ಹೊಸದಿಲ್ಲಿ: ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮುಂಬರುವ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದು, ತಂಡವನ್ನು ಯುವ ಆಟಗಾರ ಕೇದಾರ್ ದೇವಧರ್ ಮುನ್ನಡೆಸಲಿದ್ದು, ವಿಷ್ಣು ಸೋಲಂಕಿ ಉಪನಾಯಕನ ಜವಾಬ್ದಾರಿ ಹೊರಲಿದ್ದಾರೆ. ಕೊರೊನಾ ವೈರಸ್ ಕಾರಣ ಕಳೆದ ಎರಡು ವರ್ಷಗಳಿಂದ ಆಯೋಜನೆ ಆಗದೇ ಉಳಿದಿದ್ದ ಪ್ರತಿಷ್ಠಿತ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯನ್ನು ಈ ಬಾರಿ ಎರಡು ಹಂತದಲ್ಲಿ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಮೊದಲ ಹಂತದಲ್ಲಿ ಲೀಗ್ ಪಂದ್ಯಗಳು ನಡೆಯಲಿದ್ದು, ಜುಲೈನಲ್ಲಿ 2ನೇ ಹಂತ ಶುರುಮಾಡಿ ನಾಕ್ಔಟ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಮೊದಲ ಹಂತದ ಪಂದ್ಯಗಳು ಫೆ.10ರಂದು ಶುರುವಾಗಲಿದ್ದು, ಈ ಸಲುವಾಗಿ ಬರೋಡ ಕ್ರಿಕೆಟ್ ಸಂಸ್ಥೆ ಸೋಮವಾರ ತನ್ನ 20 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದ್ದಾರೆ. ಅನುಭವಿ ಹಾರ್ದಿಕ್ ಪಂಡ್ಯ ಈ ಟೂರ್ನಿಯಿಂದ ಹೊರಗುಳಿದಿರುವುದು ಬರೋಡ ತಂಡಕ್ಕೆ ಭಾರಿ ಹಿನ್ನಡೆ ತಂದೊಡ್ಡಿದೆ. ಬೆನ್ನು ನೋವಿನ ಗಾಯದ ಸಮಸ್ಯೆಗೆ ಶಸ್ತ್ರಚಿಕಿತ್ಸೆ ಪಡೆದ ನಂತರ ಹಾರ್ದಿಕ್ ಪಾಂಡ್ಯ ತಮ್ಮ ಸಂಪೂರ್ಣ ಫಿಟ್ನೆಸ್ ಮರಳಿ ಸಂಪಾದಿಸಲು ಬಹಳಾ ಕಷ್ಟ ಪಡುತ್ತಿದ್ದಾರೆ. ಹೀಗಾಗಿ ಸಂಪೂರ್ಣ ಚೇತರಿಸಿದ ಬಳಿಕವಷ್ಟೇ ಕ್ರಿಕೆಟ್ಗೆ ಮರಳುವ ಪಣ ತೊಟ್ಟಿರುವ ಆಲ್ರೌಂಡರ್ ಟಿ20 ವಿಶ್ವಕಪ್ ಬಳಿಕ ಖುದ್ದಾಗಿ ಟೀಮ್ ಇಂಡಿಯಾ ಆಯ್ಕೆಯಿಂದ ದೂರ ಸರಿದಿದ್ದಾರೆ. ಮುಂಬರುವ ಹದಿನೈದನೇ ಆವೃತ್ತಿಯ ಟೂರ್ನಿಯಲ್ಲಿ ಹೊಸ ಫ್ರಾಂಚೈಸಿ ಅಹ್ಮದಾಬಾದ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿರುವ ಹಾರ್ದಿಕ್, ವೈಟ್ ಬಾಲ್ ಕ್ರಿಕೆಟ್ ಮೂಲಕ ಭರ್ಜರಿ ಕಮ್ಬ್ಯಾಕ್ ಎದುರು ನೋಡುತ್ತಿದ್ದಾರೆ. 2021ರಲ್ಲಿ ಯುಎಇ ಆತಿಥ್ಯದಲ್ಲಿ ನಡೆದ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 28 ವರ್ಷದ ಹಾರ್ದಿಕ್ ಬೌಲಿಂಗ್ ಮಾಡದೇ ಇದ್ದ ಕಾರಣ ಭಾರತ ತಂಡ 6ನೇ ಬೌಲರ್ನ ಕೊರತೆ ಅನುಭವಿಸಿ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಪಂದ್ಯಗಳನ್ನು ಸೋತು ಸೂಪರ್ 12 ಹಂತದಿಂದಲೇ ಸ್ಪರ್ಧೆಯಿಂದ ಹೊರಬಿದ್ದಿತ್ತು. ಇದರ ಬೆನ್ನಲ್ಲೇ ಹಾರ್ದಿಕ್ ಫಿಟ್ನೆಸ್ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದವು. ಫಿಟ್ನೆಸ್ ಇಲ್ಲದ ಆಟಗಾರನನ್ನು ಆಯ್ಕೆ ಮಾಡಿದ್ದಾದರೂ ಏಕೆ? ಎಂದು ಪ್ರಶ್ನೆ ಮಾಡಲಾಗಿತ್ತು. "ಹಾರ್ದಿಕ್ ಗಾಯಗೊಂಡಿದ್ದಾರೆ. ಹೀಗಾಗಿ ಅವರು ಸಂಪೂರ್ಣ ಗುಣಮುಖರಾಗಲು ಬೇಕಿರುವ ಅಗತ್ಯದ ಸಮಯವನ್ನು ನೀಡಲಾಗಿದೆ. ಈ ಮೂಲಕ ಭಾರತ ತಂಡದ ಪರ ಅವರು ಸಾಧ್ಯವಾದಷ್ಟು ಹೆಚ್ಚು ಪಂದ್ಯಗಳನ್ನು ಆಡುವಂತ್ತಾಗಲಿ ಎಂದು ಗಮನ ಕೊಡಲಾಗಿದೆ. ರಣಜಿ ಟ್ರೋಫಿಯಲ್ಲಿ ಅವರು ಆಡಲಿದ್ದಾರೆ ಎಂದು ನಿರೀಕ್ಷಿಸಿದ್ದೇನೆ. ಹೆಚ್ಚು ಬೌಲಿಂಗ್ ಮಾಡಿದಷ್ಟೂ ಅವರ ಶರೀರ ಬಲಿಷ್ಠವಾಗಲಿದೆ," ಎಂದು ಕೆಲ ದಿನಗಳ ಹಿಂದಷ್ಟೇ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಇನ್ನು 2022ರ ಸಾಲಿನ ರಣಜಿ ಟ್ರೋಫಿ ಟೂರ್ನಿ ಜನವರಿ 13ರಂದೇ ಶುರುವಾಗಬೇಕಿತ್ತು. ಆದರೆ ಕೊರೊನಾ ವೈರಸ್ ಸೋಂಕಿನ ಮೂರನೇ ಅಲೆ ಹೆಚ್ಚಾದ ಕಾರಣ ಮುಂದೂಡಲಾಗಿತ್ತು. ಈಗ ಮುಚ್ಚಿದ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ನಡೆಸಲು ಬಿಸಿಸಿಐ ಸಜ್ಜಾಗಿದೆ. ಬರೋಡ ರಣಜಿ ಕ್ರಿಕೆಟ್ ತಂಡ ಹೀಗಿದೆ ಕೇದಾರ್ ದೇವಧರ್, ವಿಷ್ಣು ಸೋಲಂಕಿ, ಪ್ರತ್ಯುಶ್ ಕುಮಾರ್, ಶಿವಾಲಿಕ್ ಶರ್ಮಾ, ಕೃಣಾಲ್ ಪಾಂಡ್ಯ, ಅಭಿಮನ್ಯು ಸಿಂಗ್ ರಜಪೂತ್, ಧ್ರುವ ಪಟೇಲ್, ಮಿತೇಶ್ ಪಟೇಲ್, ಲುಕ್ಮನ್ ಮೆರಿವಾಲ, ಬಾಬಾ ಸಫಿ ಖಾನ್ ಪಠಾಣ್ (ವಿಕೆಟ್ಕೀಪರ್), ಅತೀತ್ ಸೇಥ್, ಭಾರ್ಗವ್ ಭಟ್, ಪಾರ್ಥ್ ಕೊಹ್ಲಿ, ಶಾಶ್ವತ್ ರಾವತ್, ಸೊಯೆಬ್ ಸೊಪಾರಿಯ, ಕಾರ್ತಿಕ್ ಕಾಕಡೆ, ಗುರುಜಿಂದರ್ ಸಿಂಗ್ ಮಾನ್, ಜ್ಯೋತ್ಸ್ನಿಲ್ ಸಿಂಗ್, ನಿನಾದ್ ರಾಥ್ವಾ, ಅಕ್ಷಯ್ ಮೋರೆ.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/poC5l6r