
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 'ಕಳವಾದ ಸೊತ್ತು ಮರಳಿಸುವ ಕಾರ್ಯಕ್ರಮ ಹಾಗೂ ಪೊಲೀಸ್ ಮತ್ತು ಸೇವಾ ಘಟಕಗಳ ಪ್ರದರ್ಶನ' ಗುರುವಾರ ನಗರದ ಪುರಭವನದಲ್ಲಿ ನಡೆಯಿತು. ಹಸ್ತಾಂತರ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡಿ, ಕಳವಾದ ಸೊತ್ತುಗಳನ್ನು ಪತ್ತೆಹಚ್ಚಿ ಮರಳಿಸುವ ಮೂಲಕ ಪೊಲೀಸ್ ಇಲಾಖೆ ಜನರ ನಂಬಿಕೆಯನ್ನು ಉಳಿಸುವ ಪ್ರಯತ್ನ ಮಾಡಿದೆ. ಕಳವಾದ ಸೊತ್ತುಗಳನ್ನು ಆರೋಪಿ ಸಮೇತ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸುವುದು ಸುಲಭದ ಮಾತಲ್ಲ. ಕಳ್ಳತನ ಘಟನೆ ತಡೆಗಟ್ಟಲು ನಾವು ದೂರದ ಕಡೆಗಳಿಗೆ ತೆರಳುವಾಗ ಮುಂಚಿತವಾಗಿ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ವಠಾರ, ಕಟ್ಟಡ ಇಲ್ಲವೇ ಮನೆಯಲ್ಲಿ ಸಾಧ್ಯವಾದರೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಹೆಚ್ಚಿನ ಸಂದರ್ಭಗಳಲ್ಲಿ ಕಳ್ಳತನ ಘಟನೆ ನಡೆದಾಗ ಪೊಲೀಸರಿಗೆ ದೂರು ನೀಡುವ ಗೋಜಿಗೆ ಹೋಗುತ್ತಿಲ್ಲ. ಇಂತಹ ನಿರ್ಲಕ್ಷ್ಯದ ಧೋರಣೆ ತಪ್ಪಬೇಕು. ಪೊಲೀಸ್ ಇಲಾಖೆಯಲ್ಲಿ ನಂಬಿಕೆ ಇರಿಸಬೇಕು. ಅಲ್ಲದೆ ಯಾವುದೇ ಘಟನೆಗಳು ನಡೆದಾಗ ಬೇರೆಯವರ ತಪ್ಪಿನಿಂದ ನಾವು ಪಾಠ ಕಲಿಯಬೇಕು ಎಂದರು. ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಇಲಾಖೆಯ ವಿವರ ನೀಡಿದ್ದಲ್ಲದೆ ಪ್ರಕರಣವನ್ನು ಬೇಧಿಸಲು ಕಾರಣಕರ್ತರಾದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು. ಸನ್ಮಾನ ಪವರ್ ಲಿಫ್ಟಿಂಗ್ ಚಾಂಪಿಯನ್, ಸೈಬರ್ ಕ್ರೈಂ ಸಿಬ್ಬಂದಿ ವಿಜಯ ಕಾಂಚನ್ ಮತ್ತು ಈಜು ಚಾಂಪಿಯನ್ ಚಿಂತನ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ನಗರ ಕಾನೂನು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹರಿರಾಂ ಶಂಕರ್, ಸಂಚಾರ ಮತ್ತು ಅಪರಾಧ ವಿಭಾಗದ ಉಪಪೊಲೀಸ್ ಆಯುಕ್ತ ದಿನೇಶ್ ಕುಮಾರ್, ನಗರ ಸಶಸ್ತ್ರ ಪಡೆಯ ಉಪಪೊಲೀಸ್ ಆಯುಕ್ತ ಚೆನ್ನಬಸಪ್ಪ ಬಸಪ್ಪ ಹಡಪದ, ದಕ್ಷಿಣ ಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತ ರಂಜಿತ್ ಬಂಡಾರು ಉಪಸ್ಥಿತರಿದ್ದರು. ಬರ್ಕೆ ಇನ್ಸ್ಪೆಕ್ಟರ್ ಜ್ಯೋತಿರ್ಲಿಂಗಂ ಕಾರ್ಯಕ್ರಮ ನಿರೂಪಿಸಿದರು. 2.90 ಕೋಟಿ ರೂ.ಸೊತ್ತು ವಶ18 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ 2020ರಲ್ಲಿ ನಡೆದ 253 ಕಳವು ಪ್ರಕರಣಗಳಲ್ಲಿ 212 ಕೇಸ್ ಪತ್ತೆ ಮಾಡಲಾಗಿದೆ. 2021ರಲ್ಲಿ ಇಲ್ಲಿವರೆಗೆ 277 ಕಳವು ಪ್ರಕರಣಗಳಲ್ಲಿ 137 ಪತ್ತೆ ಹಚ್ಚಲಾಗಿದೆ. ಕಳವು ಪ್ರಕರಣಗಳಲ್ಲಿ 20 ಚತುಷ್ಚಕ್ರ ವಾಹನ, 105 ದ್ವಿಚಕ್ರ ಹಾಗೂ 135 ಮೊಬೈಲ್ ಕಳ್ಳತನ ನಡೆದಿದೆ. ಅಲ್ಲದೆ 20 ಕೆಜಿ ಬೆಳ್ಳಿ, 3 ಕೆಜಿ ಚಿನ್ನ ಸೇರಿ ಕಳವಾದ ಸೊತ್ತಿನ ಮೌಲ್ಯ ಒಟ್ಟು 2.90 ಕೋಟಿ ರೂ. ಆಗಿದೆ. ಕಳ್ಳತನಕ್ಕೆ ಸಂಬಂಧಿಸಿ 726 ಆರೋಪಿಗಳನ್ನು ಬಂಧಿಸಲಾಗಿದೆ. ಗಮನ ಸೆಳೆದ ಸಂದೇಶಇದು ನನ್ನ ಕಥೆ ಲಾರಿಯೊಂದರಲ್ಲಿ ತೂಗು ಹಾಕಲಾದ ಬರವಣಿಗೆ ಎಲ್ಲರ ಗಮನ ಸೆಳೆಯಿತು. ನನ್ನನ್ನು ದಿ.27-04-2021ರಂದು ಮೂಡುಬಿದಿರೆ ತಾಲೂಕು ಬೆಳುವಾಯಿ ಗ್ರಾಮದ ಬೆಳುವಾಯಿ ಎಂಬಲ್ಲಿಂದ ಕಳ್ಳರು ಕಳವು ಮಾಡಿದ್ದು, ಬಳಿಕ ಪೊಲೀಸರು ನನ್ನನ್ನು ಕಳ್ಳರಿಂದ ಬಿಡಿಸಿ ನನ್ನ ಮಾಲೀಕರ ಮಡಿಲಿಗೆ ಹಾಕಿದ್ದಾರೆ. ಧನ್ಯವಾದ ಮಂಗಳೂರು ಪೊಲೀಸರಿಗೆ. ಇನ್ಶೂರೆನ್ಸ್ ಮಾಡಿಸಿ ನನ್ನ ಹೆಸರು ಕೆಟಿಎಂ ಡ್ಯೂಕ್. ನನ್ನ ಮಾಲೀಕ 2016ರಲ್ಲಿ ಖರೀದಿ ಮಾಡಿರುತ್ತಾನೆ. ಆದರೆ 2 ವರ್ಷದಿಂದ ಇನ್ಶೂರೆನ್ಸ್ ಮಾಡಿಸಿರುವುದಿಲ್ಲ. ಹೀಗಿರುವಾಗ 2021ರ ಅ.4ರಂದು ನನ್ನ ಮೇಲೆ ಇಬ್ಬರು ಕುಳಿತುಕೊಂಡು ಹೋಗುವಾಗ ಅಪಘಾತವಾಗಿ ಇಬ್ಬರೂ ಮರಣ ಹೊಂದಿದ್ದಾರೆ. ಈಗ ನನ್ನನ್ನು ಪೊಲೀಸ್ ಠಾಣೆಯಲ್ಲಿ ಹರಾಜಿಡಲಾಗಿದೆ. ನನ್ನ ಪರಿಸ್ಥಿತಿ ಯಾರಿಗೂ ಬರದಿರಲಿ. ನಿಮ್ಮ ವಾಹನಕ್ಕೆ ಇನ್ಶೂರೆನ್ಸ್ ಮಾಡಿಸಿ. ಕಾರ್ಯಕ್ರಮದಲ್ಲಿ ಗಮನ ಸೆಳೆದ ಅಂಶಗಳು
- ಪೊಲೀಸ್ ಹಾಗೂ ಸೇವಾ ಘಟಕಗಳನ್ನು ಜನತೆಗೆ ಪರಿಚಯಿಸುವ ಮೂಲಕ ನಗರ ಪೊಲೀಸ್ ಕಮಿಷನರೇಟ್, 'ಜನರ ಬಳಿಗೆ ಪೊಲೀಸ್ ಇಲಾಖೆ' ಪರಿಕಲ್ಪನೆಯನ್ನು ಸಾಕಾರಗೊಳಿಸಲು ಮುಂದಡಿಯಿಟ್ಟಿತು.
- ನಾನಾ ಸೇವಾ ಘಟಕಗಳಾದ ಪೊಲೀಸ್ ಬ್ಯಾಂಡ್, ಅಪರಾಧ ಪತ್ತೆ ವಿಭಾಗ, ಸೈಬರ್ ಕ್ರೈಂ, ಸಂಚಾರಿ ಘಟಕ, ಡ್ರಗ್ಸ್ ಮತ್ತು ನಾರ್ಕೋಟಿಕ್ಸ್ ಘಟಕ, ನಗರ ಸಶಸ್ತ್ರ ಘಟಕ, ಶ್ವಾನದಳ, ಅಗ್ನಿಶಾಮಕ ದಳದ ಮಾಹಿತಿ ನೀಡಲಾಗುತ್ತಿತ್ತು.
- ನಾನಾ ಪೊಲೀಸ್ ಠಾಣೆಗಳಲ್ಲಿ ಪತ್ತೆ ಮಾಡಲಾದ ಕಳವಾದ ಸೊತ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಪತ್ತೆ ಮಾಡಿದ ಸೊತ್ತುಗಳಲ್ಲಿ ನಗದು, ಚಿನ್ನಾಭರಣ, ಚಿನ್ನದ ಗಟ್ಟಿಗಳೂ ಸೇರಿತ್ತು.
- ಹೊರಾಂಗಣದಲ್ಲಿ ಪ್ರಕರಣಗಳಲ್ಲಿ ವಶಪಡಿಸಿದ ವಾಹನಗಳ ಪ್ರದರ್ಶನವೂ ನಡೆಯಿತು. ಇದರಲ್ಲಿ ಅಪಘಾತಕ್ಕೀಡಾದ ವಾಹನಗಳಿದ್ದರು.
- ಬೆಳಗ್ಗೆ 10 ಗಂಟೆಯಿಂದ ಸಂಜೆ 6ವರೆಗೆ ನಡೆದ ಕಾರ್ಯಕ್ರಮದಲ್ಲಿ ನಗರದ ನಾನಾ ಶಾಲಾ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ವೀಕ್ಷಿಸಿದರು.
from India & World News in Kannada | VK Polls https://ift.tt/312W3nF