- ಕೆಂಪೇಗೌಡ ಎನ್ ಚಿಕ್ಕಬಳ್ಳಾಪುರ: ಎಪಿಎಂಸಿ ಮಾರುಕಟ್ಟೆಯಲ್ಲಿ ಜನವರಿ 7ರಂದು ರೈತರಿಂದ ಸೌತೆ ಕಾಯಿಯನ್ನು ಕ್ವಿಂಟಲ್ಗೆ 80 ರೂ.ಗೆ ಖರೀದಿಸಲಾಗಿದೆ. ಅಂದರೆ, ಒಂದು ಕೆ.ಜಿಗೆ ಕೇವಲ 80 ಪೈಸೆ! ಚಿಕ್ಕಬಳ್ಳಾಪುರ ಮಾತ್ರವಲ್ಲ, ಕೋಲಾರ, ಚನ್ನಪಟ್ಟಣ, ಕೆ.ಆರ್. ಪೇಟೆಯಲ್ಲೂ ರೈತರಿಗೆ ಸಿಕ್ಕಿರುವುದು ಹೆಚ್ಚೆಂದರೆ 2ರಿಂದ 3 ರೂ. ಮಾತ್ರ. ರಾಜ್ಯದ ಇತರ ಭಾಗಗಳಲ್ಲೂ ಧಾರಣೆ ಭಾರಿ ಪ್ರಮಾಣದಲ್ಲಿ ಕುಸಿದಿದೆ. ಹೊಸ ವರ್ಷ ಆರಂಭವಾದ ಬಳಿಕ ನಿರಂತರವಾಗಿ ಇಳಿಯುತ್ತಿರುವ ದರ ಬೆಳೆಗಾರರನ್ನು ಕಂಗಾಲಾಗಿಸಿದೆ. ಹಾಗಂತ, ಚಿಲ್ಲರೆ ಮಾರುಕಟ್ಟೆಯಲ್ಲಿ ಮುಳ್ಳುಸೌತೆ ದರವೇನೂ ವಿಪರೀತ ಇಳಿದಿಲ್ಲ. ಈಗಲೂ ಕೆ.ಜಿಗೆ 15ರಿಂದ 20 ರೂ. ಇದೆ. ಉತ್ಪಾದನೆ ಹೆಚ್ಚು, ಬೇಡಿಕೆ ಕಡಿಮೆ: ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಗೆ ಸೌತೆ ಕಾಯಿ ಆವಕ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬೆಳೆ ಹೆಚ್ಚಾಗಿರುವುದು ಇದಕ್ಕೆ ಕಾರಣ. ಮಾರುಕಟ್ಟೆಗೆ ಬರುತ್ತಿರುವ ಸೌತೆಕಾಯಿಯನ್ನು ಬೆಂಗಳೂರು ಸೇರಿದಂತೆ ನೆರೆಯ ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಬಾಂಬೆ ಇನ್ನಿತರ ಪ್ರದೇಶಗಳಿಗೆ ಸರಬರಾಜು ಆಗುತ್ತಿದ್ದರೂ ಬೆಲೆಯಲ್ಲಿ ಏರಿಕೆ ಕಂಡಿಲ್ಲ. 200 ರೂ. ದಾಟುತ್ತಿಲ್ಲ: ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ತಿಂಗಳ ಹಿಂದೆ ಒಂದು ಕ್ವಿಂಟಾಲ್ ಸೌತೆಕಾಯಿ 500 ರೂ. ರಿಂದ 800 ರೂ.ವರೆಗೆ ಮಾರಾಟವಾಗುತ್ತಿತ್ತು. ಆದರೆ, ಈಗ 80 ರಿಂದ 200 ರೂ. ಒಳಗೆ ಮಾರಾಟ ವಾಗುತ್ತಿದೆ. ಇಷ್ಟು ಕಡಿಮೆ ದರಕ್ಕೆ ಸೌತೆಕಾಯಿ ಕಿತ್ತು ಮಾರುಕಟ್ಟೆಗೆ ಒದಗಿಸುವುದಾದರೂ ಹೇಗೆ? ನಮಗೆ ಖರ್ಚೂ ಕೂಡ ಹುಟ್ಟುತ್ತಿಲ್ಲ ಎಂಬುದು ಬೆಳೆಗಾರರ ಅಳಲಾಗಿದೆ. ಕೆಲವರಂತೂ ಸೌತೆಕಾಯಿಯನ್ನು ಗದ್ದೆಯಲ್ಲೇ ಬಿಟ್ಟಿದ್ದಾರೆ. ಕನಿಷ್ಠ 10 ರೂ. ಸಿಗಬೇಕು: 1 ಎಕರೆ ಪ್ರದೇಶದಲ್ಲಿ ಸೌತೆಕಾಯಿ ಬೆಳೆಯಲು ಕನಿಷ್ಠ 25ರಿಂದ 30 ಸಾವಿರ ವೆಚ್ಚ ತಗಲುತ್ತದೆ. ಒಂದುವರೆ ತಿಂಗಳಲ್ಲಿ ಫಸಲು ಕೈಗೆ ಸಿಗಲಿದ್ದು, ಒಳ್ಳೆಯ ಫಸಲು ಬಂದರೆ 10 ಟನ್ನಷ್ಟು ಸೌತೆಕಾಯಿ ಸಿಗುತ್ತದೆ. ಪ್ರತೀ ಕೆ.ಜಿಗೆ ಕನಿಷ್ಠ 10 ರೂ.ಗಳಿಗೆ ಮಾರಾಟವಾದರಷ್ಟೇ ರೈತರಿಗೆ ಆದಾಯ ಬರುತ್ತದೆ.
from India & World News in Kannada | VK Polls https://ift.tt/2QObatt