ಕಲಬುರಗಿ: ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಪೂರಕ ಸಮಿತಿಗಳ ಪ್ರಗತಿ ಪರಿಶೀಲನಾ ಸಭೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಫೆಬ್ರವರಿ 5ರಿಂದ 7ರ ವರೆಗೆ ನಡೆಯಲಿರುವ ಬೃಹತ್ ಸಮ್ಮೇಳನದಲ್ಲಿ ಊಟದ ವ್ಯವಸ್ಥೆ, ಆರೋಗ್ಯ ಚಿಕಿತ್ಸೆಯ ವ್ಯವಸ್ಥೆ ಬಗ್ಗೆ ವಿಶೇಷ ಕಾಳಜಿ ತೋರಿದ ಡಿಸಿಎಂ ಬೀದಿಗಳ ಅಲಂಕಾರಕ್ಕೆ ಒತ್ತು ನೀಡಿದ್ದಾರೆ. ಫೆ. 5, 6 ಮತ್ತು 7ರಂದು ಸಮ್ಮೇಳನ ನಡೆಯಲಿದ್ದು, ಮೂರು ದಿನಗಳ ಬೃಹತ್ ಸಮ್ಮೇಳನದಲ್ಲಿ ಪ್ರತಿದಿನ ಸುಮಾರು 1ಲಕ್ಷ 80 ಸಾವಿರ ಜನರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ದ ಊಟ, ಸಂಜೆಯ ಹೊತ್ತಿಗೆ ಟೀ ಮತ್ತು ಸ್ನ್ಯಾಕ್ಸ್ ಹಾಗೂ ರಾತ್ರಿ ಊಟದ ವ್ಯವಸ್ಥೆ ಮಾಡಬೇಕು. ಉಪಹಾರ ಪ್ರತಿದಿನ ಒಂದೇ ಇರುವಂತಿಲ್ಲ. ಮಧ್ಯಾಹ್ನದ ಊಟದಲ್ಲಿ ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಶೈಲಿಯ ಊಟ ಸಿದ್ಧಪಡಿಸಬೇಕು. ಶೇಂಗಾ ಹೋಳಿಗೆ, ಕಡಲೆ ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಸಜ್ಜೆಯ ಹೋಳಿಗೆ, ಗೋಧಿ ಹುಗ್ಗಿ ಸಿಹಿಯೂಟದೊಂದಿಗೆ ಬಿಸಿ ಜೋಳದ ರೊಟ್ಟಿ, ಕಟಿ ಸಜ್ಜೆಯ ರೊಟ್ಟಿ ಹಾಗೂ ಹಲವು ನಮೂನೆಯ ಪಲ್ಯಗಳ ಜೊತೆಗೆ ಸವಿಯೂಟ ಇರುತ್ತದೆ. ಊಟದಲ್ಲಿ ವಿಐಪಿ ಮತ್ತು ಇತರೆ ಎಂಬ ತಾರತಮ್ಯ ಇರದಂತೆ ಎಚ್ಚರ ವಹಿಸಬೇಕು. ಊಟಕ್ಕಾಗಿ 200 ಕೌಂಟರ್ ತೆರೆಯಬೇಕು. ನೀರಿಗಾಗಿ 200 ಕೌಂಟರ್ ತೆರೆಯಲಾಗುವುದು. ಅಡುಗೆ ಮನೆಗೆ ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ ಎಂದು ಗೋವಿಂದ ಕಾರಜೋಳ ಮಾಹಿತಿ ನೀಡಿದರು. ಮದುವೆಯಿಂದ ಹಿಡಿದು ಎಂಥದ್ದೇ ದೊಡ್ಡ ಸಮಾರಂಭ ನಡೆದರೂ ಊಟದ ಗುಣಮಟ್ಟವೇ ಸಮಾರಂಭದ ಯಶಸ್ಸು ನಿರ್ಧರಿಸುತ್ತದೆ. ಹೀಗಾಗಿ ಸಮ್ಮೇಳನದಲ್ಲಿ ಊಟದ ಗುಣಮಟ್ಟದ ಕಡೆಗೆ ಸಂಬಂಧಿತ ಸಮಿತಿಯ ಮುಖ್ಯಸ್ಥರು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆರೋಗ್ಯ ಸಮಿತಿಕಲಬುರಗಿಯ ನಾಲ್ಕು ಮೆಡಿಕಲ್ ಕಾಲೇಜುಗಳು ಮತ್ತು ಜಯದೇವ ಹೃದ್ರೋಗ ಸಂಸ್ಥೆ ವತಿಯಿಂದ ತಜ್ಞ ವೈದ್ಯರು ಸಮ್ಮೇಳನದಲ್ಲಿ ಜನರ ಆರೋಗ್ಯದ ಕುರಿತು ಕಾಳಜಿ ವಹಿಸಲಿದ್ದಾರೆ. ಒಂದು ತಂಡದಲ್ಲಿ ಒಟ್ಟು ತಜ್ಞ ವೈದ್ಯರು ಇರಬೇಕು. ಸ್ಥಳದಲ್ಲೇ ಆಂಬ್ಯುಲೆನ್ಸ್ ನಿಲ್ಲಿಸಬೇಕು. ಜೊತೆಗೆ, ಆಯಕಟ್ಟಿನ ಸ್ಥಳಗಳಲ್ಲಿ ಆಂಬ್ಯುಲೆನ್ಸ್ಗಳು ನಿಲ್ಲಿಸಬೇಕು. ಇನ್ನು ಪ್ರತಿ ಮೆಡಿಕಲ್ ಕಾಲೇಜಿನಲ್ಲಿ ಸಮ್ಮೇಳನ ನಡೆಯುವ ಮೂರು ದಿನಗಳ ಮಟ್ಟಿಗಾಗಿ ಪ್ರತಿ ಕಾಲೇಜಿನಿಂದ ತಲಾ 4 ಹಾಸಿಗೆ ಮೀಸಲಿಡಬೇಕು. ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಎರಡು ವೆಂಟಿಲೇಟರ್ ಸನ್ನದ್ಧ ಸ್ಥಿತಿಯಲ್ಲಿ ಮೀಸಲಿಡಬೇಕು. ಇದರೊಟ್ಟಿಗೆ ಮೊಬೈಲ್ ಆಸ್ಪತ್ರೆ ಸಮ್ಮೇಳನದ ಸ್ಥಳದಲ್ಲಿ ಸಕ್ರಿಯವಾಗಿರಬೇಕು ಎಂದು ಆರೋಗ್ಯ ಸಮಿತಿಗೆ ಸಲಹೆ ನೀಡಿದರು. ಅಲಂಕಾರ ಸಮಿತಿಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿರುವ ರಸ್ತೆಯನ್ನು ಸಿಂಗರಿಸಬೇಕು. ಮೆರವಣಿಗೆಯ ರಸ್ತೆಗಳಲ್ಲಿರುವ ಸಾರ್ವಜನಿಕರು ತಮ್ಮ ಮನೆಗಳ ಮುಂದೆ ರಂಗೋಲಿಯ ಜೊತೆಗೆ ಮನೆಗಳಿಗೆ ಸುಣ್ಣ ಬಣ್ಣ ಮಾಡಲು ಮನವಿ ಮಾಡಿಕೊಳ್ಳುವಂತೆ ಸಮಿತಿಯ ಅಧ್ಯಕ್ಷರು ಹಾಗೂ ಕಾರ್ಯಕರ್ತರಿಗೆ ಸಚಿವರು ಸಲಹೆ ನೀಡಿದರು. ಮಹಾನಗರ ಪಾಲಿಕೆ ವತಿಯಿಂದ ಸಂಪೂರ್ಣ ಸ್ವಚ್ಚತಾ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
from India & World News in Kannada | VK Polls https://ift.tt/2QGe9Ux