ಹೊಸದಿಲ್ಲಿ: 'ಬಯೋ-ಬಬಲ್ ಆಯಾಸ' ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದ ಪ್ರದರ್ಶನ ಮೇಲೆ ಗಂಭೀರ ಪರಿಣಾಮ ಬೀರಿದೆ ಎಂಬ ಹೇಳಿಕೆಯನ್ನು ಬ್ಯಾಟಿಂಗ್ ದಿಗ್ಗಜ ಖಂಡಿಸಿದ್ದಾರೆ. ಕಳೆದ ಭಾನುವಾರ ನ್ಯೂಜಿಲೆಂಂಡ್ ವಿರುದ್ಧ ಭಾರತ ತಂಡ 8 ವಿಕೆಟ್ ಹೀನಾಯ ಸೋಲು ಅನುಭವಿಸಿತ್ತು. ಬಳಿಕ ಮಾತನಾಡಿದ್ದ ಜಸ್ಪ್ರಿತ್ ಬುಮ್ರಾ, ವಿದೇಶಿ ಸರಣಿಗಳ ವೇಳಾಪಟ್ಟಿ ಮತ್ತು ಬಯೋ-ಬಬಲ್ ಆಯಾಸವು ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಮ್ಮ ಮೇಲೆ ಗಂಭೀರ ಪರಿಣಾಮ ಬೀರಿದೆ. ಈ ಎಲ್ಲಾ ಅಂಶಗಳು ಆಟಗಾರರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರಿದೆ ಎಂದು ಹೇಳಿದ್ದರು. ಸ್ಪೋರ್ಟ್ಸ್ ಟುಡೇ ಜೊತೆ ಮಾತನಾಡಿದ ಸುನೀಲ್ ಗವಾಸ್ಕರ್, "ಸರಿ ನೋಡಿ, ನೀವು ಭಾರತ ತಂಡದ ಪರ ಆಡುವಾಗ, ಎಲ್ಲವನನೂ ಹಿಂತಿರುಗಿ ನೋಡಬೇಕಾಗುತ್ತದೆ. ಇದು ಅತ್ಯಂತ ಸರಳವಾಗಿದೆ. ನಿಮ್ಮ ದೇಶಕ್ಕಾಗಿ ಆಡುವುದು ಮತ್ತು ಪ್ರತಿನಿಧಿಸುವುದು ನಂಬಲಾಗದ ಸವಲತ್ತು ಮತ್ತು ದೊಡ್ಡ ಗೌರವ. ನಿಮಗೆ ಗೊತ್ತಿರುವ ಹಾಗೆ ಭಾರತ ತಂಡ ಪ್ರತಿನಿಧಿಸಬೇಕೆಂಬ ಕನಸು ಕಟ್ಟಿರುವ ಲಕ್ಷಾಂತರ ಜನರಿದ್ದಾರೆ," ಎಂದು ಹೇಳಿದರು. "ಬಯೋ-ಬಬಲ್ನಿಂದ ಆಯಾಸವಾಗುತ್ತಿದೆ ಎಂದು ಯಾರೂ ಹೇಳಲೇಬಾರದು. ಇದರಲ್ಲಿ ಯಾವುದೇ ಕ್ಷಮೆ ಇಲ್ಲ. ನೀವು ಮೈದಾನದಲ್ಲಿ ತೆರಳಿ ನಿಮ್ಮ ಕೈಯಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ತೋರುವುದರ ಮೇಲೆ ಇವೆಲ್ಲವೂ ಅವಲಂಬಿತವಾಗಿದೆ. ಈ ಪ್ರಕ್ರಿಯೆ ತುಂಬಾ ಸರಳವಾಗಿದೆ," ಎಂದು ಗವಾಸ್ಕರ್ ತಿಳಿಸಿದರು. ಪ್ರತಿಯೊಂದು ಪಂದ್ಯದಲ್ಲಿಯೂ ಭಾರತ ಗೆಲ್ಲಬೇಕೆಂದು ಅಭಿಮಾನಿಗಳು ನಿರೀಕ್ಷೆ ಮಾಡಬಾರದು. ಆದರೆ, ಅವರಿಂದ ಅತ್ಯುತ್ತಮ ಪ್ರದರ್ಶನವನ್ನು ಮಾತ್ರ ನಿರೀಕ್ಷಿಸಬೇಕು ಎಂದು ಹೇಳಿದ ಗವಾಸ್ಕರ್, ಯಾವುದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೆ ಟೂರ್ನಿಯ ಪ್ರಕ್ರಿಯೆಯ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದರು. "ನೀವು ಕೂಡ ಪ್ರತಿಯೊಂದು ಪಂದ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ. ಇದನ್ನು ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಇದು ಕ್ರೀಡೆಯಾಗಿರುವುದರಿಂದ ಸೋಲು ಆಟದ ಒಂದು ಭಾಗ. ಶ್ರೇಷ್ಠ ಆಟಗಾರರನ್ನು ಒಳಗೊಂಡಿರುವ ತಂಡ ಕೂಡ ಕೆಲವೊಮ್ಮೆ ಸೋಲು ಅನುಭವಿಸುತ್ತದೆ. ಕಳೆದ ಹಲವು ವರ್ಷಗಳಿಂದ ತೋರುತ್ತಿರುವ ಪ್ರದರ್ಶನವನ್ನು ಗಮನಿಸುತ್ತಿದ್ದರೆ, ಭಾರತ ಅದ್ಭುತ ತಂಡ, ಚಾಂಪಿಯನ್ ತಂಡ," ಎಂದು ಸುನೀಲ್ ಗವಾಸ್ಕರ್ ಕೊಹ್ಲಿ ಬಳಗವನ್ನು ಶ್ಲಾಘಿಸಿದರು. "ಇದು ಬಹುದೇಶಗಳ ಟೂರ್ನಿಯಾಗಿರುವುದರಿಂದ ಭಾರತ ಇನ್ನೂ ತನ್ನ ಲಯವನ್ನು ಕಂಡುಕೊಂಡಿಲ್ಲ. ಹಾಗಾಗಿ, ಈ ಸನ್ನಿವೇಶದಲ್ಲಿ ಅವರು ಏನಾದರೂ ವಿಶೇಷವಾದದನ್ನು ಮಾಡಬೇಕಾದ ಅಗತ್ಯವಿದೆ ಹಾಗೂ ಯಾವುದೇ ವಿಷಯದ ಬಗ್ಗೆ ಹೆಚ್ಚಾಗಿ ಮಾತನಾಡಬಾರದು," ಎಂದು ಭಾರತದ ಮಾಜಿ ನಾಯಕ ಹೇಳಿದ್ದಾರೆ. ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯಗಳಲ್ಲಿ ಭರ್ಜರಿ ಗೆಲುವು ಪಡೆಯುವ ಮೂಲಕ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಬಂದಿದ್ದ ಭಾರತ ತಂಡ, ಪಾಕಿಸ್ತಾನ ವಿರುದ್ಧ ತನ್ನ ಆರಂಭಿಕ ಪಂದ್ಯದಲ್ಲಿಯೇ 10 ವಿಕೆಟ್ಗಳ ಹೀನಾಯ ಸೋಲು ಅನುಭವಿಸಿತ್ತು. ನಂತರ, ನ್ಯೂಜಿಲೆಂಡ್ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 8 ವಿಕೆಟ್ಗಳಿಂದ ಸೋತಿತ್ತು. ಇನ್ನುಳಿದ ಮೂರು ಪಂದ್ಯಗಳಲ್ಲಿ ಭಾರತ ತಂಡ ಗೆದ್ದರೂ ಕೂಡ ಸೆಮಿಫೈನಲ್ ಸ್ಥಾನ ಯಾವುದೇ ಗ್ಯಾರೆಂಟಿ ಇಲ್ಲ. ಆದರೆ, ಇಂದು ಅಫ್ಗಾನಿಸ್ತಾನ ವಿರುದ್ಧ ಸೇರಿದಂತೆ ಎಲ್ಲಾ ಮೂರು ಪಂದ್ಯಗಳಲ್ಲಿ ಹೆಚ್ಚಿನ ರನ್ರೇಟ್ನಲ್ಲಿ ಗೆಲುವು ಪಡೆಯಬೇಕು ಮತ್ತು ನ್ಯೂಜಿಲೆಂಡ್ ತನ್ನ ಮೂರು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಅನುಭವಿಸಬೇಕು. ಆಗ ಭಾರತ ರನ್ರೇಟ್ ಆಧಾರದ ಮೇಲೆ ಸೆಮಿ ತಲುಪಬಹುದು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3GP8jIO