ಆಕ್ಲೆಂಡ್: ಇದೇ ಮೊದಲ ಬಾರಿ ಐದು ಪಂದ್ಯಗಳ ದ್ವಿಪಕ್ಷೀಯ ಸರಣಿಯನ್ನಾಡುತ್ತಿರುವ ಭಾರತ ತಂಡ, ಇದೀಗ ಆತಿಥೇಯ ನ್ಯೂಜಿಲೆಂಡ್ ಎದುರು ಸತತ 2 ಪಂದ್ಯಗಳನ್ನು ಗೆದ್ದು ಕಿವೀಸ್ ನೆಲದಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಟಿ20 ಸರಣಿ ಗೆಲುವಿನ ಸನಿಹ ಕಾಲಿಟ್ಟಿದೆ. ಇಲ್ಲಿನ ಈಡನ್ ಪಾರ್ಕ್ ಕ್ರೀಡಾಂಗಣದಲ್ಲಿ ಅಕ್ಷರಶಃ ಆಲ್ರೌಂಡರ್ ಪ್ರದರ್ಶನ ನೀಡಿದ ಪಡೆ, ಭಾನುವಾರ ನಡೆದ ಸರಣಿಯ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 7 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿತು. ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಅಚ್ಚರಿಯಂತೆ ಮೊದಲು ಬ್ಯಾಟ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಎದುರಾಳಿಯ ಈ ತಪ್ಪಿನ ಸಂಪೂರ್ಣ ಲಾಭ ಪಡೆದ ಭಾರತ ತಂಡ ಭರ್ಜರಿ ಬೌಲಿಂಗ್ ಪ್ರದರ್ಶಿಸಿ 20 ಓವರ್ಗಳಲ್ಲಿ ಆತಿತೇಯರನ್ನು 132/5 ರನ್ಗಳ ಸಾಮಾನ್ಯ ಮೊತ್ತಕ್ಕೆ ಕಟ್ಟಿಹಾಕಿತು. ಬಳಿಕ ಗುರಿ ಬೆನ್ನತ್ತಿದ 17.3 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 135 ರನ್ ಚಚ್ಚಿ ಗೆಲುವಿನ ಕೇಕೆ ಹಾಕಿತು. ತಂಡದ ಈ ಭರ್ಜರಿ ಗೆಲುವಿನ ಶ್ರೇಯಸ್ಸನ್ನು ಕ್ಯಾಪ್ಟನ್ ಕೊಹ್ಲಿ ಬೌಲರ್ಗಳಿಗೆ ನೀಡಿದ್ದಾರೆ. ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ (4 ಓವರ್ಗಳಲ್ಲಿ 18ಕ್ಕೆ 2) ಮತ್ತು ಜಸ್ಪ್ರೀತ್ ಬುಮ್ರಾ (4 ಓವರ್ಗಳಲ್ಲಿ 21ಕ್ಕೆ 1) ಕರಾರುವಾಕ್ ಬೌಲಿಂಗ್ ದಾಳಿ ಸಂಘಟಿಸಿ ಕಿವೀಸ್ ಬ್ಯಾಟ್ಸ್ಮನ್ಗಳ ಅಬ್ಬರಕ್ಕೆ ಬ್ರೇಕ್ ಹಾಕಿದರು. ಮೊದಲ 5.5 ಓವರ್ಗಳಲ್ಲಿ 48 ರನ್ ಬಾರಿಸಿದ್ದ ನ್ಯೂಜಿಲೆಂಡ್ ಬಳಿಕ ರಕ್ಷಣಾತ್ಮಕ ಆಟದ ಮೊರೆಹೋಯಿತು. "ಇಂದು ಕೂಡ ಉತ್ತಮ ಪ್ರದರ್ಶನ ನೀಡಿದ್ದೇವೆ. ಪ್ರಮುಖವಾಗಿ ಬೌಲಿಂಗ್ ವಿಭಾಗದಲ್ಲಿ. ಬೌಲರ್ಗಳು ಅದ್ಭುತ ಪ್ರದರ್ಶನ ನೀಡಿ ನಮ್ಮ ಗೇಮ್ ಪ್ಲಾನ್ ಸರಿಯಾಗಿ ಅಳವಡಿಸಲು ನೆರವಾದರು. ಬಲಿಷ್ಠ ಬ್ಯಾಟಿಂಗ್ ಹೊಂದಿರುವ ನ್ಯೂಜಿಲೆಂಡ್ ತಂಡವನ್ನು 132ಕ್ಕೆ ನಿಯಂತ್ರಿಸಿದ್ದು ನಿಜಕ್ಕೂ ಪ್ರಶಂಸನೀಯ," ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ತಂಡದ ಬ್ಯಾಕ್ ಟು ಬ್ಯಾಕ್ ಗೆಲುವಿಗೆ ಕಾರಣ ವಿವರಿಸಿದರು. "ಪಿಚ್ನಲ್ಲಿ 160 ರನ್ ಗಳಿಸಿದ್ದರೆ ಉತ್ತಮ ಮೊತ್ತ ವಾಗಿರುತ್ತಿತ್ತು. ಆದರೆ ಕಡಿಮೆ ಮೊತ್ತ ಬೆನ್ನತ್ತುವಂತಾಗಿದ್ದು, ಬ್ಯಾಟ್ಸ್ಮನ್ಗಳಿಗೆ ಅವರ ನೈಜ ಆಟವಾಡಲು ಸುಲಭ ಸಾಧ್ಯವನ್ನಾಗಿಸಿತು. ಪಿಚ್ ಹೇಗೆ ವರ್ತಿಸುತ್ತಿದೆ ಎಂಬುದನ್ನು ಚೆನ್ನಾಗಿ ಅರಿತಿದ್ದೆವು. ಸ್ಪಿನ್ನರ್ಗಳಿಗೆ ಮೊದಲ ಪಂದ್ಯದಲ್ಲಿ ಹೆಚ್ಚೇನು ನೆರವಾಗಲಿಲ್ಲ. ಆದರೆ, ಇಂದು ಕೊಂಚ ತಿರುವು ಪಡೆಯುತ್ತಿತ್ತು. ಜಡೇಜಾ ಇದರ ಸಂಪೂರ್ಣ ಲಾಭ ಪಡೆದರು," ಎಂದು ವಿವರಿಸಿದ್ದಾರೆ. ಸಂಕ್ಷಿಪ್ತ ಸ್ಕೋರ್ ನ್ಯೂಜಿಲೆಂಡ್: 20 ಓವರ್ಗಳಲ್ಲಿ 132/5 (ಮಾರ್ಟಿನ್ ಗಪ್ಟಿಲ್ 33, ಕಾಲಿನ್ ಮನ್ರೊ 26, ಟಿಮ್ ಸೀಫರ್ಟ್ ಔಟಾಗದೆ 33; ರವೀಂದ್ರ ಜಡೇಜಾ 18ಕ್ಕೆ 2, ಶಿವಂ ದುಬೇ 16ಕ್ಕೆ 1). ಭಾರತ: 17.3 ಓವರ್ಗಳಲ್ಲಿ 135/3 (ರೋಹಿತ್ ಶರ್ಮಾ 8, ಕೆಎಲ್ ರಾಹುಲ್ ಅಜೇಯ 57, ವಿರಾಟ್ ಕೊಹ್ಲಿ 11, ಶ್ರೇಯಸ್ ಅಯ್ಯರ್ 44, ಶಿವಂ ದುಬೇ ಅಜೇಯ 8; ಟಿಮ್ ಸೌಥೀ 20ಕ್ಕೆ 2, ಇಶ್ ಸೋಧಿ 33ಕ್ಕೆ 1).
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2GnfMRb