ದಶಕದ ನಂತರ 810 ಮೀ. ಉದ್ದದ ಬೈಯ್ಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಂತ್ಯ; ಸಂಚಾರಕ್ಕೆ ಮುಕ್ತ

ಬೆಂಗಳೂರು: ಬಾಣಸವಾಡಿ ಮತ್ತು ಹಳೆ ಮದ್ರಾಸ್‌ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಯಪ್ಪನಹಳ್ಳಿ ರಸ್ತೆ ಬಳಿ ಕೈಗೊಂಡಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ (ಆರ್‌ಒಬಿ) ಒಂದು ದಶಕದ ನಂತರ ಪೂರ್ಣಗೊಂಡಿದೆ. 2010-11 ರಲ್ಲಿ 810 ಮೀಟರ್‌ ಉದ್ದದ ಈ ಸೇತುವೆಯ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. 2012 ರಿಂದ ಕಾಮಗಾರಿ ಆರಂಭವಾಯಿತು. ಮೇಲ್ಸೇತುವೆಯ ಅರ್ಧ ಭಾಗ ಬಿಬಿಎಂಪಿಗೆ ಸೇರಿದ ಜಾಗದಲ್ಲಿ, ಇನ್ನುಳಿದ ಅರ್ಧಜಾಗ ರಕ್ಷಣಾ ಇಲಾಖೆಗೆ ಸೇರಿದ ಜಾಗದಲ್ಲಿದೆ. ಇಲ್ಲಿ ಕಾಮಗಾರಿ ನಡೆಸಲು ರಕ್ಷಣಾ ಇಲಾಖೆ ಅನುಮತಿ ನೀಡಿರಲಿಲ್ಲ. ಹಾಗಾಗಿ ಕೆಲಸ ಅರ್ಧಕ್ಕೇ ಸ್ಥಗಿತಗೊಂಡಿತ್ತು. ಬೈಯಪ್ಪನ ಹಳ್ಳಿಯ ಲೆವೆಲ್‌ ಕ್ರಾಸಿಂಗ್‌ನಲ್ಲಿ ನಿತ್ಯ 72 ಬಾರಿ ಗೇಟ್‌ ಮುಚ್ಚಲಾಗುತ್ತಿದೆ. ಆಗ ವಾಹನ ಸವಾರರು ಹಳಿ ದಾಟಲು ಸುಮಾರು 10 ನಿಮಿಷದಿಂದ 20 ನಿಮಿಷಗಳಷ್ಟು ಕಾಯಬೇಕಾಗುತ್ತದೆ. ಈ ಸೇತುವೆ ನಿರ್ಮಾಣವಾದರೆ ಪ್ರಯಾಣಿಕರಿಗೆ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ‘ಬೈಯಪ್ಪನಹಳ್ಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಕೇವಲ ಪೇಂಟಿಂಗ್‌ ಸೇರಿದಂತೆ ಸಣ್ಣ-ಪುಟ್ಟ ಕೆಲಸಗಳು ಬಾಕಿ ಇವೆ’ ಎಂದು ನೈರುತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದರು. ಆದರೂ ಹಳೆ ಮದ್ರಾಸು ರಸ್ತೆ ಮಾರ್ಗದ ಸಂಪರ್ಕ ರಸ್ತೆಗೆ ಬಿಬಿಎಂಪಿ ವತಿಯಿಂದ ಡಾಂಬರು ರಸ್ತೆ ಮತ್ತು ಒಳಚರಂಡಿ ಕಾಮಗಾರಿ ಪೂರ್ಣಗೊಳ್ಳುವುದು ಬಾಕಿ ಇದೆ. ಬಿಬಿಎಂಪಿ, ಹಳೆ ಮದ್ರಾಸ್‌ ರಸ್ತೆಯಿಂದ ಬರುವ ರಸ್ತೆಯ ಚರಂಡಿ ಕಾಮಗಾರಿಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಬೀದಿ ದೀಪಗಳನ್ನು ಅಳವಡಿಸಲಾಗಿದ್ದರೂ ಅವು ಇನ್ನೂ ಕಾರ್ಯ ನಿರ್ವಹಿಸುತ್ತಿಲ್ಲ. ಈ ಕೆಲಸ ಕೂಡ ಬಾಕಿ ಇದೆ. ರಕ್ಷಣಾ ಇಲಾಖೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ 2012 ರಲ್ಲಿ ಮದ್ರಾಸ್‌ ಎಂಜಿನಿಯರಿಂಗ್‌ ಗ್ರೂಪ್‌ ಕಾಮಗಾರಿಯನ್ನು ನಿಲ್ಲಿಸಿತ್ತು. ಆನಂತರ 2019 ರಲ್ಲಿ ಇಲಾಖೆ ಅನುಮತಿ ನೀಡಿದ ನಂತರ ಮತ್ತೆ ಕೆಲಸ ಪುನರಾರಂಭಿಸಿತು. ಕಾಮಗಾರಿಯನ್ನು ಜೂನ್‌ 2021ರೊಳಗೆ ಮುಗಿಸಬೇಕಾಗಿತ್ತು. ಆದಾಗ್ಯೂ ನಾಲ್ಕು ತಿಂಗಳ ನಂತರ ಕಾಮಗಾರಿ ಪೂರ್ಣಗೊಂಡಿದೆ. ‘ಕೋವಿಡ್‌ ಸಮಯದಲ್ಲಿ ಕಾರ್ಮಿಕರು ಸಿಗದ ಹಿನ್ನೆಲೆಯಲ್ಲಿ ಹಾಗೂ ರಕ್ಷಣಾ ಇಲಾಖೆಯ ಅನುಮತಿ ವಿಳಂಬದ ಹಿನ್ನೆಲೆಯಲ್ಲಿ ಆರ್‌ಒಬಿ ಕೆಲಸ ತಡವಾಗಿದೆ’ ಎಂದು ನೈರುತ್ಯ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ರೈಲ್ವೆ ಮೇಲ್ಸೇತುವೆ ನಿರ್ಮಾಣವು ಮಾರುತಿ ಸೇವಾ ನಗರ, ಹಳೆ ಬೈಯಪ್ಪನ ಹಳ್ಳಿಯಿಂದ ಹಳೆ ಮದ್ರಾಸು ರಸ್ತೆ ನಡುವೆ ಸಂಚಾರ ದಟ್ಟಣೆಯನ್ನು ತಗ್ಗಿಸಲಿದೆ. ಈ ಹಿಂದೆ ರೈಲ್ವೆ ಕ್ರಾಸಿಂಗ್‌ ಕಾರಣ ಈ ಭಾಗದಲ್ಲಿ ತೀವ್ರ ಸಂಚಾರ ದಟ್ಟಣೆ ಉಂಟಾಗುತ್ತಿತ್ತು. ‘ಆದಷ್ಟು ಶೀಘ್ರ ನೈರುತ್ಯ ರೈಲ್ವೆಯು ರೈಲ್ವೆ ಮೇಲ್ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಬೇಕು. ರಸ್ತೆ ಕಾಮಗಾರಿಯನ್ನು ಬಿಬಿಎಂಪಿ ಕೂಡಲೇ ಪೂರ್ಣಗೊಳಿಸಬೇಕು. ಸಂಪರ್ಕ ರಸ್ತೆಯು ವಾಹನ ಸವಾರರಿಗೆ ಸುರಕ್ಷಿತವಲ್ಲ. ಅದರಲ್ಲೂ ರಾತ್ರಿ ವೇಳೆ ಮಹಿಳೆಯರಿಗೆ ಯಾವುದೇ ಸುರಕ್ಷತೆ ಇಲ್ಲ’ ಎಂದು ಹಳೆ ಬೈಯಪ್ಪನಹಳ್ಳಿ ನಿವಾಸಿ ರಮೇಶ್‌ ಕುಮಾರ್‌ ಹೇಳಿದರು. ಆರ್‌ಒಬಿ ಕೆಳಗಿನ ಉಪರಸ್ತೆಯನ್ನು ದ್ವಿಚಕ್ರ ವಾಹನ ಮತ್ತು ಪಾದಚಾರಿಗಳಿಗೆ ಈಗಾಗಲೇ ತೆರೆಯಲಾಗಿದ್ದು ಸಂಚಾರಕ್ಕೆ ಮುಕ್ತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


from India & World News in Kannada | VK Polls https://ift.tt/3mJnf2R

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...