ಹತ್ತು ವರ್ಷದಿಂದ ಡಾಂಬರು ಕಾಣದ ರಸ್ತೆ: ಹೊಣೆ ಮರೆತ ಬಿಡಿಎ; ನಾರಾಯಣ ನಗರದಲ್ಲಿ ರಸ್ತೆ ತುಂಬಾ ಹೊಂಡ!

ಶಶಿಕುಮಾರ್‌ ಎಸ್‌ ದಕ್ಷಿಣ ಬೆಂಗಳೂರು: ವಸಂತಪುರ ವಾರ್ಡ್‌ನ ನಾರಾಯಣನಗರ ಬಡಾವಣೆ ಡಾಂಬರು ಕಾಣದೆ ಹತ್ತು ವರ್ಷವೇ ಕಳೆದಿದ್ದು, ಸಂಪೂರ್ಣ ಹದಗೆಟ್ಟಿದೆ. ಬಡಾವಣೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಾಲಿಕೆಗೆ ಹಸ್ತಾಂತರವಾಗಿಲ್ಲ. ರಸ್ತೆ ಸೇರಿ ಮೂಲಸೌಕರ್ಯ ಹೊಣೆ ಹೊತ್ತಿರುವ ನಿರ್ಲಕ್ಷ್ಯದಿಂದ ಸ್ಥಳೀಯರು, ವಾಹನ ಸವಾರರು ಪರದಾಡುವಂತಾಗಿದೆ. ಕನಕಪುರ ರಸ್ತೆಯಿಂದ ಬನ್ನೇರುಘಟ್ಟ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯಲ್ಲಿ ಜಲ್ಲಿಕಲ್ಲುಗಳು ಎದ್ದು ಬಂದಿದ್ದು, ಬಾರಿ ಹೊಂಡಗಳು ನಿರ್ಮಾಣವಾಗಿವೆ. ಮಳೆ ಬಂದರೆ ಕೆಲವೆಡೆ ಕೆಸರುಗದ್ದೆಯಂತಾಗುತ್ತದೆ. ಕೆಲವೆಡೆ ರಸ್ತೆಯ ಕುರುಹೇ ಇಲ್ಲದಂತೆ ಡಾಂಬರು ಹಾಳಾಗಿದೆ. ನಗರದ ಒಳಗೇ ಇದ್ದರೂ ಹಳ್ಳಿಗಾಡಿನ ರಸ್ತೆಯಂತೆ ಗೋಚರಿಸುತ್ತಿದೆ. ಈ ಬಡಾವಣೆಯಲ್ಲಿ 2002ರಲ್ಲಿ ಬಿಡಿಎ ಫಲಾನುಭವಿಗಳಿಗೆ ನಿವೇಶನ ಹಸ್ತಾಂತರಿಸಿದೆ. ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸದೆ ಹಸ್ತಾಂತರಿಸಿದ್ದು, ಬಳಿಕವೂ ನಿರ್ಲಕ್ಷ್ಯ ತಾಳಿರುವುದು ನಿವಾಸಿಗಳನ್ನು ಹೈರಾಣಾಗಿಸಿದೆ. 2007ರಲ್ಲಿ110 ಹಳ್ಳಿ ಸೇರ್ಪಡೆ ಯೋಜನೆಯಡಿ ಬಡಾವಣೆ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಯಿತು. ಮೂಲಸೌಕರ್ಯದ ಹೊಣೆ ಹಸ್ತಾಂತರಿಸಿಲ್ಲ. ಇದರಿಂದಾಗಿ ಪಾಲಿಕೆಯ ಸೌಲಭ್ಯಗಳು ಸಿಗುತ್ತಿಲ್ಲ. ಬಡಾವಣೆ ಅಭಿವೃದ್ಧಿಯಾಗಿ 20 ವರ್ಷ ಕಳೆದರೂ ರಸ್ತೆ, ಡ್ರೈನೇಜ್‌, ಬೀದಿದೀಪ ಹೀಗೆ ಅಗತ್ಯ ಮೂಲಸೌಕರ್ಯಗಳಿಲ್ಲದೆ ನಿವಾಸಿಗಳು ಪರದಾಡುವಂತಾಗಿದೆ. ''ಬಡಾವಣೆ ಪಾಲಿಕೆಗೆ ಹಸ್ತಾಂತರವಾಗಿದೆ ಎಂಬುದು ಬಿಟ್ಟರೆ ನಮಗೆ ಸೌಲಭ್ಯಗಳು ಸಿಗುತ್ತಿಲ್ಲ. ಪಾಲಿಕೆಗೆ ತೆರಿಗೆ ಕಟ್ಟುತ್ತೇವೆ. ಪಾಲಿಕೆ ಚುನಾವಣೆ ಬಂದಾಗ ಮತ ಕೇಳಲು ಜನಪ್ರತಿನಿಧಿಗಳು ಬರುತ್ತಾರೆ. ಸೌಲಭ್ಯ ಒದಗಿಸಿ ಎಂದಾಗ ನಮ್ಮ ಜವಾಬ್ದಾರಿ ಅಲ್ಲ ಎಂದು ಜಾರಿಕೊಳ್ಳುತ್ತಾರೆ. ನಮ್ಮ ಸಮಸ್ಯೆ ಯಾರಿಗೆ ಹೇಳೋದು,'' ಎಂದು ಸ್ಥಳೀಯರಾದ ರಮೇಶ್‌ ಎಂಬುವರು ಬೇಸರ ವ್ಯಕ್ತಪಡಿಸಿದರು. ಬಡಾವಣೆಯ ಮತ್ತೊಬ್ಬ ನಿವಾಸಿ ಬಸವರಾಜ್‌ ಮಾತನಾಡಿ, ''ರಸ್ತೆಯಲ್ಲಿ ಎರಡು ಬಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದೇನೆ. ರಾತ್ರಿ ವೇಳೆ ಸಂಚರಿಸುವುದೇ ಅಪಾಯಕಾರಿಯಾಗಿದೆ,'' ಎಂದರು. ಈ ಕುರಿತು ಪ್ರತಿಕ್ರಿಯಿಸಿರುವ ನಿಕಟಪೂರ್ವ ಪಾಲಿಕೆ ಸದಸ್ಯೆ ಶೋಭಾ ಕುಮಾರ್‌ಗೌಡ, '' ರಸ್ತೆ ಅಭಿವೃದ್ಧಿ ಪಾಲಿಕೆ ಹೊಣೆಯಲ್ಲ. ಬಿಡಿಎ ರಸ್ತೆ ಅಭಿವೃದ್ಧಿಪಡಿಸಬೇಕಿದೆ,''ಎಂದು ತಿಳಿಸಿದರು. ರಸ್ತೆ ಅಭಿವೃದ್ಧಿಗೆ ಯೋಜನೆ ಸಿದ್ಧ ''ನಾರಾಯಣನಗರ ಬಡಾವಣೆ ರಸ್ತೆ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಿ, ವೆಚ್ಚ ಅಂದಾಜಿಸಲಾಗಿದೆ. ಟೆಂಡರ್‌ ಕರೆಯಬೇಕಿದೆ,'' ಎಂದು ಬಿಡಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಬಿಪಿಒ ಉದ್ಯೋಗಿ ಕೊಲೆ ನಡೆದ ಪ್ರದೇಶ ರಸ್ತೆಗಳಲ್ಲಿ ಬೀದಿ ದೀಪಗಳೇ ಇಲ್ಲ. ಇದರಿಂದಾಗಿ ಕತ್ತಲಾದ ಬಳಿಕ ಸಂಚರಿಸುವುದು ಅಪಾಯಕಾರಿಯಾಗಿದೆ. ರಸ್ತೆಯ ಪಕ್ಕ ಕೆಲವೆಡೆ ನಿರ್ಜನ ಪ್ರದೇಶಗಳಿವೆ. ಇಲ್ಲಿ ದರೋಡೆ, ಕಳ್ಳತನದಂತಹ ಕೃತ್ಯ ನಡೆಯುವುದು ಸಾಮಾನ್ಯವಾಗಿದೆ. 2005ರಲ್ಲಿ ಬಿಪಿಒ ಉದ್ಯೋಗಿ ಪ್ರತಿಭಾ ಕೊಲೆಯಾಗಿದ್ದು, ಇದೇ ಜಾಗದಲ್ಲಿ. ರಾತ್ರಿ ವೇಳೆ ಜನರು ಆತಂಕದಲ್ಲೇ ಸಾಗುವಂತಾಗುತ್ತದೆ. ಪವನ್‌ ವಸಿಷ್ಠ, ನಾರಾಯಣನಗರ 1ನೇಹಂತ ಮಣ್ಣು ಸುರಿದು ಸಮಸ್ಯೆ ರಸ್ತೆ ಹಾಳಾಗಿರುವೆಡೆ ತ್ಯಾಜ್ಯ ಮಣ್ಣನ್ನು ಸುರಿಯಲಾಗುತ್ತಿದೆ. ಇದರಿಂದ ಮಳೆ ಬಂದಾಗ ಕೆಸರುಮಯವಾಗುತ್ತಿದೆ. ಮಳೆ ಇಲ್ಲದಿರುವಾಗ ಧೂಳುಮಯವಾಗುತ್ತದೆ. ಧೂಳಿನಿಂದಾಗಿ ಸ್ಥಳೀಯರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ. ರಸ್ತೆ ಪಕ್ಕ ಕಸವೂ ತೆರವಾಗುತ್ತಿಲ್ಲ. ಅರುಣ್‌ ವಾಸುಕಿ, ನಾರಾಯಣನಗರ ನಿವಾಸಿ ಗಮನಹರಿಸದ ಅಧಿಕಾರಿಗಳು ಬಿಡಿಎಯು ಹೊಸದಾಗಿ ಬಡಾವಣೆ ಅಭಿವೃದ್ಧಿಪಡಿಸುವುದಕ್ಕೂ ಮುನ್ನ ಈ ಮೊದಲೇ ಅಭಿವೃದ್ಧಿಪಡಿಸಿದ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವತ್ತ ಗಮನಹರಿಸಬೇಕು. ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರೂ ಅವರು ಇತ್ತ ಗಮನಹರಿಸುತ್ತಿಲ್ಲ. ಎಂ. ಕೃಷ್ಣಪ್ಪ , ಶಾಸಕ, ಬೆಂಗಳೂರು ದಕ್ಷಿಣ ಕ್ಷೇತ್ರ


from India & World News in Kannada | VK Polls https://ift.tt/2WoUmil

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...