೀರತೆಯನ್ನು ಅರಿತಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಸಹ ಬಾಲಕಿಯ ಆರೋಗ್ಯವನ್ನು ವಿಚಾರಿಸಿದ್ದಾರೆ. ಅದೇ ಹೊತ್ತಿಗೆ ಬಾಲಕಿಯ ಬೇಕಾಗಿರುವ ಚಿಕಿತ್ಸೆಯ ಎಲ್ಲ ವೆಚ್ಚವನ್ನು ಭರಿಸುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರ ಘೋಷಿಸಿದೆ. ಖೆಲೋ ಇಂಡಿಯಾ ಯೂತ್ ಗೇಮ್ಸ್, ಅಸ್ಸಾಂನ ಗುವಾಹಟಿಯಲ್ಲಿ ಜನವರಿ 10ರಿಂದ 22ರ ವರೆಗೆ ನಡೆಯುತ್ತಿದೆ. ಒಂಬತ್ತರ ಹರೆಯದಿಂದಲೇ ಬಿಲ್ಲುಗಾರಿಕೆಯಲ್ಲಿ ಪ್ರವೀಣೆಯಾಗಿರುವ ಶಿವಾಂಗಿನಿ ಈಗಾಗಲೇ ಅನೇಕ ಪದಕಗಳನ್ನು ಗೆದಿದ್ದಾರೆ. ಆಂಧ್ರ ಪ್ರದೇಶದಲ್ಲಿ ನಡೆದ 65ನೇ ರಾಷ್ಟ್ರೀಯ ಶಾಲಾ ಕ್ರೀಡಾ ಆರ್ಚರಿ ಚಾಂಪಿಯನ್ಶಿಪ್ನಲ್ಲೂ ಭಾಗವಹಿಸಿದ್ದರು. ಅಷ್ಟಕ್ಕೂ ಬಾಲಕಿಗೆ ಅವಘಡ ಹೇಗೆ ಸಂಭವಿಸಿತು ಎಂಬುದು ತಿಳಿದು ಬಂದಿಲ್ಲ. ಈ ಎಲ್ಲದರ ನಡುವೆ ಸಾಯ್ ಕೇಂದ್ರಗಳಲ್ಲಿನ ಸುರಕ್ಷತಾ ಮಟ್ಟದ ಬಗ್ಗೆ ಪ್ರಶ್ನೆಗಳು ಎದ್ದೇಳುವಂತಾಗಿದೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/35F8pif