ಮಳೆ ನಿಂತು ಹೋದ ಮೇಲೆ ರೈತರ ಬದುಕು ಛಿದ್ರ; ಚಿಕ್ಕಬಳ್ಳಾಪುರದ ತೋಟ, ಹೊಲಗಳಲ್ಲಿ ಕೊಳೆಯುತ್ತಿವೆ ನಾನಾ ಬೆಳೆ!

ಕಣಿತಹಳ್ಳಿ ಎನ್‌ ಚಂದ್ರೇಗೌಡ ಚಿಕ್ಕಬಳ್ಳಾಪುರ: ಹೊಲಗಳಲ್ಲೇ ಮೊಳಕೆಯೊಡೆದ ರಾಗಿ, ನೆಲಗಡಲೆ, ಮೇವಾಗಿ ಬಳಕೆಯಾಗುತ್ತಿದ್ದ ರಾಗಿ ಪೈರು, ಮುಸುಕಿನ ಜೋಳ ಮಣ್ಣು ಪಾಲು... ನಾನಾ ರೋಗಗಳಿಗೆ ತುತ್ತಾದ ಟೊಮೇಟೊ... ಮೂಲಂಗಿ... ತರಕಾರಿ ಬೆಳೆಗಳು... ಇರುವ ಬೆಳೆಗಳನ್ನು ರಕ್ಷಿಸಲಾಗದೆ ರೈತರ ಪರದಾಟ... ಇದು ಸತತ 2 ತಿಂಗಳ ನಂತರ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ರೈತರ ದಯನೀಯ ಸ್ಥಿತಿ. 2019-2020ರಲ್ಲಿ ಕೊರೊನಾ ಬಿಟ್ಟೂ ಬಿಡದೆ ಕಾಡಿ ಕೃಷಿಕರ ಬದುಕು ಬೀದಿಗೆ ಬಿದ್ದಿತ್ತು. 2021ರಲ್ಲಿಯಾದರೂ ಉತ್ತಮ ಬೆಳೆ ಬೆಳೆಯಬಹುದು ಎಂದು ರೈತರು ನಿರೀಕ್ಷಿಸಿದ್ದರು. ಆದರೆ ಈ ಬಾರಿ ಬಿಟ್ಟೂ ಬಿಡದೆ ಕಾಡಿದ ಮಳೆರಾಯ ರೈತರ ಬದುಕನ್ನು ಮೂರಾಬಟ್ಟೆಯಾಗಿಸಿದೆ. ಅರೆಕಾಸಿನ ಪರಿಹಾರ ಬೇಡವೇ ಬೇಡ ರಾಜ್ಯ ಮತ್ತು ಕೇಂದ್ರ ಸರಕಾರ ಜಿಲ್ಲೆಯಲ್ಲಿ ಆಗಿರುವ ಬೆಳೆ ನಷ್ಟವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಬೇಕು. ಸತತ ಬರಗಾಲದಿಂದ ಕಂಗೆಟ್ಟಿದ್ದ ಜನರು ಜೀವನವನ್ನು ಈಗ ಅತಿವೃಷ್ಟಿ ಹಿಂಡಿ ಹಿಪ್ಪೆ ಮಾಡಿದೆ. ಹೀಗಾಗಿ ಓಬಿರಾಯನ ಕಾಲದ ಪ್ರಕೃತಿ ವಿಕೋಪ ಪರಿಹಾರ ನಿಯಮಗಳಡಿ ಅರೆಕಾಸಿನ ಪರಿಹಾರ ವಿತರಿಸಿದರೆ ರೈತರಿಗೆ ಯಾವುದಕ್ಕೂ ಸಾಲುವುದಿಲ್ಲ. ಒಂದು ಗುಂಟೆಗೆ 68 ರೂ. ಪರಿಹಾರ ಕೊಟ್ಟರೆ ರೈತರ ಜೀವನ ಹೇಗೆ ಎಂಬುದು ಪ್ರಶ್ನೆ. 2 ವರ್ಷ ಬೇಕು ಜಿಲ್ಲೆಯಲ್ಲಿ ಸುಮಾರು 1,350 ಕೆರೆಗಳಿವೆ. ಅವುಗಳ ಪೈಕಿ 1,024 ಕೆರೆಗಳು ತುಂಬಿಕೊಂಡಿವೆ. ಇದಕ್ಕಿಂತಲೂ ಹೆಚ್ಚಾಗಿ ರಾಜಕಾಲುವೆಗಳು, ಪೋಷಕ ಕಾಲುವೆಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಕಾರಣ ನೀರೆಲ್ಲ ತೋಟಗಳಲ್ಲಿ ನಿಂತು ಬೆಳೆ ಗಳನ್ನು ಆಪೋಷನ ತೆಗೆದುಕೊಂಡಿವೆ. ಸದ್ಯದ ಮಟ್ಟಿಗೆ ನೀರು ತುಂಬಿರುವ ತೋಟಗಳನ್ನು ಸರಿಪಡಿಸಲು ಇನ್ನೊಂದೆರಡು ವರ್ಷವಾದರೂ ಬೇಕು ಎನ್ನುವ ಪರಿಸ್ಥಿತಿ ಇದೆ. ಬೆಳೆ ಆಧಾರಿತ ವೆಚ್ಚ ಪರಿಹಾರ ಸಿಗಲಿಸದ್ಯಕ್ಕೆ ಜಿಲ್ಲಾಡಳಿತ ಸರಕಾರವೇನೋ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಎಂದು ಹೇಳಿದೆ, ಇಲಾಖೆಗಳು ಈ ನಿಟ್ಟಿನಲ್ಲಿ ಸಮೀಕ್ಷೆ ನಡೆಸುತ್ತಿವೆ. ಆದರೆ ಈಗಾಗಲೇ ಬೆಳೆ ಸಮೀಕ್ಷೆ ಮಾಡಿರುವುದರಿಂದ ಯಾವ ಜಮೀನಲ್ಲಿ ಎಂತಹ ಬೆಳೆಗಳಿವೆ ಎಂಬುದಕ್ಕೆ ದಾಖಲೆಗಳು ಇಲಾಖೆಗಳ ಬಳಿ ಇವೆ. ಹೀಗಾಗಿ ಎಲ್ಲ ಬೆಳೆಗಳು ಒಂದೇ ಪರಿಹಾರ ಎಂಬ ಮಾನ ದಂಡದಡಿ ಅರೆಕಾಸಿನ ಪರಿಹಾರ ಕೊಡುವುದನ್ನು ಮೊದಲು ನಿಲ್ಲಿಸಬೇಕು. ಪ್ರತಿ ಕೃಷಿ ಬೆಳೆಯೂ ತನ್ನದೇ ವೆಚ್ಚ ತಗುಲುತ್ತದೆ. ನೆಲಗಡಲೆ ಬೆಳೆಗೆ ಬೇರೆಯದ್ದೇ ವೆಚ್ಚವಿದ್ದರೆ ಟೊಮೇಟೊ ಬೆಳೆಗೆ ಬೇರೆಯದ್ದೇ ವೆಚ್ಚವಿರುತ್ತದೆ. ಹೀಗಾಗಿ ಸರಕಾರ ಬೆಳೆ ವೆಚ್ಚ ಆಧರಿಸಿ ರೈತರಿಗೆ ಪರಿಹಾರ ನೀಡಬೇಕು. ಪರಿಹಾರ ಕೊಡಬೇಕು, ಕೊಟ್ಟಿದ್ದೇವೆ ಎಂಬ ಮನೋಭಾವದಲ್ಲಿ ಪರಿಹಾರ ನೀಡುವುದು ಅನಗತ್ಯ. ರೈತರಿಗೆ ಆಗಿರುವ ನೈಜ ನಷ್ಟದ ಸಮೀಕ್ಷೆ ಮಾಡಿ ಸೂಕ್ತ ಪರಿಹಾರ ನೀಡಲು ಸರಕಾರ ಮುಂದಾಗಬೇಕಿದೆ. ಬೆಳೆ ಬಿತ್ತಲು ಮಾಡಿರುವ ವೆಚ್ಚವನ್ನು ಆಧರಿಸಿ ಸರ್ಕಾರ, ಬೆಳೆ ಹಾನಿ ಪರಿಹಾರ ನೀಡಬೇಕೆಂಬುದು ರೈತರ ಆಗ್ರಹವಾಗಿದೆ. ಪರಿಹಾರ ಸಿಗೋದು ಯಾವಾಗ? ಜಿಲ್ಲೆಯಲ್ಲಾದ ಮಳೆ ನಷ್ಟ ವೀಕ್ಷಿಸಲು ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರು, ಮಾಜಿ ಸಿಎಂಗಳು ಬಂದು ಹೋದರೂ ರೈತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ಸಿಕ್ಕರೂ ಎಷ್ಟು ಸಿಗುತ್ತದೆ ಎಂಬುದರ ಬಗ್ಗೆ ಖಾತರಿಯಿಲ್ಲ. ಹೀಗಾಗಿ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ.


from India & World News in Kannada | VK Polls https://ift.tt/3FSpV5a

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...