ಬೆಂಗಳೂರು: ಸರಕಾರಿ ಜಮೀನುಗಳಲ್ಲಿ ಹಲವು ವರ್ಷಗಳಿಂದ ಅನಧಿಕೃತವಾಗಿ ಸಾಗುವಳಿ ಮಾಡುತ್ತಿರುವ ಭೂರಹಿತರು, ಸಣ್ಣ ರೈತರು ಜಮೀನುಗಳ ಸಕ್ರಮಕ್ಕೆ ಅರ್ಜಿ ಸಲ್ಲಿಸಲು ಮತ್ತೊಮ್ಮೆ ಒಂದು ವರ್ಷ ಕಾಲಾವಕಾಶ ನೀಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು. ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,''ನಮೂನೆ- 50, ನಮೂನೆ- 57ರಡಿ ಸಕ್ರಮಕ್ಕೆ ಅರ್ಜಿ ಸಲ್ಲಿಸದವರಿಗೆ ಮತ್ತೊಂದು ಅವಕಾಶ ನೀಡಬೇಕು ಎಂಬ ಕೋರಿಕೆಯಿದೆ. ಹಾಗಾಗಿ ಒಂದು ವರ್ಷ ಕಾಲ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲು ಚಿಂತಿಸಲಾಗಿದೆ,'' ಎಂದು ತಿಳಿಸಿದರು. ಕಂದಾಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಕಲಂ 94ಸಿ ಹಾಗೂ 94ಸಿಸಿ ಅಡಿ ನೀಡಿದ ಹಕ್ಕುಪತ್ರಗಳ ನೋಂದಣಿಗೆ ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ. ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಲಕ್ಷಾಂತರ ಬಡವರಿಗೆ ಹಕ್ಕುಪತ್ರ ನೀಡಲಾಗಿದ್ದು, ಅವರು ಮನೆ ನಿರ್ಮಿಸಿಕೊಂಡಿದ್ದಾರೆ. ಆದರೆ ಕಾವೇರಿ ತಂತ್ರಾಂಶದಲ್ಲಿ'ಹಕ್ಕುಪತ್ರ' ಎಂಬ ಆಯ್ಕೆಗೆ ಅವಕಾಶವಿಲ್ಲದ ಕಾರಣ ನೋಂದಣಿಯಾಗದಿರುವುದು ಗಮನಕ್ಕೆ ಬಂದಿದೆ,'' ಎಂದು ಹೇಳಿದರು. ಗೋಮಾಳ, ಇತರೆ ಭೂಮಿಗೆ ಸಂಬಂಧಿಸಿದ ಸಮಿತಿ ರಚನೆ ಬಗ್ಗೆ ಪ್ರತಿಕ್ರಿಯಿಸಿ,''ಈ ಹಿಂದಿನ ನಿಯಮ ಬದಲಿಸಿ, ಕಠಿಣ ನಿಯಮ ಜಾರಿಗೊಳಿಸಲಾಗುವುದು. ಸರಕಾರಿ ಜಮೀನು ಅರ್ಹರಿಗೆ ಸಿಗಬೇಕು. ಯಾವ ರೈತರು ಸಾಗುವಳಿ ಮಾಡುತ್ತಿದ್ದಾರೋ ಅದನ್ನು ಆ ರೈತರಿಗೇ ನೀಡಲಾಗುವುದು,'' ಎಂದು ತಿಳಿಸಿದರು. ''ಮಠ-ಮಾನ್ಯಗಳು, ಸಂಸ್ಥೆ, ಟ್ರಸ್ಟ್ಗಳಿಗೆ ಭೂಮಿ ನೀಡುವಾಗ ಪರಾಮರ್ಶೆ ನಡೆಸಬೇಕು. ಟ್ರಸ್ಟ್ ನೋಂದಣಿಯಾಗಿ ಎಷ್ಟು ವರ್ಷಗಳಾಗಿರಬೇಕು, ಅದರ ಕೆಲಸ ಕಾರ್ಯ, ಸಾಮಾಜಿಕ ಬದ್ಧತೆಯೊಂದಿಗೆ ಕಾರ್ಯ ನಿರ್ವಹಿಸುತ್ತಿದೆಯೇ ಎಂಬ ವಿಚಾರಗಳನ್ನು ಪರಿಶೀಲಿಸಿ ಭೂಮಿ ನೀಡಬೇಕಾಗುತ್ತದೆ,'' ಎಂದು ಸ್ಪಷ್ಟನೆ ನೀಡಿದರು.
from India & World News in Kannada | VK Polls https://ift.tt/02EPy6v