ಮುಂಬೈ: ಹ್ಯಾರಿಸ್ ಶೀಲ್ಡ್ ಶಾಲಾ ಕ್ರಿಕೆಟ್ನಲ್ಲಿ 439 ರನ್ ಬಾರಿಸುವ ಮೂಲಕ ಸಚಿನ್ ದಾಖಲೆ ಮುರಿದು ಮೊದಲ ಬಾರಿ ಸುದ್ದಿಯಾಗಿದ್ದ ಮುಂಬೈ ಮೂಲದ ಯುವ ಕ್ರಿಕೆಟಿಗ , ಬಳಿಕ ಐಪಿಎಲ್ ಮೂಲಕ ಹೆಚ್ಚು ಪರಿಚಿತರಾಗಿದ್ದರು. 22 ವರ್ಷದ ವಿಕೆಟ್ಕೀಪರ್ ಬ್ಯಾಟ್ಸ್ಮನ್ ಸರ್ಫರಾಝ್, ಕಿರಿಯ ವಯಸ್ಸಿನಲ್ಲೇ ಕ್ರಿಕೆಟ್ ವೃತ್ತಿ ಬದುಕಿನಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಅವರನ್ನು ಮುಂಬೈನ ಭವಿಷ್ಯದ ತಾರೆ ಎಂದೇ ಅವರನ್ನು ಪರಿಗಣಿಸಲಾಗಿತ್ತು. ಆದರೆ, ಮುಂಬೈ ತಂಡದಲ್ಲಿ ಅವರ ವೃತ್ತಿ ಬದುಕು ಮೇಲೇಳಲೇ ಇಲ್ಲ. ಬಳಿಕ ಉತ್ತರ ಪ್ರದರ್ಶ ತಂಡದ ಪರ ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಯೂ ಯಶಸ್ಸು ಕೈ ಹಿಡಿಯಲ್ಲ. ಇದೀಗ ತಮ್ಮ ತವರೂರು ಮುಂಬೈಗೆ ಹಿಂದಿರುಗಿ ರಣಜಿಯಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸುತ್ತಿರುವ ಸರ್ಫರಾಝ್, ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ನ ಚೊಚ್ಚಲ ತ್ರಿಶತಕ ಬಾರಿಸುವ ಮೂಲಕ ಮರಳಿ ಸುದ್ದಿಯಾಗಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಜ್ವರದ ನಡುವೆಯೂ ಮುಂಬೈಗೆ ಆಸರೆಯಾಗಿ ನಿಂತು ತಂಡವನ್ನು ಸೋಲಿನ ದವಡೆಯಿಂದ ಪಾರು ಮಾಡಿ ಇನಿಂಗ್ಸ್ ಮುನ್ನಡೆ ಒದಗಿಸಿಕೊಟ್ಟು ಮಿಂಚಿದ್ದರು. "ಕಮ್ಬ್ಯಾಕ್ ಮಾಡಿರುವುದು ಸಂತಸ ನೀಡಿದೆ. ಅದರಲ್ಲೂ ಮುಂಬೈ ಪರ ತ್ರಿಶತಕ ಬಾರಿಸಿ ಸಚಿನ್ ತೆಂಡೂಲ್ಕರ್, ಸುನಿಲ್ ಗವಾಸ್ಕರ್, ವಸೀಂ ಜಾಫರ್ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜರ ಪಟ್ಟಿಗೆ ಸೇರ್ಪಡೆಯಾಗಿರುವುದು ಹೆಮ್ಮೆಯ ಸಂಗತಿ," ಎಂದು ಸರ್ಫರಾಝ್ ಹೇಳಿಕೊಂಡಿದ್ದಾರೆ. 16ನೇ ವಯಸ್ಸಿನಲ್ಲೇ ತಂಡದ ಪರ ಆಡಿ ಸದ್ದು ಮಾಡಿದ್ದ ಸರ್ಫರಾಝ್ ಬಳಿಕ ಫಿಟ್ನೆಸ್ ವಿಚಾರವಾಗಿ ಸಾಕಷ್ಟು ಬಾರಿ ಟೀಕೆಗೆ ಗುರಿಯಾಗಿದ್ದರು. ಇದೇ ಕಾರಣಕ್ಕೆ ತಂಡ ಅವರ ಕೈಬಿಟ್ಟಿತ್ತು. ಈ ಸಂದರ್ಭದಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಫಿಟ್ನೆಸ್ ಕಂಡುಕೊಂಡು ಉನ್ನತ ಮಟ್ಟದ ಕ್ರಿಕೆಟ್ನಲ್ಲಿ ಸ್ಪರ್ಧಿಸಲು ಸಜ್ಜಾಗು ಎಂದು ಸಲಹೆ ಕೂಡ ನೀಡಿದ್ದರು. "ಫಿಟ್ನೆಸ್ ಕಾರಣಕ್ಕೆ ಆರ್ಸಿಬಿ ತಂಡದಿಂದ 2016ರಲ್ಲಿ ನನ್ನ ಕೈಬಿಡಲಾಗಿತ್ತು. ವಿರಾಟ್ ಕೊಹ್ಲಿ ನನ್ನ ಬಳಿಕ ನೇರವಾಗಿ ಮಾತನಾಡಿ ನಿನ್ನ ಪ್ರತಿಭೆ ಬಗ್ಗೆ ಕಿಂಚಿತ್ತೂ ಸಂಶಯವಿಲ್ಲ, ಆದರೆ ಫಿಟ್ನೆಸ್ ನಿನ್ನನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲಾರದು. ಅವರು ನನ್ನ ಬಗ್ಗೆ ಅವರು ಪ್ರಮಾಣಿಕ ಅಭಿಪ್ರಾಯ ನೀಡಿದ್ದರು," ಎಂದು ಆರ್ಸಿಬಿ ತಂಡದಲ್ಲಿದ್ದಾಗ ಕ್ಯಾಪ್ಟನ್ ವಿರಾಟ್ ಕೊಹ್ಲಿ ನೀಡಿದ ಉಪದೇಶವನ್ನು ಸರ್ಫರಾಝ್ ಸ್ಮರಿಸಿದ್ದಾರೆ. "ಬಳಿಕ ನನ್ನ ಫಿಟ್ನೆಸ್ ಉತ್ತಮ ಪಡಿಸಿಕೊಳ್ಳಬೇಕೆಂದು ನಿರ್ಧರಿಸಿದ್ದೆ. ವರ್ಕ್ಔಟ್ ಶುರು ಮಾಡಿದೆ, ರನ್ನಿಂಗ್, ಕಾರ್ಡಿಯೋ ಆರಂಭಿಸಿ ಸಿಹಿ ಪದಾರ್ಥಗಳನ್ನು ಬಿಟ್ಟೆ. ನನ್ನ ಆಹಾರ ಪದ್ಧತಿಯಲ್ಲಿ ಸುಧಾರಣೆ ತಂದುಕೊಂಡೆ. ಇದೀಗ ಫಿಟ್ನೆಸ್ ನನಗೆ ಇಷ್ಟ. ಜಂಕ್ ಫುಡ್ ಸೇವನೆಯನ್ನು ಹಂತಹಂತವಾಗಿ ಕೈಬಿಟ್ಟೆ. ಡಯಟ್ ಸಂಪೂರ್ಣ ಬದಲಾಯಿಸಿಕೊಂಡೆ," ಎಂದು ಫಿಟ್ನೆಸ್ ಕುರಿತಾಗಿ ಮಾತನಾಡಿದ್ದಾರೆ. "ಫಿಟ್ನೆಸ್ನಿಂದ ನನ್ನ ಬ್ಯಾಟಿಂಗ್ನಲ್ಲೂ ಸುಧಾರಣೆಯಾಗಿ ಹೆಚ್ಚು ರನ್ ಗಳಿಸುತ್ತಿದ್ದೇನೆ. ಒಂದು ಹಂತದಲ್ಲಿ ಸಹ ಆಟಗಾರೆಲ್ಲಾ ನನ್ನನ್ನು 'ಪಾಂಡ' ಎಂದು ಕರೆಯುತ್ತಿದ್ದರು. ಏಕೆಂದರೆ ನಾನು ಹೆಚ್ಚು ತಿನ್ನುತ್ತಿದ್ದೆ. ಈಗ ಅವರೆಲ್ಲರೂ ನನ್ನನ್ನು 'ಮಾಚೊ' ಎಂದು ಕರೆಯುತ್ತಾರೆ. ಈ ಅಡ್ಡೆಸರು ಕೆಲವರಿಗೆ ಮಾತ್ರ ತಿಳಿದಿದೆ," ಎಂದಿದ್ದಾರೆ. "ಆರ್ಸಿಬಿ ತಂಡ ನನ್ನ ಕೈಬಿಟ್ಟ ಸಂದರ್ಭದಲ್ಲಿ ಬಹಳ ದುಃಖವಾಗಿತ್ತು. ಆದರೆ, ಆ ಬಗ್ಗೆ ಹೆಚ್ಚೇನು ಮಾಡಲು ನನ್ನಿಂದ ಸಾಧ್ಯವಿರಲಿಲ್ಲ. ಕಳೆದ ವರ್ಷ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ನನ್ನ ಐಪಿಎಲ್ ವೃತ್ತಿ ಬದುಕಿನ ಶ್ರೇಷ್ಠ ಸಮಯ ಕಂಡಿದ್ದೇನೆ," ಎಂದು ಬೇಸರ ಹೊರಹಾಕಿದ್ದಾರೆ. ಆರ್ಸಿಬಿ ತಂಡದಿಂದ ಹೊರ ಬಿದ್ದ ಬಳಿಕ ಸರ್ಫರಾಝ್ ಖಾನ್ ಅವರನ್ನು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಹರಾಜಿನಲ್ಲಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಕಳೆದ ವರ್ಷ ಕಿಂಗ್ಸ್ ಇಲೆವೆನ್ ಉಳಿಸಿಕೊಂಡ ಆಟಗಾರರಲ್ಲಿ ಸರ್ಫರಾಝ್ ಕೂಡ ಒಬ್ಬರಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/37w6kHa