ಕಲಬುರಗಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ನಾಲ್ಕೈದು ಜನರ ತಂಡವೊಂದು ಯುವಕನೊಬ್ಬನನ್ನು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಮನಸೋ ಇಚ್ಛೆ ಮಚ್ಚು ಮತ್ತು ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಸಾರ್ವಜನಿಕರ ಎದುರಲ್ಲೇ ನಡೆದ ಕೊಲೆಯಿಂದಾಗಿ ಇಡೀ ಕೇಂದ್ರ ಬಸ್ ನಿಲ್ದಾಣದಲ್ಲಿ ಕೆಲ ಹೊತ್ತು ಆತಂಕ ಮನೆ ಮಾಡಿತ್ತು. ಕೊಲೆಯಾದ ಯುವಕನನ್ನು ಆನಂದ್ ಚಂದ್ರಕಾಂತ್ ನಂದೂರ್(26) ಎಂದು ಗುರುತಿಸಲಾಗಿದೆ. ಈತ ನಿರುದ್ಯೋಗಿಯಾಗಿದ್ದು ಕೆಲಸಕ್ಕಾಗಿ ಅಲೆಯುತ್ತಿದ್ದ ಎಂದು ಮಾಹಿತಿ ದೊರೆತಿದೆ. ಆದರೆ ಹಣಕಾಸಿನ ವಿಷಯದಲ್ಲಿ ಕೆಲವರೊಂದಿಗೆ ಈತ ಜಗಳವಾಡಿದ್ದ ಎನ್ನಲಾಗುತ್ತಿದೆ. ಹೀಗಾಗಿ ಹಲವರೊಂದಿಗೆ ವೈಷಮ್ಯವು ಕಟ್ಟಿಕೊಂಡಿದ್ದ. ಆ ಹಿನ್ನೆಲೆಯಲ್ಲಿ ಈ ಕೊಲೆ ಆಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಆನಂದ್ ತಂದೆ ಚಂದ್ರಕಾಂತ್ ನಂದೂರ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಡಿಸಿಪಿ ಅಡೂರ್ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಲ್ಲದೆ ಕೇಂದ್ರ ಬಸ್ ನಿಲ್ದಾಣದಲ್ಲಿನ ಸಿಸಿ ಕ್ಯಾಮರಾ ಫೂಟೇಜ್ ಪಡೆಯಲಾಗುತ್ತಿದೆ . ಅದರಲ್ಲಿ ಕೊಲೆಗಾರರನ್ನು ನೋಡಿ ಸುಳಿವು ಪತ್ತೆ ಮಾಡಿ ಬಂಧಿಸಲು ತಂಡ ರಚಿಸಲಾಗಿದೆ ಎಂದು ಡಿಸಿಪಿ ಅಡೂರ್ ಶ್ರೀನಿವಾಸ್ ಅವರು ಸ್ಥಳದಲ್ಲಿದ್ದ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲೆಯಾದ ಸ್ಥಳದಿಂದ ಅಶೋಕನಗರ ಪೊಲೀಸ್ ಠಾಣೆ ಅತ್ಯಂತ ಸಮೀಪದಲ್ಲಿರುವುದು ಕೂಡ ಗಮನೀಯ ಅಂಶವಾಗಿದೆ. ಕೊಲೆ ಮಾಡುತ್ತಿದ್ದ ದೃಶ್ಯಾವಳಿ ನೋಡಿದ ಪ್ರಯಾಣಿಕರು ಹೆಣ್ಣುಮಕ್ಕಳು, ಮಕ್ಕಳು ಗಾಬರಿಗೊಂಡು ಚೀರಾಡಿದ್ದಾರೆ.
from India & World News in Kannada | VK Polls https://ift.tt/3CL9oPg