ಹೊಸದಿಲ್ಲಿ: "ಪೌರತ್ವ ತಿದ್ದುಪಡಿ ಕಾಯ್ದೆ ಭಾರತಕ್ಕೆ ಕೆಟ್ಟದ್ದಾಗಿದೆ" ಎಂಬ ಮೈಕ್ರೋಸಾಫ್ಟ್ ಸಿಇಒ ಅವರ ಹೇಳಿಕೆ ವಿರುದ್ಧ ಬಿಜೆಪಿ ಸಂಸದೆ ಕಿಡಿ ಕಾರಿದ್ದಾರೆ. ಸಾಕ್ಷರರು ಹೇಗೆ ಶಿಕ್ಷಣ ಪಡೆಯಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದೂ ಲೇಖಿ ವ್ಯಂಗ್ಯಭರಿತ ಟ್ವೀಟ್ ಮಾಡಿದ್ದಾರೆ. ಸಿಎಎ ವಿರುದ್ಧ ಮಾತನಾಡಿದ್ದ ಕಾರ್ಪೊರೇಟ್ ದಿಗ್ಗಜ ಸತ್ಯ ನಾದೆಲ್ಲಾ ಹೇಳಿಕೆಯ ವಿರುದ್ಧ ಮೀನಾಕ್ಷಿ ಲೇಖಿ ಮಂಗಳವಾರ ಕಿಡಿ ಕಾರಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಅವಕಾಶಗಳನ್ನು ನೀಡಲು ನಿಖರವಾದ ಕಾರಣ ಎಂದು ಮೀನಾಕ್ಷಿ ಲೇಖಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ, ಸಾಕ್ಷರರು ಹೇಗೆ ಶಿಕ್ಷಣ ಪಡೆಯಬೇಕು ಎಂಬುದಕ್ಕೆ ಇದು ಉತ್ತಮ ಉದಾಹರಣೆ ಎಂದೂ ಬಿಜೆಪಿ ಸಂಸದೆ ಮಂಗಳವಾರ ತಿಳಿಸಿದ್ದಾರೆ. ಅಲ್ಲದೆ, ಅಮೆರಿಕದಲ್ಲಿ ಯಜಿದಿಗಳ ಬದಲಿಗೆ ಸಿರಿಯನ್ ಮುಸ್ಲಿಮರಿಗೆ ಈ ಅವಕಾಶಗಳನ್ನು ನೀಡಲು ಸಾಧ್ಯವೇ ಎಂದೂ ಟ್ವೀಟ್ ಮೂಲಕ ಮೀನಾಕ್ಷಿ ಲೇಖಿ ಪ್ರಶ್ನೆ ಮಾಡಿದ್ದಾರೆ. ಮೈಕ್ರೋಸಾಫ್ಟ್ ಸಿಇಒ ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಸೋಮವಾರ ಮಾತನಾಡಿದ್ದಾರೆ. ಭಾರತದಲ್ಲಿ ಏನಾಗುತ್ತಿದೆ ಎಂಬುದು ದುಃಖಕರವಾಗಿದೆ ಎಂದು ನಾನು ಭಾವಿಸುತ್ತೇನೆ. ಇದು ಸರಿಯಲ್ಲ. ಭಾರತಕ್ಕೆ ಬಂದ ಬಾಂಗ್ಲಾ ವಲಸಿಗನು ಭಾರತದಲ್ಲಿ ಮುಂದಿನ ಯುನಿಕಾರ್ನ್ ಅನ್ನು ರಚಿಸುವ ಅಥವಾ ಇನ್ಫೋಸಿಸ್ನ ಮುಂದಿನ ಸಿಇಒ ಆಗುವುದನ್ನು ನೋಡಲು ನಾನು ಇಷ್ಟಪಡುತ್ತೇನೆ ಎಂದು ಮೈಕ್ರೋಸಾಫ್ಟ್ ಕಾರ್ಯಕ್ರಮವೊಂದರಲ್ಲಿ ಸತ್ಯ ನಾದೆಲ್ಲಾ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ ಎಂದು ಸ್ಮಿತ್ ಟ್ವೀಟ್ ಮಾಡಿದ್ದರು. ಬಳಿಕ ಇದರ ಬಗ್ಗೆ ಸತ್ಯ ನಾದೆಲ್ಲಾ ಸ್ಪಷ್ಟನೆಯನ್ನೂ ನೀಡಿದ್ದರು. ಅವರ ಈ ಹೇಳಿಕೆಗೆ ಸಾಕಷ್ಟು ವಿರೋಧ ಕೇಳಿಬರುತ್ತಿದೆ. ಇದೇ ರೀತಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಹ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ. ಮೈಕ್ರೋಸಾಫ್ಟ್ ತಕ್ಷಣವೇ ಇದಕ್ಕೆ ತಿದ್ದುಪಡಿ ಮಾಡಲು ಪ್ರಯತ್ನಿಸಿದ್ದು ನಾದೆಲ್ಲಾ ಹೊಸ ಹೇಳಿಕೆಯನ್ನು ನೀಡಿದ್ದರು. "ಪ್ರತಿಯೊಂದು ದೇಶವು ತನ್ನ ಗಡಿಗಳನ್ನು ವ್ಯಾಖ್ಯಾನಿಸುತ್ತದೆ ಮತ್ತು ಮಾಡಬೇಕು, ಇದು ರಾಷ್ಟ್ರೀಯ ಭದ್ರತೆಯನ್ನು ರಕ್ಷಿಸುತ್ತದೆ ಮತ್ತು ಅದಕ್ಕೆ ಅನುಗುಣವಾಗಿ ವಲಸೆ ನೀತಿಯನ್ನು ನಿಗದಿಪಡಿಸುತ್ತದೆ. ಮತ್ತು ಪ್ರಜಾಪ್ರಭುತ್ವ ದೇಶಗಳಲ್ಲಿ, ಜನರು ಮತ್ತು ಆ ಸರಕಾರ ತಮ್ಮ ಮಿತಿಗಳಲ್ಲಿ ಚರ್ಚಿಸಿ ವ್ಯಾಖ್ಯಾನಿಸುತ್ತದೆ ಎಂದೂ ಭಾರತ ಮೂಲದ ಸಿಇಒ ಅಭಿಪ್ರಾಯಪಟ್ಟಿದ್ದರು. ಜತೆಗೆ, ನಾನು ನನ್ನ ಭಾರತೀಯ ಪರಂಪರೆಯಿಂದ ರೂಪುಗೊಂಡಿದ್ದೇನೆ, ಬಹು ಸಾಂಸ್ಕೃತಿಕ ಭಾರತದಲ್ಲಿ ಬೆಳೆದ ಹಾಗೂ ಅಮೆರಿಕಕ್ಕೆ ವಲಸೆಯಾದ ಅನುಭವ ಪಡೆದುಕೊಂಡಿದ್ದೇನೆ. ನನ್ನ ಆಶಯವೆಂದರೆ ವಲಸಿಗನು ಸಮೃದ್ಧವಾದ ಸ್ಟಾರ್ಟಪ್ ಕಂಪೆನಿಯನ್ನು ಮುನ್ನಡೆಸಲಿ ಅಥವಾ ಬಹುರಾಷ್ಟ್ರೀಯ ಸಂಸ್ಥೆಯನ್ನು ಮುನ್ನಡೆಸಲಿ. ಇದರಿಂದ ಭಾರತೀಯ ಸಮಾಜ ಹಾಗೂ ಆರ್ಥಿಕತೆಗೆ ಲಾಭದಾಯಕವಾಗಲಿ ಎಂದು ಸತ್ಯ ನಾದೆಲ್ಲಾ ಹೇಳಿಕೊಂಡಿದ್ದರು. ಆದರೆ, ಅಷ್ಟರಲ್ಲಿ ಬೆನ್ ಸ್ಮಿತ್ ಮಾಡಿದ್ದ ಟ್ವೀಟ್ಗೆ ಸಾಕಷ್ಟು ವಿರೋಧ ಕೇಳಿಬಂದಿದ್ದು, ಮೈಕ್ರೋಸಾಫ್ಟ್ ಸಿಇಒ ವಿರುದ್ಧ ಆಕ್ರೋಶ ಕೇಳಿಬಂದಿದೆ. ಇನ್ನು, ಅಮೆರಿಕದಲ್ಲಿ ಯಜಿದಿಗಳ ಬದಲಿಗೆ ಸಿರಿಯನ್ ಮುಸ್ಲಿಮರಿಗೆ ಅವಕಾಶಗಳನ್ನು ಒದಗಿಸುವ ಲೇಖಿಯ ಹೇಳೀಕೆಯು, ಧಾರ್ಮಿಕ ಕಿರುಕುಳ ಎದುರಿಸುತ್ತಿರುವ ಅಲ್ಪಸಂಖ್ಯಾತರಿಗೆ ಸಿಎಎ ಯಂತಹ ಕಾಯ್ದೆಯ ಮೂಲಕ ಆದ್ಯತೆ ನೀಡಲಾಗುತ್ತಿದೆ ಎಂಬುದನ್ನು ಹೈಲೈಟ್ ಮಾಡುವ ಉದ್ದೇಶವಿತ್ತು ಎಂದು ತಿಳಿದುಬಂದಿದೆ.
from India & World News in Kannada | VK Polls https://ift.tt/30hEPhP