ಬೆಂಗಳೂರು: ಭೂ ಗಡಿ ನಿಗದಿಗೊಳಿಸಿ ಭೂ ವರಿವರ್ತನೆ ಮಾಡಿಕೊಡಲು 70 ಲಕ್ಷಕ್ಕೆ ಬೇಡಿಕೆ ಇಟ್ಟ ಜಿಲ್ಲಾ ಭೂದಾಖಲೆಗಳ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಆನಂದ್(ಅಸಿಸ್ಟೆಂಟ್ ಡೈರೆಕ್ಟರ್ - ಲ್ಯಾಂಡ್ ರೆಕಾರ್ಡ್) ಮತ್ತು ಸಿಬ್ಬಂದಿ ರಮೇಶ್ ಎಂದು ಗುರುತಿಸಲಾಗಿದೆ. ಭೂ ಮಾಲೀಕರಾದ ವೇಣುಗೋಪಾಲ ಎಂಬುವವರು ಬೆಂಗಳೂರು ಹೊರವಲಯದಲ್ಲಿ ಜಮೀನು ಹೊಂದಿದ್ದಾರೆ. ಯಲಹಂಕ ತಾಲೂಕಿನ ಕುದುರುಗೆರೆಯ ಸರ್ವೇ ನಂಬರ್ 145/146 ಗಡಿಯನ್ನು ಸರ್ವೇ ಮಾಡಿಕೊಡಲು ಭೂದಾಖಲೆಗಳ ಇಲಾಖಾ ಸಿಬ್ಬಂದಿ ರಮೇಶನನ್ನು ಸಂಪರ್ಕಿಸಿದ್ದಾರೆ. ರಮೇಶ್ ಮೂಲಕ ಉಪನಿರ್ದೇಶಕಿ ಕುಸುಮಲತಾರನ್ನು ಸಂಪರ್ಕಿಸಿದ ಭೂಮಾಲೀಕರು ಸರ್ವೇ ಮತ್ತು ಮಾಡಿಕೊಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ 70 ಲಕ್ಷಕ್ಕೆ ಬೇಡಿಕೆ ಇಟ್ಟು, 20 ಲಕ್ಷ ಹಣವನ್ನು ಚೆಕ್ ಮೂಲಕ ಪಡೆಯಲಾಗಿದೆ. ಭೂಮಾಲೀಕರಿಂದ ದೂರು ಪಡೆದ ಎಸಿಬಿ ಅಧಿಕಾರಿಗಳು ಆನಂದ್ನ ಮನೆ, ಕುಸುಮಲತಾ ಹಾಗೂ ಸರ್ವೆ ಅಧಿಕಾರಿ ಶ್ರೀನಿವಾಸ್ ಅವರ ತುಮಕೂರಿನ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಭೂಪರಿವರ್ತನೆಗೆ ಸಂಬಂಧಿಸಿದಂತೆ ಲಂಚ ಪಡೆದ ದಾಖಲೆಗಳು ಪತ್ತೆಯಾಗಿವೆ ಎಂದು ಎಸಿಬಿ ಮೂಲಗಳು ತಿಳಿಸಿದೆ. ಆನಂದ್ ಮನೆಯಲ್ಲಿ 25.05 ಲಕ್ಷ ನಗದು, 70 ಲಕ್ಷ ರೂ. ಮೊತ್ತದ ಮೂರು ಚೆಕ್ ಮತ್ತು ಕೆಲ ದಾಖಲೆಗಳು ಜಪ್ತಿಯಾಗಿವೆ ಎಂದು ತಿಳಿದುಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಸಂತಪುರ ಗ್ರಾಮದ ಸರ್ವೇ ನಂ.17 ರಲ್ಲಿರುವ 29 ಗುಂಟೆ ಖರಾಬು ಜಮೀನನ್ನೂ ಸಹ ಭೂ ಪರಿವರ್ತನೆ ಮಾಡಿಕೊಡುವಂತೆ ಜಮೀನು ಮಾಲಿಕರಾದ ವೇಣುಗೋಪಾಲ್ ಮನವಿ ಮಾಡಿದ್ದರು ಎಂದು ತಿಳಿದುಬಂದಿದೆ. ಕುಸುಮಲತಾ ಮೇಲೆ ಸರಕಾರಕ್ಕೆ ಬರಬೇಕಾಗಿದ್ದ ತೆರಿಗೆ ವಂಚನೆ ಆರೋಪ ಹೊರಿಸಲಾಗಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
from India & World News in Kannada | VK Polls https://ift.tt/2Y0OpZk