'ಈತ ಓಪನಿಂಗ್‌ ಬ್ಯಾಟ್ಸ್‌ಮನ್‌ ರೀತಿ ಕಾಣುತ್ತಿಲ್ಲ' ಗಿಲ್‌ ಬಗ್ಗೆ ಚೋಪ್ರಾ ಅಚ್ಚರಿ ಹೇಳಿಕೆ!

ಹೊಸದಿಲ್ಲಿ: ಟೆಸ್ಟ್‌ ಓಪನರ್‌ ಆಗಿ ಆಡುವ ಬ್ಯಾಟಿಂಗ್‌ ತಂತ್ರ ಶುಭಮನ್‌ ಗಿಲ್‌ ಅವರ ಬಳಿ ಇಲ್ಲವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಮಾಜಿ ಕ್ರಿಕೆಟಿಗ ಯುವ ಬ್ಯಾಟ್ಸ್‌ಮನ್‌ ಆಡುವ ಶೈಲಿ ಮಧ್ಯಮ ಕ್ರಮಾಂಕಕ್ಕೆ ಸೂಕ್ತವಾಗುತ್ತದೆ ಎಂದು ಹೇಳಿದ್ದಾರೆ. ಕಾನ್ಪುರದ ಗ್ರೀನ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ಗುರುವಾರ ನ್ಯೂಜಿಲೆಂಡ್‌ ವಿರುದ್ಧ ಆರಂಭವಾದ ಮೊದಲನೇ ಟೆಸ್ಟ್‌ ಪಂದ್ಯದ ಆರಂಭಿಕ ದಿನ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ ಶುಭಮನ್‌ ಗಿಲ್‌ ಆಕರ್ಷಕ ಅರ್ಧಶತಕ ಸಿಡಿಸಿದರು. ಕ್ರೀಸ್‌ನಲ್ಲಿ ಹೊಂದಿಕೊಂಡಿದ್ದ ಗಿಲ್‌, ಭೋಜನ ವಿರಾಮದ ಬಳಿಕ ಕೈಲ್‌ ಜೇಮಿಸನ್‌ ಎಸೆತವನ್ನು ಅರಿಯುವಲ್ಲಿ ವಿಫಲರಾಗಿ ಕ್ಲೀನ್‌ ಬೌಲ್ಡ್‌ ಆದರು. ಮೊದಲನೇ ಟೆಸ್ಟ್‌ ಆರಂಭಿಕ ದಿನದಾಂತ್ಯಕ್ಕೆ ಸ್ಟಾರ್‌ ಸ್ಪೋರ್ಟ್ಸ್‌ ಚರ್ಚೆಯಲ್ಲಿ ಭಾಗವಹಿಸಿದ್ದ ಆಕಾಶ್‌ ಚೋಪ್ರಾ, 22ರ ಪ್ರಾಯದ ಅವರ ಬ್ಯಾಟಿಂಗ್‌ ಶೈಲಿಗೆ ಅಗ್ರ ಕ್ರಮಾಂಕ ಸೂಕ್ತವಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ನಾನು ನೋಡಿದಾಗಲೆಲ್ಲಾ ಆತ ಟೆಸ್ಟ್ ಓಪನರ್‌ ಆಗಿ ಕಾಣುವುದಿಲ್ಲ. ಇನ್‌ಸೈಡ್‌ ದಿ ಲೈನ್‌ಗೆ ಆತ ಆಡುವಾಗ ಔಟ್‌ ಸೈಡ್‌ ಎಡ್ಜ್‌ ಹಾಗೂ ಇನ್‌ ಸೈಡ್‌ ಎಡ್ಜ್‌ ಎರಡೂ ಮಾಡಿಕೊಳ್ಳುತ್ತಾರೆ. ಓಪನರ್‌ ಬ್ಯಾಟ್ಸ್‌ಮನ್‌ಗಳಿಂದ ಯಾರೂ ಇದನ್ನು ನಿರೀಕ್ಷೆ ಮಾಡುವುದಿಲ್ಲ," ಎಂದು ಭಾರತದ ಮಾಜಿ ಆರಂಭಿಕ ಹೇಳಿದ್ದಾರೆ. ಸ್ಪಿನ್‌ ಬೌಲಿಂಗ್‌ಗೆ ಶುಭಮನ್‌ ಗಿಲ್ ಅತ್ಯುತ್ತಮ ಕೌಶಲವನ್ನು ಹೊಂದಿದ್ದಾರೆಂದು ಇದೇ ವೇಳೆ ಆಕಾಶ್‌ ಚೋಪ್ರಾ ಶ್ಲಾಘಿಸಿದ್ದಾರೆ. "ಶುಭಮನ್ ಗಿಲ್‌ ಸ್ಪಿನ್‌ಗೆ ಅದ್ಭುತವಾಗಿದ್ದಾರೆ. ಅವರು ಉದ್ದವಾಗಿರುವುದರಿಂದ ತಮ್ಮ ಪಾದವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳುತ್ತಾರೆ. ಸ್ಪಿನ್‌ ಬೌಲಿಂಗ್‌ಗೆ ಅವರ ಫುಟ್‌ವರ್ಕ್‌ ಚೆನ್ನಾಗಿದೆ. ಅವರ ಡಿಫೆನ್ಸ್‌ ಅಂಥೂ ಅದ್ಭುತವಾಗಿದೆ," ಎಂದು ಯುವ ಆಟಗಾರರನ್ನು ಕೊಂಡಾಡಿದರು. ಒಮ್ಮೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದರೆ, ಶುಭಮನ್‌ ಗಿಲ್‌ ಅವರ ನಿಜವಾದ ಸಾಮರ್ಥ್ಯ ಏನೆಂಬುದು ನಮಗೆ ಅರ್ಥವಾಗಲಿದೆ ಎಂದು ಆಕಾಶ್‌ ಚೋಪ್ರಾ ಇದೇ ವೇಳೆ ತಿಳಿಸಿದ್ದಾರೆ. "ನನ್ನ ಪ್ರಕಾರ ಶುಭಮನ್ ಗಿಲ್‌ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್. ಆದರೆ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಆರಂಭಿಸುತ್ತಿದ್ದಾರೆ. ಅದರಂತೆ ಅವರು ಓಪನರ್‌ ಆಗಿಯೂ ಅತ್ಯುತ್ತಮವಾಗಿ ಬ್ಯಾಟ್‌ ಮಾಡುತ್ತಿದ್ದಾರೆ. ಆದರೆ ಅವರ ಬ್ಯಾಟಿಂಗ್‌ನಲ್ಲಿ ನಿಜವಾದ ಬಣ್ಣ ಬಯಲಾಗುವುದು ಮಧ್ಯಮ ಕ್ರಮಾಂಕದಲ್ಲಿ ಮಾತ್ರ, " ಎಂದು ಅವರು ಹೇಳಿದ್ದಾರೆ. ಕೆ.ಎಲ್‌ ರಾಹುಲ್‌ ಗಾಯಕ್ಕೆ ತುತ್ತಾಗಿ ಟೆಸ್ಟ್‌ ಸರಣಿಯಿಂದ ಹೊರ ನಡೆಯುವುದಕ್ಕೂ ಮುನ್ನ ಶುಭಮನ್‌ ಗಿಲ್‌ ಅವರ ಬದಲು ಓಪನಿಂಗ್‌ ಬ್ಯಾಟಿಂಗ್‌ ಸ್ಥಾನದಲ್ಲಿ ಮಯಾಂಕ್‌ ಅಗರ್ವಾಲ್‌ ಅವರನ್ನು ಆಡಿಸಲು ಟೀಮ್‌ ಮ್ಯಾನೇಜ್‌ಮೆಂಟ್‌ ಎದುರು ನೋಡುತ್ತಿತ್ತು ಎಂಬ ಬಗ್ಗೆ ವರದಿಯಾಗಿತ್ತು. ಆದರೆ, ಕೆ.ಎಲ್‌ ಗಾಯಕ್ಕೆ ತುತ್ತಾಗಿ ಹೊರ ನಡೆದ ಬಳಿಕ ಗಿಲ್‌ ಹಾಗೂ ಮಯಾಂಕ್ ಅವರಿಂದ ಓಪನಿಂಗ್‌ ಮಾಡಿಸಲಾಯಿತು. ಮೊದಲನೇ ದಿನದಾಟದ ಅಂತ್ಯಕ್ಕೆ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 84 ಓವರ್‌ಗಳಿಗೆ 4 ವಿಕೆಟ್‌ ನಷ್ಟಕ್ಕೆ 258 ರನ್‌ ಗಳಿಸಿದೆ. ಶುಭಮನ್‌ ಗಿಲ್‌ 52 ರನ್‌ ಗಳಿಸಿದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌(75*) ಹಾಗೂ ರವೀಂದ್ರ ಜಡೇಜಾ(50*) ಅಜೇಯ 113 ರನ್‌ ಜೊತೆಯಾಟವಾಡಿದರು. ಇಂದು ಈ ಜೋಡಿ ಬ್ಯಾಟಿಂಗ್‌ ಮುಂದುವರಿಸಲಿದೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3HQcjJz

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...