ಶಿವನಂಜಯ್ಯ, ಮದ್ದೂರು: ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಸೇರಿದಂತೆ ನಿರೀಕ್ಷೆಗಿಂತಲೂ ಹೆಚ್ಚಿನ ಮಳೆ ಸುರಿದ ಹಿನ್ನೆಲೆಯಲ್ಲಿ ಕೆರೆ, ಕಟ್ಟೆಗಳು ತುಂಬಿದ್ದು, ವಿ.ಸಿ. ನಾಲೆ ಕೊನೆ ಭಾಗದ ರೈತರು ಕಬ್ಬು, ಭತ್ತ, ರೇಷ್ಮೆ ಸೇರಿದಂತೆ ತೋಟಗಾರಿಕೆ ಬೆಳೆಗಳತ್ತ ಚಿತ್ತ ಹರಿಸಿದ್ದಾರೆ. ಆದರೆ, ರೈತರಿಗೆ ಅಗತ್ಯ ಕೊರತೆ ಕಾಡುತ್ತಿದೆ. ಭತ್ತ ನಾಟಿ ಮಾಡಿದ ದಿನದಿಂದಲೂ ಈಗಾಗಲೇ ಹೂಬಿಟ್ಟು ಕಾಯಿ ಕಚ್ಚುವ ಹಂತಕ್ಕೆ ತಲುಪಿರುವ ವೇಳೆ ಮೇಲು ಗೊಬ್ಬರ, ಯುರಿಯಾ ಸೇರಿದಂತೆ ಡಿಎಪಿ ಕೊರತೆ ನಿರಂತವಾಗಿದೆ. ಕಬ್ಬು ನಾಟಿ ಮಾಡಿದ ಮತ್ತು ಕಟಾವು ಮಾಡಿ ಕೂಳೆ ಬಿಟ್ಟ ಪೈರಿಗೆ ಅಗತ್ಯ ರಸಗೊಬ್ಬರಗಳ ಖರೀದಿಗಾಗಿ ರೈತರು ಪರದಾಡುವಂತಾಗಿದೆ. ತಾಲೂಕಿನಾದ್ಯಂತ ಸಹಕಾರಿ ಸಂಘಗಳೂ ಸೇರಿದಂತೆ ಖಾಸಗಿ ಗೊಬ್ಬರ ಮಾರಾಟಗಾರರ ಬಳಿ ರಾಸಾಯನಿಕ ಗೊಬ್ಬರಗಳು ಲಭ್ಯವಿಲ್ಲದೆ ರೈತಾಪಿ ವರ್ಗ ಪರಿತಪಿಸುವಂತಾಗಿದೆ. ಮದ್ದೂರು ತಾಲೂಕಿನ ಕೊಪ್ಪ, ಆತಗೂರು, ಕಸಬಾ ಮತ್ತು ಸಿಎ ಕೆರೆ ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಕಬ್ಬು, ಭತ್ತ, ರೇಷ್ಮೆ (ಹಿಪ್ಪು ನೇರಳೆ) ಬೆಳೆಗಳಿಗೆ ಸಕಾಲದಲ್ಲಿ ಮೇಲು ಗೊಬ್ಬರವಾಗಿ ರಾಸಾಯನಿಕ ಗೊಬ್ಬರಗಳನ್ನು ಹಾಕದ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದ ಇಳುವರಿ ಕೊರತೆ ಎದುರಾಗುವ ಆತಂಕವಿದೆ. ತಾಲೂಕಿನಲ್ಲಿ 22 ಸಾವಿರ ಎಕರೆ ಭತ್ತ, ಸುಮಾರು 19 ಸಾವಿರ ಎಕರೆ ಪ್ರದೇಶದ ತನಿ ಮತ್ತು ಕೂಳೆ ಬಿಟ್ಟ ಕಬ್ಬು ಹಾಗೂ 10 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯಿದೆ. ಇದರೊಟ್ಟಿಗೆ ತೋಟಗಾರಿಕೆ ಬೆಳೆಗಳಾದ ಹಣ್ಣು, ಹೂ, ತರಕಾರಿ ಬೆಳೆಗಳ ಹತ್ತದಿನೈದು ಸಾವಿರ ಎಕರೆ ಅವಲಂಬಿತ ರೈತರು, ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವಂತಾಗಿದೆ. ಯೂರಿಯಾ, ಪೊಟಾಷ್, ಅಮೋನಿಯಂ ಸಲ್ಫೇಟ್, ಡಿಎಪಿ 10:20:0:13 ಮತ್ತು 10:26 ಸೇರಿದಂತೆ ಇತರೆ ಗೊಬ್ಬರಗಳು ಕಳೆದ ಆರು ತಿಂಗಳಿಂದಲೂ ಮಾರುಕಟ್ಟೆಯಲ್ಲಿ ಸಿಗುತ್ತಿಲ್ಲ. ಆಗೊಮ್ಮೆ, ಈಗೊಮ್ಮೆ ಸಿಗುವ ರಸಗೊಬ್ಬರ ಖರೀದಿಸಲು ಮುಗಿಬೀಳುವ ಅನಿವಾರ್ಯತೆ ಎದುರಾಗಿದೆ. ಕೆಲವು ಖಾಸಗಿ ಮಾಲೀಕತ್ವದ ಮಾರಾಟಗಾರರು ಕಾಳಸಂತೆಯಲ್ಲಿ ರಸಗೊಬ್ಬರಗಳ ಮಾರಾಟಕ್ಕೆ ಮುಂದಾಗುವ ಜತೆಗೆ ನಿಗದಿತ ದರಕ್ಕಿಂತಲೂ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಕೃಷಿ ಮತ್ತು ಇತರೆ ಇಲಾಖೆ ಅಧಿಕಾರಿಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಂಡಿಲ್ಲ ಎಂಬುದು ರೈತರ ಆರೋಪವೂ ಆಗಿದೆ. ಒಟ್ಟಾರೆ ಮದ್ದೂರು ತಾಲೂಕಿನ ನಾಲ್ಕು ಹೋಬಳಿಗಳಲ್ಲೂ ಆರು ತಿಂಗಳಿನಿಂದ ನಿತ್ಯ ಮಂತ್ರವಾಗಿರುವ ರಸಗೊಬ್ಬರ ಇಲ್ಲವೆಂಬ ಕೂಗಿಗೆ ಸ್ಥಳೀಯ ಶಾಸಕರೂ ಸೇರಿದಂತೆ ಸಂಸದರು, ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲಿ ಅಗತ್ಯ ರಸಗೊಬ್ಬರ ಪೂರೈಕೆಗೆ ಒತ್ತಾಯ ಪೂರ್ವಕ ಆಗ್ರಹ ವ್ಯಕ್ತವಾಗಿದೆ. ಮಂಡ್ಯ ಜಿಲ್ಲಾದ್ಯಂತ ರಸಗೊಬ್ಬರಗಳ ಕೊರತೆ ಬಹು ತಿಂಗಳಿನಿಂದಲೂ ಕಾಡುತ್ತಿದೆ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿ ಮುಂದಾಲೋಚನೆ ಇಲ್ಲದಿರುವುದೇ ಇಂದಿನ ಸ್ಥಿತಿಗೆ ಕಾರಣ. ಭಾಷಣ ಮಾಡುವ ಬದಲಾಗಿ ರೈತರ ಹಿತ ಕಾಯುವ ಕಾರ್ಯಕ್ಕೆ ಮುಂದಾಗಬೇಕು. ಸೋ.ಶಿ. ಪ್ರಕಾಶ್ ಸೊಳ್ಳೇಪುರ, ಮುಖಂಡ, ಮೂಲ ಸಂಘಟನೆ ಪೊಟಾಷ್ ಮತ್ತು ಡಿಎಪಿ ರಸಗೊಬ್ಬರ ಪೂರೈಕೆ ಇಲ್ಲದ ಪರಿಣಾಮ ಬದಲಾಗಿ ಕಾಂಪ್ಲೆಕ್ಸ್ಗಳನ್ನು ಬಳಕೆ ಮಾಡಲು ರೈತರಿಗೆ ಶಿಫಾರಸು ಮಾಡಿದ್ದೇವೆ. ಅಗತ್ಯಕ್ಕಿಂತ ಹೆಚ್ಚಾಗಿ ಯೂರಿಯಾ ಬಳಕೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ಕೊರತೆ ಉಂಟಾಯಿತಷ್ಟೇ. ಶೀಘ್ರ ಈ ಕೊರತೆ ನಿವಾರಣೆಯಾಗಲಿದೆ. ಶ್ರೀಕಾಂತ್, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ, ಮದ್ದೂರು
from India & World News in Kannada | VK Polls https://ift.tt/3wgt777