ಕಾಂಗ್ರೆಸ್‌ಗೆ ಮತ್ತೊಂದು ಆಘಾತ: ರಾತ್ರೋರಾತ್ರಿ ಟಿಎಂಸಿ ಸೇರಿದ 12 ಶಾಸಕರು

ಹೊಸದಿಲ್ಲಿ: ಮೇಘಾಲಯದ ಮಾಜಿ ಮುಖ್ಯಮಂತ್ರಿ ಮುಕುಲ್ ಸಂಗ್ಮಾ ಅವರು ಇತರೆ 11 ಮಂದಿ ಶಾಸಕರ ಜತೆಗೆ ರಾತ್ರೋ ರಾತ್ರಿ ತೃಣಮೂಲ ಕಾಂಗ್ರೆಸ್ ಪಾಳೆಯಕ್ಕೆ ಜಿಗಿದಿದ್ದಾರೆ. ದೇಶದ ಎಲ್ಲೆಡೆ ಪಕ್ಷವನ್ನು ವಿಸ್ತರಿಸುವ ಬಯಕೆ ಹೊಂದಿರುವ ಟಿಎಂಸಿಗೆ ಈಶಾನ್ಯ ರಾಜ್ಯದಲ್ಲಿ ಇದು ಬಹುದೊಡ್ಡ ಕ್ಷಿಪ್ರಕ್ರಾಂತಿಯಾಗಿದೆ. ತಾವು ಪಕ್ಷ ಬದಲಾವಣೆ ಮಾಡುತ್ತಿರುವ ಬಗ್ಗೆ ವಿಧಾನಸಭೆ ಸ್ಪೀಕರ್ ಮೆತ್ಬಾಹ್ ಲಿಂಗ್ಡೋ ಅವರಿಗೆ ರಾತ್ರಿ 10 ಗಂಟೆ ಸುಮಾರಿಗೆ ಶಾಸಕರು ಪತ್ರ ಸಲ್ಲಿಕೆ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಲ್ಲಿನ 17 ಕಾಂಗ್ರೆಸ್ ಶಾಸಕರ ಪೈಕಿ 12 ಮಂದಿ ಈಗ ಕೈ ಹಿಡಿದಿದ್ದಾರೆ. ಒಂದೆಡೆ ರಾಷ್ಟ್ರ ರಾಜಕಾರಣಕ್ಕೆ ಕಾಲಿಡುವ ಉದ್ದೇಶದ ಚಟುವಟಿಕೆಗಳಿಗಾಗಿ ಟಿಎಂಸಿ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಅವರು ಮೂರು ದಿನಗಳ ದಿಲ್ಲಿ ಪ್ರವಾಸದಲ್ಲಿದ್ದಾರೆ. ಕಾಂಗ್ರೆಸ್ ನಾಯಕರಾದ ಕೀರ್ತಿ ಆಜಾದ್ ಮತ್ತು ಅಶೋಕ್ ತನ್ವಾರ್, ಜೆಡಿಯು ಮಾಜಿ ಮುಖಂಡ ಪವನ್ ವರ್ಮಾ ಅವರು ಮಮತಾ ಸಮ್ಮುಖದಲ್ಲಿ ಬುಧವಾರ ಟಿಎಂಸಿ ಸೇರ್ಪಡೆಯಾಗಿದ್ದರು. ಈಶಾನ್ಯ ರಾಜ್ಯದಲ್ಲಿನ ಹೊಸ ಬೆಳವಣಿಗೆಯಿಂದಾಗಿ ಮೇಘಾಲಯದ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ತನ್ನ ಬಲ ಕಳೆದುಕೊಂಡಂತಾಗಿದೆ. ಟಿಎಂಸಿ ಈಗ ಪ್ರಧಾನ ವಿಪಕ್ಷವಾಗಿ ಹೊರಹೊಮ್ಮಿದೆ. ಬಿಜೆಪಿ ವಿರುದ್ಧದ ಟಿಎಂಸಿ ಹೋರಾಟಕ್ಕೆ ಜತೆಗೂಡಲು ಯಾವುದೇ ಇತರೆ ಪಕ್ಷಗಳ ರಾಜಕೀಯ ನಾಯಕರು ಬಯಸಿದರೆ, ಪಕ್ಷ ಅವರನ್ನು ಸ್ವಾಗತಿಸಲಿದೆ ಎಂದು ಮಮತಾ ಹೇಳಿದ್ದರು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ವಿರುದ್ಧ ಭರ್ಜರಿ ಜಯಭೇರಿ ಬಾರಿಸಿದ್ದ ಟಿಎಂಸಿ, ತನ್ನ ಪ್ರಾಬಲ್ಯವನ್ನು ಅಸ್ಸಾಂ, ತ್ರಿಪುರಾ, ಗೋವಾ, ಉತ್ತರ ಪ್ರದೇಶ, ಬಿಹಾರ ಮತ್ತು ಹರ್ಯಾಣಗಳಲ್ಲಿ ವಿಸ್ತರಿಸಿಕೊಳ್ಳುವ ಗುರಿ ಹೊಂದಿದೆ. ಆದರೆ ಅದರ ಓಟಕ್ಕೆ ಕಾಂಗ್ರೆಸ್ ಮತ್ತಷ್ಟು ಏಟು ತಿನ್ನುವಂತಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಮತಾ ಬ್ಯಾನರ್ಜಿ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆದರೆ ಈ ಬಾರಿ ಮೂರು ದಿನ ದಿಲ್ಲಿಯಲ್ಲಿ ಇದ್ದರೂ ಸೋನಿಯಾ ಅವರನ್ನು ಮಮತಾ ಭೇಟಿ ಮಾಡುತ್ತಿಲ್ಲ. ಸೋನಿಯಾ ಭೇಟಿಗೆ ಸಮಯ ಕೇಳಿಲ್ಲ. ಅವರು ಪಂಜಾಬ್ ಚುನಾವಣೆಯ ಕೆಲಸದಲ್ಲಿ ಮಗ್ನರಾಗಿದ್ದಾರೆ. ಪ್ರತಿ ಬಾರಿ ಬಂದಾಗಲೂ ಸೋನಿಯಾ ಅವರನ್ನು ಭೇಟಿ ಮಾಡಬೇಕೇ? ಹಾಗೆಂದು ಸಂವಿಧಾನ ಏನಾದರೂ ಕಡ್ಡಾಯ ಮಾಡಿದೆಯೇ? ಎಂದು ಅವರು ಬುಧವಾರ ಪ್ರಶ್ನಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಮಗ ಅಭಿಜಿತ್ ಮುಖರ್ಜಿ, ಸಿಲ್ಚಾರ್‌ನ ಮಾಜಿ ಕಾಂಗ್ರೆಸ್ ಸಂಸದೆ ಮತ್ತು ಕಾಂಗ್ರೆಸ್ ತಾರೆ ಸಂತೋಷ್ ಮೋಹನ್ ದೇವ್ ಅವರ ಮಗಳು ಸುಷ್ಮಿತಾ ದೇವ್ ಇತ್ತೀಚೆಗೆ ಟಿಎಂಸಿ ಸೇರಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಗೆ ಭೇಟಿ ನೀಡುವುದಾಗಿ ಹೇಳಿರುವ ಮಮತಾ, ಬಳಿಕ ಮುಂಬಯಿಯಲ್ಲಿ ಇರುವ ವಿರೋಧಪಕ್ಷದ ಶಕ್ತಿ ಕೇಂದ್ರಕ್ಕೆ ಡಿ. 1ರಂದು ತೆರಳಿ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ಅವರು ಬಿಜೆಪಿ ವಿರುದ್ಧದ ಹೋರಾಟಕ್ಕೆ ಸಹಾಯ ಕೋರಿದರೆ, ಅದಕ್ಕೂ ಸಿದ್ಧ ಎಂದು ಭರವಸೆ ನೀಡಿದ್ದಾರೆ. ಮೇಘಾಲಯದಲ್ಲಿ 2012ರಲ್ಲಿ ಟಿಎಂಸಿ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತ್ತು. 60 ಸೀಟುಗಳ ಪೈಕಿ 35ರಲ್ಲಿ ಅದು ಸ್ಪರ್ಧಿಸಿತ್ತು. 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದಕ್ಕೆ ಟಿಎಂಸಿಯ ಹಾದಿ ಸುಗಮಗೊಳಿಸಲು ಹಾಗೂ ಸಂಪೂರ್ಣ ಬಲದೊಂದಿಗೆ ಅಧಿಕಾರಕ್ಕೆ ಬರಲು ಚುನಾವಣಾ ಪ್ರಚಾರ ತಜ್ಞ ಪ್ರಶಾಂತ್ ಕಿಶೋರ್ ಅವರ ತಂಡದ ಸದಸ್ಯರು ಈಗಾಗಲೇ ಶಿಲ್ಲಾಂಗ್‌ನಲ್ಲಿ ಬೀಡು ಬಿಟ್ಟಿದ್ದಾರೆ.


from India & World News in Kannada | VK Polls https://ift.tt/3xjplKs

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...