ಕೃಷಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕಪ್ಪು ಬಂಗಾರವೆಂದು ಪ್ರಸಿದ್ಧವಾದ ಕಾಳು ಮೆಣಸಿನ ಬೆಲೆ ಈಗ ಏರಿಕೆಯ ಹಾದಿಯಲ್ಲಿದೆ. ಆದರೆ ಇದರ ಲಾಭ ಹೆಚ್ಚಿನ ಬೆಳೆಗಾರರಿಗೆ ದಕ್ಕದಂತಾಗಿದೆ. ಕಳೆದ ನಾಲ್ಕು ವರ್ಷಗಳ ಹಿಂದೆ ಏಕಾ ಏಕಿ ಕುಸಿತ ಕಂಡಿದ್ದ ದರ ಅಂತೂ ಈಗ ಚೇತರಿಕೆ ಕಂಡಿದೆ. ಅಂದಿನ ದರಕ್ಕೆ ಹೋಲಿಸಿದರೆ ಈಗ ದುಪ್ಪಟ್ಟು ದರ ದಾಖಲಾಗಿದೆ. ಕಾಳುಮೆಣಸಿನ ಪ್ರಮುಖ ಮಾರುಕಟ್ಟೆಯಾದ ಶಿರಸಿಯಲ್ಲಿ ಕಳೆದ ಎರಡು ದಿನಗಳಿಂದ ಗರಿಷ್ಠ ದರ ಕ್ವಿಂಟಾಲ್ ಗೆ 60 ಸಾವಿರ ರೂ. ಗಳನ್ನು ಮೀರಿದೆ. ಸರಾಸರಿ 54 ಸಾವಿರ ರೂ. ಲಭ್ಯವಾಗುತ್ತಿದೆ. ಇದೇ ದರ 4 ವರ್ಷಗಳ ಹಿಂದೆ ಸಾಕಷ್ಟು ಬೆಳೆಗಾರರಿಗೆ ಲಭ್ಯವಾಗಿತ್ತು. ಅದರಲ್ಲೂ ವರ್ಷಗಟ್ಟಲೇ ಕಾಲ ಈ ದರ ಮುಂದುವರೆದಿತ್ತು. ಆದರೆ ನಂತರ ಕುಸಿಯುತ್ತ ಬಂದು 2019.ರಲ್ಲಿ ಕ್ವಿಂಟಾಲ್ಗೆ 30 ಸಾವಿರ ರೂ. ಗಳಿಗಿಂತ ಕಡಿಮೆ ದಾಖಲಾಗಿ ಬೆಳೆಗಾರರು ನಿರಾಸೆ ಪಡುವಂತಾಗಿತ್ತು. ನಂತರದಲ್ಲಿ 30- 40 ಸಾವಿರ ರೂಗಳ ಮಧ್ಯದಲ್ಲಿ ಮಾರುಕಟ್ಟೆಯಲ್ಲಿ ವಿಕ್ರಿ ಆಗುತ್ತಿತ್ತು. ಮತ್ತೆ ದರ ಏರಿಕೆ ಆಗುತ್ತದೆಂದು ಕಾಯಲಾಗದ ಬೆಳೆಗಾರರು ಕಾಳುಮೆಣಸು ಮಾರುಕಟ್ಟೆಗೆ ಒಯ್ದು ಕೊಟ್ಟಿದ್ದಾರೆ. ಆದರೆ ಈಗ ಮೂರು ವಾರಗಳ ಹಿಂದಿನಿಂದ ದರ ಒಂದೇ ಸಮನೆ ಏರಿಕೆಯಾಗುತ್ತಿದೆ. ದಾಸ್ತಾನು ಕಡಿಮೆಉತ್ತಮ ಬೆಲೆ ಬರುತ್ತದೆ ಎಂದು ಕಾಳು ಮೆಣಸನ್ನು ನಾಲ್ಕೈದು ವರ್ಷಕ್ಕಿಂತ ಹೆಚ್ಚು ಕಾಲ ದಾಸ್ತಾನು ಮಾಡುವ ಪ್ರವೃತ್ತಿ ಬೆಳೆಗಾರರ ವಲಯದಲ್ಲಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ದರ ಚೇತರಿಕೆ ಆಗುವ ಲಕ್ಷಣ ಕಾಣದೆ ಬಹಳಷ್ಟು ರೈತರು ಕಳೆದ ವರ್ಷದಿಂದ ಈಚೆಗೆ ಕಾಳು ಮೆಣಸು ಮಾರಿದ್ದಾರೆ. ಈಗ ದರ 60 ಸಾವಿರ ರೂ. ದಾಟಿದ್ದರೂ ದಾಸ್ತಾನು ಕಡಿಮೆ ಕಾರಣದಿಂದ ಕೆಲವರಿಗೆ ಮಾತ್ರ ಲಾಭ ಸಿಗುತ್ತದೆ. ಅತಿವೃಷ್ಟಿಯಿಂದ ಹಾನಿಈ ವರ್ಷ ಮಳೆಗಾಲದಲ್ಲಿ ಅತಿವೃಷ್ಟಿಯಿಂದಾಗಿ ಕಾಳು ಮೆಣಸಿನ ಬಳ್ಳಿಗಳಿಗೆ ಹಾನಿಯಾಗಿದೆ. ಅದರಲ್ಲೂ ಮಳೆಗಾಲ ಮುಗಿದರೂ ಮತ್ತೆ ಮತ್ತೆ ಮಳೆ ಸುರಿಯುತ್ತಿರುದರಿಂದ ಕಾಳು ಮೆಣಸಿನ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ. ಬಳ್ಳಿ ಕೊಳೆಯುವುದು, ಒಣಗುವುದು, ಮತ್ತು ಬೆಳೆಯುತ್ತಿರುವ ಫಸಲು ಉದುರುವುದು ಬೆಳೆಗಾರರು ನಿರಾಸೆ ಪಡುವಂತಾಗಿದೆ. ಇದರಿಂದ ಈ ವರ್ಷದ ಹಂಗಾಮಿನಲ್ಲಿ ಒಟ್ಟಾರೆ ಕಾಳು ಮೆಣಸು ಇಳುವರಿ ಬಹಳಷ್ಟು ಕಡಿಮೆಯಾಗಲಿದೆ ಎಂಬ ಅನಿಸಿಕೆ ಬೆಳಗಾರರ ವಲಯದಲ್ಲಿ ಕೇಳಿ ಬರುತ್ತಿದೆ. ಕಾಳು ಮೆಣಸು ಹೆಚ್ಚು ಪರಿಶ್ರಮದ ಬೆಳೆಯಾಗಿದೆ. ಅದಕ್ಕೆ ತಕ್ಕಂತೆ ಬೆಲೆ ಇರಬೇಕು. ಆದರೆ ಈಗ ಏರಿಕೆಯಾಗಿರುವ ದರ ಹೆಚ್ಚೇನು ಅಲ್ಲ ಎನ್ನುವಂತಿದೆ ಎನ್ನುತ್ತಾರೆ ಶಿರಸಿಯ ಕೃಷಿಕ ಕೆ.ಎಂ ಹೆಗಡೆ. ಯಾವ ವರ್ಷ ಎಷ್ಟು ಬೆಲೆ ಇತ್ತು?
| ವರ್ಷ | ಬೆಲೆ (ಸಾವಿರ ₹ಗಳಲ್ಲಿ) |
| 2017 | 60-65 |
| 2019 | 28-30 |
| 2020 | 36- 40 |
| 2021 | 52-60 |
from India & World News in Kannada | VK Polls https://ift.tt/3119mon