ಜಾತಿ ವರ್ಗೀಕರಣಕ್ಕೆ ಆಯೋಗದಲ್ಲೇ ಅಸಮ್ಮತಿ; ಮೂವರು ಸದಸ್ಯರು ಸಹಿ ಹಾಕಿಲ್ಲ!

ಎಂ. ಕೀರ್ತಿ ಪ್ರಸಾದ್‌ ಬೆಂಗಳೂರು: 'ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015'ರ (ಜಾತಿ ಗಣತಿ) ದತ್ತಾಂಶ ಸಂಗ್ರಹ ಪ್ರಕ್ರಿಯೆಗೆ ಒಮ್ಮತದ ಸಮ್ಮತಿಯಿದ್ದರೂ ಜಾತಿವಾರು ಮರು ವರ್ಗೀಕರಣಕ್ಕೆ ಅಂದಿನ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಲ್ಲೇ ಭಿನ್ನಾಭಿಪ್ರಾಯ ಮೂಡಿದ್ದರಿಂದ ಮೂವರು ಸಹಿ ಹಾಕಿಲ್ಲಎಂಬ ಬೆಳಕಿಗೆ ಬಂದಿದೆ. ಹಾಗಾಗಿ ಜಾತಿವಾರು ಮರು ವರ್ಗೀಕರಣದ ವಾಸ್ತವತೆಯ ಬಗ್ಗೆಯೇ ಪ್ರಶ್ನೆ ಮೂಡಿದಂತಾಗಿದೆ. ಸಮೀಕ್ಷೆ ವಿಧಾನವನ್ನು ಅಂದಿನ ಆಯೋಗದ ಎಲ್ಲರೂ ಸರ್ವಾನುಮತದಿಂದ ಒಪ್ಪಿ ಅನುಮೋದಿಸಿದ್ದರು. ಕೇಂದ್ರ ಸರಕಾರವು ಜನಗಣತಿ ನಡೆಸುವ ಮಾದರಿಯನ್ನೇ ಅನುಸರಿಸಿ ಆಯೋಗ ಸಮೀಕ್ಷೆ ನಡೆಸಿತ್ತು. ಅಲ್ಲದೆ ದತ್ತಾಂಶ ಸಂಗ್ರಹ ವಿಧಾನ ವೈಜ್ಞಾನಿಕವಾಗಿದೆ ಎಂಬುದಾಗಿ ಪ್ರತಿಷ್ಠಿತ ಐಐಎಂ ಸಂಸ್ಥೆಯೂ ದೃಢೀಕರಿಸಿತ್ತು. ಹಾಗಾಗಿ ದತ್ತಾಂಶದ ಬಗ್ಗೆ ಆಯೋಗದಲ್ಲಿಒಮ್ಮತವಿತ್ತು ಎಂದು ಮೂಲಗಳು ತಿಳಿಸಿವೆ. ಆದರೆ ಈ ದತ್ತಾಂಶ ಆಧರಿಸಿ ನಡೆಸಿದ ಜಾತಿ ಮರುವರ್ಗೀಕರಣದ ಬಗ್ಗೆ ಆಯೋಗದಲ್ಲೇ ಒಮ್ಮತವಿರಲಿಲ್ಲ. ಆಯ್ದ ಜಾತಿಗಳನ್ನು ನಿರ್ದಿಷ್ಟ ಪ್ರವರ್ಗಕ್ಕೆ ಸೇರ್ಪಡೆ ಮತ್ತು ರದ್ದತಿ ಬಗ್ಗೆ ಸದಸ್ಯರಲ್ಲಿ ಭಿನ್ನಾಭಿಪ್ರಾಯವಿತ್ತು. ಅಂದಿನ ಆಯೋಗದ ಐವರು ಸದಸ್ಯರ ಪೈಕಿ ಮೂವರು ಭಿನ್ನ ನಿಲುವು ತೋರಿ ಈ ಸಂಬಂಧ ಕಡತಕ್ಕೆ ಸಹಿ ಹಾಕಿಲ್ಲ. ಹಾಗಾಗಿ ಒಂದೊಮ್ಮೆ ಸರಕಾರ ವರದಿ ಸ್ವೀಕರಿಸಿದರೆ ಜಾತಿ ಮರು ವರ್ಗೀಕರಣದ ಬಗ್ಗೆ ಯಾವ ನಿಲುವು ಕೈಗೊಳ್ಳಲಿದೆ ಎಂಬ ಬಗ್ಗೆ ಕುತೂಹಲ ಮೂಡಿದೆ. ಸಹಿ ಹಾಕದಿರಲು ಏನು ಕಾರಣ?ಜಾತಿ ಮರುವರ್ಗೀಕರಣದ ಬಗ್ಗೆ ಭಿನ್ನ ಅಭಿಪ್ರಾಯ ಹೊಂದಿದ್ದ ಸದಸ್ಯರು ತಮ್ಮ 'ಅಸಮ್ಮತಿ ಟಿಪ್ಪಣಿ' ಒಳಗೊಂಡಂತೆ ಕಡತಕ್ಕೆ ಸಹಿ ಹಾಕಲು ನಿರ್ಧರಿಸಿದ್ದರು. ಆದರೆ ಆಗಷ್ಟೇ ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಸರಕಾರ 2019ರ ಸೆ. 22ರಂದು ಆಯೋಗದ ಅಧ್ಯಕ್ಷರು ಸೇರಿದಂತೆ ಸದಸ್ಯರನ್ನು ವಜಾಗೊಳಿಸಿದ ಕಾರಣ ಕಡತಕ್ಕೆ ಕೆಲವರು ಸಹಿ ಹಾಕಲು ಸಾಧ್ಯವಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಸಾಲು ಸಾಲು ಅಡ್ಡಿಸಮೀಕ್ಷೆ 2015ರಲ್ಲಿ ನಡೆದರೂ ಆ ದತ್ತಾಂಶ ಆಧರಿಸಿ ವರದಿ ಸಿದ್ಧಪಡಿಸುವ ಕಾರ್ಯ ಸುದೀರ್ಘವಾಯಿತು. 2018ರ ಮಾರ್ಚ್ ಹೊತ್ತಿಗೆ ವರದಿ ಪೂರ್ಣಗೊಂಡು ಸರಕಾರಿ ಮುದ್ರಣಾಲಯದಲ್ಲೇ ಮುದ್ರಣವಾಗುತ್ತಿತ್ತು. ಆ ಹೊತ್ತಿಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಾಗಿದ್ದರಿಂದ ಹಿನ್ನಡೆಯಾಯಿತು. ನಂತರದ ಮೈತ್ರಿ ಸರಕಾರದಲ್ಲಿ ಸಮೀಕ್ಷಾ ವರದಿ ಸ್ವೀಕರಿಸುವಂತೆ ಕೋರಿ ಹಿಂದುಳಿದ ವರ್ಗಗಳ ಇಲಾಖೆಯ ಕಾರ್ಯದರ್ಶಿಯಿಂದ ಕಡತವೊಂದು ಸಿಎಂ ಕಚೇರಿಗೆ ರವಾನೆಯಾಗಿತ್ತು ಎಂದು ಹೇಳಲಾಗಿದೆ. ದಿಢೀರ್‌ ಆಯೋಗ ರದ್ದುಮೈತ್ರಿ ಸರಕಾರ ಪತನದ ನಂತರ ಆಗಷ್ಟೇ ಸಿಎಂ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರನ್ನೂ ಆಯೋಗ ಭೇಟಿಯಾಗಿ ವರದಿ ಬಗ್ಗೆ ಪ್ರಸ್ತಾಪಿಸಿತ್ತು. ಆದರೆ ಎರಡೇ ತಿಂಗಳಲ್ಲಿ, ಅಂದರೆ 2019ರ ಸೆ. 22ರಂದು ಸರಕಾರ ಆಯೋಗದ ಅಧ್ಯಕ್ಷರು, ಸದಸ್ಯರನ್ನು ವಜಾಗೊಳಿಸಿತು. ಅಂದಿನ ಅಧ್ಯಕ್ಷರಾಗಿದ್ದ ಎಚ್‌. ಕಾಂತರಾಜು ಅವರು ಅಧಿಕೃತ ಕಡತಗಳನ್ನು ಆಯೋಗದ ಸದಸ್ಯ ಕಾರ್ಯದರ್ಶಿಯವರಿಗೆ ಹಸ್ತಾಂತರಿಸಿದರು. ಸದಸ್ಯ ಕಾರ್ಯದರ್ಶಿಗಳು ವರದಿಯನ್ನು ಕೊಠಡಿಯೊಂದರಲ್ಲಿಟ್ಟು ಬೀಗಮುದ್ರೆ ಹಾಕಿದ್ದು, ಸದ್ಯ ಅವರ ಸುಪರ್ದಿಯಲ್ಲಿದೆ ಎಂದು ತಿಳಿದು ಬಂದಿದೆ.


from India & World News in Kannada | VK Polls https://ift.tt/3B8n9WS

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...