
ಕೆಂಪೇಗೌಡ ಎನ್ ವೆಂಕಟೇನಹಳ್ಳಿ ಚಿಕ್ಕಬಳ್ಳಾಪುರ: ಈಗ ಟೊಮೊಟೊ ಬೆಲೆ ಏರಿಕೆಯದ್ದೇ ಎಲ್ಲೆಡೆ ಸದ್ದು, ಸೇಬಿಗಿಂತಲೂ ದುಬಾರಿ ದರದಲ್ಲಿ ಮಾರಾಟವಾಗುತ್ತಿರುವ ಗ್ರಾಹಕರ ಕೈ ಬಿಸಿ ಮುಟ್ಟಿಸಿದೆ. ಒಂದು ಜಿಲ್ಲೆ ಮತ್ತು ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಟೊಮೇಟೊ ಬೆಳೆಯುವ ಜಿಲ್ಲೆಗಳೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಆವಳಿ ಜಿಲ್ಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಬಿತ್ತನೆಯಾಗಿದ್ದ ಟೊಮೇಟೊ ಶೇ 80 ರಿಂದ 90 ರಷ್ಟು ಅತಿಯಾದ ಮಳೆಯಿಂದಾಗಿ ಬೆಳೆ ನೆಲಕಚ್ಚಿದೆ. ಸೇಬಿಗಿಂತ ಟೊಮೇಟೊ ದುಬಾರಿಜಿಲ್ಲೆಯಲ್ಲಿ ಸದ್ಯ ಸೇಬು ಹಣ್ಣಿಗಿಂತ ಹೆಚ್ಚಿನ ದರದಲ್ಲಿ ಟೊಮೇಟೊ ಮಾರಾಟವಾಗುತ್ತಿದ್ದು, ಸೇಬಿನ ಬೆಲೆ ಕೆಜಿಗೆ 90ರಿಂದ 110 ರೂ, ವರೆಗೆ ಸಿಗುತ್ತಿದೆ. ಆದರೆ, ಟೊಮೇಟೊ ಕೆಜಿಗೆ 80 ರಿಂದ 120 ರೂ, ವರೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಮಳೆಯಿಂದ ಹಾನಿ ನಿರಂತರವಾಗಿ ಸುರಿದ ಭಾರಿ ಮಳೆಗೆ ಟೊಮೇಟೊ ಹಾನಿಯಾಗಿದೆ. ಕಟಾವಿಗೆ ಬಂದಿದ್ದ ಹಣ್ಣು ಕೊಳೆತು ಹೋಗಿದ್ದು, ತೇವಾಂಶ ಹೆಚ್ಚಾಗಿರುವುದರಿಂದ ಬೆಳೆಯಲ್ಲಿ ಬರುತ್ತಿದ್ದ ಹೂವು ನಿಂತು ಹೋಗಿದೆ. ಅತಿವೃಷ್ಟಿಯಿಂದ ಮಾರುಕಟ್ಟೆಗೆ ಬರುತ್ತಿದ್ದ ಟೊಮೇಟೊ ಆವಕ ಕುಸಿತವಾಗಿದೆ. ಇದರಿಂದಾಗಿ ಮಾರುಕಟ್ಟೆಯಲ್ಲಿ ಟೊಮೇಟೊ ದರದಲ್ಲಿ ನೂರರ ಗಡಿ ದಾಟಿದೆ ಎಂಬುದು ಚಿಕ್ಕಬಳ್ಳಾಪುರದ ಎಪಿಎಂಸಿ ವರ್ತಕರ ಮಾತು. ಗ್ರಾಹಕರಿಗೆ ತಟ್ಟಿದ ಬಿಸಿಟೊಮೇಟೊ ದರದಲ್ಲಿ ಆಗಿರುವ ಭಾರೀ ಹೆಚ್ಚಳದ ಬಿಸಿ ನೇರವಾಗಿ ಗ್ರಾಹಕರಿಗೆ ತಟ್ಟಿದ್ದು, ನಿತ್ಯವೂ ಮನೆಯಲ್ಲಿ ಬೇಕಾಗುವ ಈ ತರಕಾರಿಗೆ ಇಷ್ಟೊಂದು ಬೆಲೆ ನೀಡಿ ಖರೀದಿಸುವಂತಾಗಿದೆ. ಪ್ರಸ್ತುತ ಕಾರ್ತಿಕ ಮಾಸದಲ್ಲಿ ಜನರು ಮಾಂಸಾಹಾರ ಸೇವಿಸದಿರುವುದು, ಈ ಸಮಯದಲ್ಲಿ ಶುಭ ಸಮಾರಂಭಗಳು ಹೆಚ್ಚಿರುವುದರಿಂದ ಟೊಮೇಟೊಗೆ ಬೇಡಿಕೆಯೂ ಹೆಚ್ಚಾಗಿದೆ. ಇಬ್ಬರಿಗೂ ನಷ್ಟಒಂದೆಡೆ ಅತಿಯಾದ ಮಳೆಯಿಂದ ಕೊಳೆತಿರುವ ಟೊಮೆಟೊ ಬಿತ್ತನೆ ಮಾಡಿದ್ದ ರೈತರ ಪಾಲಿಗೆ ಹುಳಿ ಹಿಂಡಿದರೆ, ಇತ್ತ ನಿತ್ಯವೂ ಉಪಯೋಗಿಸುವ ಗ್ರಾಹಕರಿಗೆ ಬೆಲೆ ಏರಿಕೆ ಹುಳಿ ಹಿಂಡಿ ಸಪ್ಪೆ ಮಾಡಿದೆ. ಹಾಗಾಗಿ ಪ್ರಸಕ್ತ ಸಾಲಿನ ಅತಿಯಾದ ಮಳೆ ರೈತರಿಗೆ ಹಾಗೂ ಗ್ರಾಹಕರಿಗೂ ತೀವ್ರ ನಷ್ಟವನ್ನುಂಟು ಮಾಡಿದೆ. ಹೋಟೆಲ್ ಮಾಲೀಕರಿಗೂ ಕಷ್ಟನಿರಂತರ ಮಳೆಯಿಂದಾಗಿ ತರಕಾರಿ ಬೆಳೆಗಳು ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿರುವುದರಿಂದ ಎಲ್ಲ ತರಕಾರಿಗಳ ಬೆಲೆಯಲ್ಲಿ ಹೆಚ್ಚಳವಾಗಿದೆ. ಮಾರುಕಟ್ಟೆಗಳಿಗೆ ತರಕಾರಿ ಆವಕ ಕಡಿಮೆಯಾಗಿದ್ದು, ಕಳೆದ ಒಂದು ತಿಂಗಳ ಹಿಂದೆ ಇದ್ದ ತರಕಾರಿ ಬೆಲೆಯಲ್ಲಿ ಈಗ 2 ರಿಂದ 3 ಪಟ್ಟು ಹೆಚ್ಚಳ ಕಂಡಿದ್ದು, ಹೋಟೆಲ್ ಮಾಲೀಕರಿಗೂ ದುಬಾರಿ ಹಣ ನೀಡಿ ತರಕಾರಿ ಖರೀದಿಸುವಂತಾಗಿದೆ. ಟೊಮೇಟೋ ಬೆಳೆ ರಕ್ಷಣೆಗೆ ನಿದ್ದೆಗೆಟ್ಟು ಕಾವಲುಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೇಟೊಗೆ ಬಂಗಾರದ ಬೆಲೆ ಇರುವುದರಿಂದ ಮಳೆಯಿಂದ ಆಳಿದುಳಿದಿರುವ ಟೊಮೇಟೊ ಬೆಳೆಗಳನ್ನು ಸಂರಕ್ಷಿಸಲು ಬೆಳೆಗಾರರು ಮುಂದಾಗಿದ್ದು, ಟೊಮೇಟೊ ಕಳವು ಆಗದಂತೆ ದಿನವೀಡಿ ಕಾವಲು ಕಾಯುತ್ತಿದ್ದಾರೆ. ಕೆಲವೆಡೆ ಟೊಮೇಟೊ ಬೆಳೆ ರಕ್ಷಣೆಗಾಗಿ ಬೆಳೆ ಸುತ್ತ ವಿದ್ಯುತ್ ತಂತಿ ಅಳವಡಿಸಿ ಅಕ್ರಮವಾಗಿ ವಿದ್ಯುತ್ ಹರಿಸುವ ದುಸ್ಸಾಹಕ್ಕೂ ಕೈ ಹಾಕಿದ್ದಾರೆ. ಅತಿಯಾದ ಮಳೆಯ ಕಾರಣ ಟೊಮೇಟೊ ಬೆಳೆ ಹಾಳಾಗಿದ್ದು, ಮಾರುಕಟ್ಟೆಗೆ ಕಡಿಮೆ ಪ್ರಮಾಣದಲ್ಲಿ ಪೂರೈಕೆ ಕಾರಣ ದರ ಹೆಚ್ಚಾಗಿದೆ. ಸದ್ಯ ಸೇಬು ಹಣ್ಣಿಗಿಂತ ಹೆಚ್ಚಿನ ದರದಲ್ಲಿ ಟೊಮೇಟೊ ಮಾರಾಟವಾಗುತ್ತಿದೆ. ಕಳೆದ 15 ದಿನಗಳ ಹಿಂದೆ ನಗರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಜಿ ಟೊಮೇಟೊ 60 ರೂ, ಇದ್ದದ್ದು ಈಗ 120 ಕ್ಕೆ ಏರಿಕೆಯಾಗಿದೆ. ಶ್ರೀನಿವಾಸ್, ವರ್ತಕ ಜಿಲ್ಲೆಯಲ್ಲಿ ನಿರಂತರ ಮಳೆಗೆ ಟೊಮೇಟೊ ಹಣ್ಣು ಗಿಡಗಳಲ್ಲಿಯೇ ಕೊಳೆತು ಹೋಗಿದ್ದು, ಹೆಚ್ಚು ತೇವಾಂಶದಿಂದಾಗಿ ಟೊಮೋಟೊ ಹೂ ಬಿಡದಿರುವುದು, ಇಳುವರಿಯಲ್ಲಿ ಕುಸಿತವಾಗಿದೆ. ಪ್ರಸ್ತುತ ಬೆಲೆ ಹೆಚ್ಚಿರುವ ಸಮಯದಲ್ಲಿ ಬೆಳೆ ಕೈ ಕೊಟ್ಟಿರುವುದು ರೈತರಿಗೆ ಹೆಚ್ಚು ನಷ್ಟವಾಗಿದೆ. ವೆಂಕಟೇಶ್, ಟೊಮೇಟೊ ಬೆಳೆಗಾರ ಈಗ ಟೊಮೇಟೊ ಬೆಲೆ ದುಬಾರಿಯಾಗಿರುವುದರಿಂದ ಮನೆಯಲ್ಲಿ ದಿನ ನಿತ್ಯ ಆಹಾರಕ್ಕೆ ಉಪಯೋಗಿಸುವ ಟೊಮೇಟೊ ಬದಲಿಗೆ ಪರ್ಯಾಯವಾಗಿ ಹುಣಸೆ ಹಣ್ಣು, ನಿಂಬೆ ಹಣ್ಣಿನ ಹುಳಿ ಹಿಂಡಿ ಅಡುಗೆ ತಯಾರಿಸಲು ಮುಂದಾಗಿದ್ದೇವೆ. ಕಲಾವತಿ, ಗೃಹಿಣಿ
from India & World News in Kannada | VK Polls https://ift.tt/3pjAeZt