
ಮೈಸೂರು: ಕಳೆದ ನಾಲ್ಕೈದು ದಿನಗಳಿಂದ ಸಾಂಸ್ಕೃತಿಕ ನಗರಿ ಜಿಲ್ಲೆ ಅಪರಾಧ ವಿಚಾರಗಳಿಗೆ ಸುದ್ದಿಯಾಗಿದೆ. ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ರಾಜ್ಯವೇ ನಾಚಿಕೆ ಪಡುವಂತೆ ಮಾಡಿದೆ. ಈ ಮಧ್ಯೆ ನಿನ್ನೆಯಷ್ಟೇ ವಿವಾದಾತ್ಮಕ ಹೇಳಿಕೆ ನೀಡಿ ರಾಜ್ಯದ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಆರಗ ಜ್ಞಾನೇಂದ್ರ ಅವರು ಇಂದು ಮೈಸೂರಿನಲ್ಲಿ ಫೈರಿಂಗ್ ಮಾಡೋ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಇಂದು ಮೈಸೂರಿನಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿಯ ವಿಭಾಗಗಳಿಗೆ ತೆರಳಿ ಮಾಹಿತಿ ಪಡೆದುಕೊಂಡ ಗೃಹ ಸಚಿವ ಅವರಿಗೆ ಪೊಲೀಸ್ ಫೈರಿಂಗ್ ತರಬೇತಿ ಬಗ್ಗೆ ವಿವರವಾದ ಮಾಹಿತಿಯನ್ನು ಪೊಲೀಸ್ ಅಧಿಕಾರಿಗಳು ನೀಡಿದರು. ಈ ಸಂದರ್ಭದಲ್ಲಿ ಪಿಸ್ತೂಲ್ನಿಂದ ನಿಗದಿತ ಸ್ಥಳದತ್ತ ಗುರಿಯಿಟ್ಟು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಫೈರಿಂಗ್ ಮಾಡಿದರು. ಪೊಲೀಸರಿಂದ ಪಿಸ್ತೂಲ್ ಪಡೆದು ಮೊದಲ ಬಾರಿಗೆ ನಿಖರವಾಗಿ ನಿಗದಿತ ಸ್ಥಳದತ್ತ ಗುರಿಯಿಟ್ಟು ಫೈರಿಂಗ್ ಮಾಡಿದ ಆರಗ ಜ್ಞಾನೇಂದ್ರ ಅವರು, ಆನಂತರದ ಪ್ರಯತ್ನಗಳಲ್ಲಿ ನಿಗದಿತ ಗುರಿಯತ್ತ ಫೈರಿಂಗ್ ಮಾಡುವಲ್ಲಿ ವಿಫಲರಾದರು. ಈ ಮಧ್ಯೆ ಗೃಹ ಸಚಿವರ ವರ್ತನೆಗೆ ಸಾರ್ವಜನಿಕರು ಮತ್ತು ವಿರೋಧ ಪಕ್ಷಗಳಿಂದ ಖಂಡನೆ ವ್ಯಕ್ತವಾಗಿದ್ದು, ಮೈಸೂರು ಸಾಮೂಹಿಕ ಅತ್ಯಾಚಾರ ಘಟನೆ ರಾಜ್ಯವನ್ನೇ ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗಳನ್ನು ಶೀಘ್ರ ಪತ್ತೆ ಹಚ್ಚಬೇಕಾದ ಸರ್ಕಾರದ ಪ್ರತಿನಿಧಿ ಈ ರೀತಿ ಫೈರಿಂಗ್ ಮಾಡೋದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಎದುರಾಗಿದೆ. ಕೆಲದಿನಗಳ ಹಿಂದೆ ಮೈಸೂರಿನಲ್ಲಿ ಜೊತೆಗೆ ಇದ್ದ ಯುವಕ-ಯುವತಿಯನ್ನು ಥಳಿಸಿ ಕಾಮುಕರ ಗುಂಪೊಂದು ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿತ್ತು. ಈ ಸುದ್ದಿ ದೇಶದ ಜನರು ಕರ್ನಾಟಕದತ್ತ ನೋಡುವಂತೆ ಮಾಡಿತ್ತು. ಈ ಮಧ್ಯೆ ಅತ್ಯಾಚಾರ ಪ್ರಕರಣ ರಾಜಕೀಯ ಕಾರಣದಿಂದ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಪ್ರಕರಣದಲ್ಲಿ ಕಾಂಗ್ರೆಸ್ನವರು ನನ್ನನ್ನು ಅತ್ಯಾಚಾರ ಮಾಡಲು ಯತ್ನಿಸುತ್ತಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಬಳಿಕ ಕ್ಷಮೆಯಾಚಿಸಿದ್ದರು.
from India & World News in Kannada | VK Polls https://ift.tt/3DgVgxX