ಪರಶುರಾಂಪುರ: ಸಮೀಪದ ಪುರ್ಲಹಳ್ಳಿ ಗ್ರಾಮ ಬಳಿಯ ವಸಲು ದಿನ್ನೆಯಲ್ಲಿ ಕಾಡುಗೊಲ್ಲರ ಆರಾಧ್ಯ ದೈವ ಶ್ರೀ ಕೇತೆದೇವರ ಪರಿಷೆ ಜ.13ರಂದು ನಡೆಯುವ ಹಿನ್ನೆಲೆಯಲ್ಲಿ ಬುಧವಾರ ಸೂರ್ಯೋದಯ ವೇಳೆ ದೇವರ ಒಕ್ಕಲಿನ ಎರಡು ಗುಂಪಿನ ಅಣ್ಣ ತಮ್ಮಂದಿರು ಭಕ್ತಿಯಿಂದ ಬರಿಗಾಲು, ಬರಿಮೈಯಲ್ಲೇ ಬಾರೆಮುಳ್ಳಿನ ದೇಗುಲವನ್ನು ಕ್ಷಣಾರ್ಧದಲ್ಲಿ ಪೈಪೋಟಿಯಿಂದ ನಿರ್ಮಿಸಿದರು. ಸಂಪ್ರದಾಯದಂತೆ ದೇವರ ಮೂಲ ಸ್ಥಳ ಚನ್ನಮ್ಮನಾಗತಿಹಳ್ಳಿಯಿಂದ ಬೆಳಗ್ಗೆ ಪೂಜೆ ನೆರವೇರಿಸಿ, ಜಾನಪದ ವಾದ್ಯಗಳ ಮೂಲಕ ದೇವರ ಕಳಶಗಳನ್ನು ವಸಲುದಿನ್ನೆಗೆ ತರಲಾಯಿತು. ಮುಳ್ಳಿನ ಗುಡಿ: ಗುಡಿ ನಿರ್ಮಾಣಕ್ಕೆ ಐಗಾರಲಹಳ್ಳಿಯಿಂದ ತರಲಾಗಿದ್ದ ಪೂಜಾಮರ (ಹತ್ತಿ)ವನ್ನು ದೇಗುಲ ನಿರ್ಮಾಣಕ್ಕೆ ಬಳಸಿ ಬೀಸುಗಳ ತೊಗಸೆ, ತುಗ್ಗಲಿ, ಹಾಪುಮೋರು ಹಾಗೂ ಮೇಲು ಹೊದಿಕೆಯಾಗಿ ಬಂದ್ರೆಸೊಪ್ಪು ಬಳಸಲಾಯಿತು. ಬಾರೆ ಮುಳ್ಳು ಬಳಸಿ ಗುಡಿಕಟ್ಟಿನ ಅಣ್ಣ ತಮ್ಮಂದಿರಾದ ಬೊಮ್ಮನಗೊಲ್ಲಗೌಡರು (ಗುಡಿಹಳ್ಳಿ ವಂಶದವರು) ಹಾಗೂ ಕೋಣನಗೊಲ್ಲಗೌಡರು (ಈರುಗಾರ ವಂಶದವರು) ಪ್ರಬಲ ಪೈಪೋಟಿಯಿಂದ 20-30 ನಿಮಿಷದೊಳಗೆ ಸಿನಿಮೀಯ ರೀತಿ ಮುಳ್ಳಿನ ದೇಗುಲ ನಿರ್ಮಾಣ ಮಾಡಿದರು. ಕಂಚಿನ ಕಳಸ: ಮುಳ್ಳಿನ ದೇಗುಲವನ್ನು ಮಡಿಯಿಂದ ಬರಿ ಮೈ ಮತ್ತು ಬರಿಗಾಲಿನಲ್ಲೇ ಸರ ಸರನೇ ಏರಿ ಗೋಪುರಕ್ಕೆ ಕಂಚಿನ ಕಳಶ ಇಟ್ಟರು. ಈ ಸನ್ನಿವೇಶವನ್ನು ನೋಡಲು ಆಗಮಿಸಿದ ನೂರಾರು ಭಕ್ತರು ಶಿಳ್ಳೆ, ಕೇಕೆ ಹೊಡೆದು ಸಂಭ್ರಮಿಸಿದರು. ನೆರೆದಿದ್ದ ಭಕ್ತರಿಗೆ ರಾಗಿಮುದ್ದೆ, ಬದನೆಕಾಯಿಭಜ್ಜಿ, ಕುಂಬಳ ಕಾಯಿ ಹುಗ್ಗಿ (ಪಾಯಸ) ನೆರೆದ ಕೆಲಭಕ್ತರಿಗೆ ಉಣಬಡಿಸಿದರು. ದೇವಸ್ಥಾನದ ಪೂಜಾರಿ ಚಂದ್ರಣ್ಣ ಹಾಗೂ ಸುತ್ತಮುತ್ತಲ ಹಳ್ಳಿಯ ಜನಪ್ರತಿನಿಧಿಗಳು, ಮುಖಂಡರು, ಅಣ್ಣತಮ್ಮಂದಿರು ಸಮುದಾಯದ ಸುತ್ತಮುತ್ತಲಿನ ಹಿರಿಯ ಮುಖಂಡರು, ಪೂಜಾರಿಗಳು ಹಾಗೂ ಗ್ರಾಮಸ್ಥರು ಇದ್ದರು.
from India & World News in Kannada | VK Polls https://ift.tt/2FDE60B