ಪುಣೆ: ನಾಯಕರಾದವರು ಮುಂದೆ ನಿಂತು ತಂಡವನ್ನು ಮುನ್ನಡೆಸಬೇಕು. ತಂಡದ ಒಳಿತಿಗಾಗಿ ಎಂತಹ ಪರಿಸ್ಥಿತಿಯನ್ನು ಎದುರಿಸಲು ಸಿದ್ಧವಾಗಿರಬೇಕು. ಈ ಮೂಲಕ ತಂಡಕ್ಕೆ ಮಾದರಿಯಾಗುತ್ತಾರೆ. ಟೀಮ್ ಇಂಡಿಯಾ ನಾಯಕ ಇದೀಗ ತಮ್ಮ ವೈಯಕ್ತಿಕ ನಿರ್ವಹಣೆಯನ್ನು ಲೆಕ್ಕಿಸದೆ ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ತಮ್ಮ ಬ್ಯಾಟಿಂಗ್ ಕ್ರಮಾಂಕವನ್ನೇ ತ್ಯಾಗ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇದು ಮೊದಲ ಬಾರಿಯೇನಲ್ಲ ವಿರಾಟ್ ಕೊಹ್ಲಿ ತಮ್ಮ ಮೂರನೇ ಕ್ರಮಾಂಕವನ್ನು ಬಿಟ್ಟುಕೊಡುತ್ತಿರುವುದು. ಆದರೆ ಪುಣೆಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಆರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿಯುವ ಮೂಲಕ ತಂಡದ ಮೇಲಿರುವ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ಪ್ರಮುಖವಾಗಿಯೂ ತಂಡದಲ್ಲಿದ್ದು ಬೆಂಚ್ ಬಿಸಿ ಮಾಡುತ್ತಿರುವ ಸಂಜು ಸ್ಯಾಮ್ಸನ್ ಹಾಗೂ ಮನೀಶ್ ಪಾಂಡೆಗೆ ಅವಕಾಶ ನೀಡುವ ನಿಟ್ಟಿನಲ್ಲಿ ವಿರಾಟ್ ಕೊಹ್ಲಿ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದರು. ದ್ವಿತೀಯ ಪಂದ್ಯದಲ್ಲೂ ಶ್ರೇಯಸ್ ಅಯ್ಯರ್ಗೆ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು. ಮುಂಬರುವ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟ್ವೆಂಟಿ-20 ಗಮನದಲ್ಲಿಟ್ಟುಕೊಂಡು ಬಲಿಷ್ಠ ತಂಡವನ್ನು ಕಟ್ಟಿಕೊಳ್ಳುವ ಗುರಿಯನ್ನಿರಿಸಿದೆ. ಈ ನಿಟ್ಟಿನಲ್ಲಿ ವಿವಿಧ ಪ್ರಯೋಗಗಳಿಗೆ ವಿರಾಟ್ ಕೊಹ್ಲಿ ಮುಂದಾಗಿದ್ದಾರೆ. ಕಪ್ತಾನನಾಗಿರುವುದು ಒಂದು ವಿಷಯ, ನಾಯಕನಾಗಿರುವುದು ಮಗದೊಂದು ವಿಷಯ. ವಿರಾಟ್ ಕೊಹ್ಲಿ ಸರಿಯಾದ ನಾಯಕ ಆಗಿದ್ದು, ಯುವ ಆಟಗಾರರನ್ನು ಉತ್ತೇಜಿಸಲು ಹಾಗೂ ತಂಡವನ್ನು ಕಟ್ಟಲು ತಮ್ಮ ಸ್ಥಾನವನ್ನು ತ್ಯಾಗ ಮಾಡುತ್ತಾರೆ ಎಂದು ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಉಲ್ಲೇಖಿಸಿದ್ದಾರೆ. ಬಲಿಷ್ಠ ತಂಡದ ಸಂಯೋಜನೆಗಾಗಿ ಯಾವುದೇ ರೀತಿಯ ಹೊಂದಾಣಿಕೆಗೂ ತಾನು ಸಜ್ಜಾಗಿರುವುದಾಗಿ ವಿರಾಟ್ ಕೊಹ್ಲಿ ತಿಳಿಸಿದ್ದರು. ಪಂದ್ಯದ ಪರಿಸ್ಥಿತಿಗೆ ಹೊಂದಿಕೊಂಡು ಮೂರು ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಇಚ್ಛೆಪಡುತ್ತೇನೆ. ತಂಡಕ್ಕೆ ಸಾಧ್ಯವಾದಷ್ಟು ನೆರವಾಗುವುದು ನನ್ನ ಗುರಿಯಾಗಿದೆ ಎಂದಿದ್ದಾರೆ. ಗರಿಷ್ಠ ಮಟ್ಟದ ಫಿಟ್ನೆಸ್ ಕಾಯ್ದುಕೊಳ್ಳುವ ಮೂಲಕ ಸಹ ಆಟಗಾರರಿಗೆ ಮಾದರಿಯಾಗಿರುವ ವಿರಾಟ್ ಕೊಹ್ಲಿ, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ನಲ್ಲೂ ತಮ್ಮ ಕೊಡುಗೆಯನ್ನು ಸಲ್ಲಿಸುತ್ತಿದ್ದಾರೆ. ಅಲ್ಲದೆ ನಾಯಕರಾಗಿ ಯುವ ಆಟಗಾರರಿಗೆ ನೆರವಾಗಿದ್ದಾರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2R6e3EN