ಹನೂರು (): ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟದ ದೀಪದ ಗಿರಿ ಒಡ್ಡುವಿನಲ್ಲಿ ನಿರ್ಮಿಸುತ್ತಿರುವ ಬಹು ನಿರೀಕ್ಷಿತ ಮಾದಪ್ಪನ 108 ಅಡಿಯ ಬೃಹತ್ ಕಾಮಗಾರಿ ಭರದಿಂದ ಸಾಗುತ್ತಿದೆ. 20 ಎಕರೆ ಪ್ರದೇಶದಲ್ಲಿ ಮಹದೇಶ್ವರರು ಹುಲಿ ಮೇಲೆ ಕುಳಿತ ಭಂಗಿಯ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಪ್ರತಿಮೆಯ ಅಡಿಪಾಯವಾಗಿ 20 ಅಡಿಯ ಪೀಠವು ಗುಹೆ ಮಾದರಿಯಲ್ಲಿರಲಿದೆ. ಇದರ ನಿರ್ಮಾಣ ಈಗ ಸಾಗಿದೆ. ಗುಹೆ ಒಳಗಡೆ ಮಾದಪ್ಪನ ಲೀಲೆಗಳನ್ನು ಸಾರುವ ಮಾಹಿತಿ ಇರಲಿದೆ. ಗುಹೆ (ಪೀಠ)ಯ ಮೇಲೆ 80 ಅಡಿಯ ಮಹಾದೇಶ್ವರರ ಪ್ರತಿಮೆ ನಿರ್ಮಾಣಗೊಳ್ಳಲಿದೆ. ಈ ಪ್ರತಿಮೆಯನ್ನು ಕಬ್ಬಿಣ ಹಾಗೂ ಸಿಮೆಂಟ್ ಬಳಸಿ ನಿರ್ಮಿಸಲಾಗುತ್ತದೆ. ಕೊನೆಯಲ್ಲಿ ಜಿಂಕ್ ಕೋಟಿಂಗ್ ಮಾಡಲಾಗುವುದು ಎಂದು ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ತಿಳಿಸಿದ್ದಾರೆ. ಈಗಾಗಲೇ ಗುಹೆ ಮಾದರಿಯಲ್ಲಿ ತಳ ಭಾಗ ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಕೋಟ್ಯಂತರ ರೂ. ವ್ಯಯಿಸಲಾಗಿದೆ. ದೀಪದ ಒಡ್ಡು ಪ್ರದೇಶವೂ ಬೆಟ್ಟದ ಅತ್ಯಂತ ಮೇಲ್ಬಾಗದಲ್ಲಿಇದ್ದು, ದೇವಾಲಯವನ್ನು ಸೇರಿದಂತೆ ಬೆಟ್ಟದ ಯಾವ ಭಾಗದಲ್ಲೇ ನೋಡಿದರೂ ಮಹದೇಶ್ವರರ ಪ್ರತಿಮೆ ಕಾಣುವ ರೀತಿಯಲ್ಲಿ ಈ ಯೋಜನೆ ರೂಪಿಸಲಾಗಿದೆ. 2016ರ ಸೆಪ್ಟೆಂಬರ್ ತಿಂಗಳಲ್ಲಿ ಬೆಟ್ಟಕ್ಕೆ ಭೇಟಿ ನೀಡಿದ್ದ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 100 ಅಡಿ ಎತ್ತರದ ಮಹಾದೇಶ್ವರರ ವಿಗ್ರಹ ನಿರ್ಮಾಣ ಯೋಜನೆಯನ್ನು ಘೋಷಿಸಿದ್ದರು. ಈ ಯೋಜನೆಗೆ ಬೇಕಾದ ಭೂ ಸ್ವಾಧೀನ ಸಮಸ್ಯೆಯಿಂದ 3 ವರ್ಷ ತಡವಾಗಿ ಪ್ರಾರಂಭ ವಾಗಿದೆ. 'ಪ್ರತಿಮೆ ಕೆಳಗಿನ ಎರಡು ಮಹಡಿಗಳಿಗೆ ಹೊರ ಹೊದಿಕೆ ಕಾರ್ಯ ಅತ್ಯಂತ ಕುಶಲತೆಯಿಂದ ಕೂಡಿದ್ದು, ಪಿಎಸ್ಎಪಿ ಆರ್ಕಿಟೆಕ್ಟ್ನ ಮಾಲತೇಶ್ ಪಾಟೀಲ್ ನಿರ್ವಹಿಸುತ್ತಿದ್ದಾರೆ. 2017ರಂತೆ ಇರುವ ದರಕ್ಕೆ 20 ಕೋಟಿಗೆ ಟರ್ನ್ ಕೀ ಪ್ರಾಜೆಕ್ಟ್ ಆಗಿ ನೀಡಲಾಗಿತ್ತು. ಸದ್ಯ ಈ ಯೋಜನೆಗೆ ಹೆಚ್ಚುವರಿ ಮೊತ್ತ ನೀಡಲು ಅವಕಾಶ ಇಲ್ಲದಿದ್ದರೂ ಹಾಗೂ ಪ್ರಸ್ತುತ ಮಾರುಕಟ್ಟೆಯಲ್ಲಿ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಿರುವ ನಡುವೆ ಮಾಲತೇಶ್ ಅವರು ಕಾಮಗಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ' ಎಂದು ಜಯ ವಿಭವ ಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಟ್ಟಡದ ನೆಲ ಮಹಡಿಯ ಮೂರು ಭಾಗಗಳಲ್ಲಿ ಇಟ್ಟಿಗೆ ಹಾಗೂ ಪ್ಲಾಸ್ಟರಿಂಗ್ ಪೂರ್ಣಗೊಂಡಿದ್ದು, ಉಳಿದ ಒಂದು ಭಾಗದಲ್ಲಿಆರ್. ಸಿ. ಸಿ ಛಾವಣಿ ಅಳವಡಿಸಲಾಗಿದ್ದು, ಇಟ್ಟಿಗೆ ಕಟ್ಟಡದ ಕೆಲಸ ಪ್ರಗತಿಯಲ್ಲಿದೆ. ಎರಡು ಮಹಡಿಗೆ ಹೊದಿಕೆ ನಿರ್ಮಾಣ ಪೂರ್ಣಗೊಳ್ಳುವಾಗಲೇ ಒಳಾಂಗಣದಲ್ಲಿ ಮ್ಯೂಸಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ 17 ಕಂಪಾರ್ಟ್ಮೆಂಟ್ ರೂಪುಗೊಳ್ಳಲಿದೆ. ಮಹದೇಶ್ವರ ಸ್ವಾಮಿಯ ವಾಹನ ಹುಲಿಯ ಕಾಲುಗಳ ನಿರ್ಮಾಣ ಕಾಮಗಾರಿ ಸಹ ಭರದಿಂದ ಸಾಗುತ್ತಿದೆ. ಕಾಮಗಾರಿ ವಿವರ ಅಂದಾಜು ವೆಚ್ಚ : 2390.00 ಲಕ್ಷ ರೂ. ಟೆಂಡರ್ ಕರಾರು ಮೊತ್ತ : 2346.70 ಲಕ್ಷ ರೂ. ಇದುವರೆವಿಗಿನ ಖರ್ಚು :1544.86 ಲಕ್ಷ ರೂ. ನಿರ್ವಹಿಸಬೇಕಾಗಿರುವ ಮೊತ್ತ : 801.84 ಲಕ್ಷ ರೂ. 'ಹುಲಿಯ ಮೇಲೆ ಕುಳಿತ ಅಂದವಾದ ಪ್ರತಿಮೆ ನಿರ್ಮಾಣಗೊಳ್ಳುತ್ತಿದೆ. ಇದನ್ನು ನೋಡಲು ಎಲ್ಲ ಭಕ್ತಾದಿಗಳಂತೆ ನಾವೂ ಸಹ ಕಾತುರರಾಗಿದ್ದೇವೆ ಎಂದರೆ ಅತಿಶಯೋಕ್ತಿಯೇನಲ್ಲ' ಎಂದು ಶ್ರೀಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯ ವಿಭವ ಸ್ವಾಮಿ ಹೇಳಿದ್ದಾರೆ.
from India & World News in Kannada | VK Polls https://ift.tt/3q38Gcs