ಹರೀಶ್ ಎಲ್. ತಲಕಾಡು : ಮೇಯರ್ ಚುನಾವಣೆಗೆ ಮೂರೇ ದಿನ ಬಾಕಿ ಇದ್ದರೂ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಿರುಸಿನ ಚಟುವಟಿಕೆ ನಡೆಯುತ್ತಿಲ್ಲ. ಆದರೆ, ಮುಖಂಡರು ಮಾತ್ರ ನಗರದ ಪ್ರಥಮ ಪ್ರಜೆ ಸ್ಥಾನಕ್ಕೆ ತಮ್ಮವರನ್ನು ಕೂರಿಸಲು ಜೆಡಿಎಸ್ ವರಿಷ್ಠರ ಹಿಂದೆ ಬಿದ್ದಿರುವುದನ್ನು ಗಮನಿಸಿದರೆ ದಳ - ಕಮಲ ದೋಸ್ತಿ ಕೈಗೂಡುವ ಲಕ್ಷಣಗಳು ಗೋಚರಿಸುತ್ತಿವೆ. ತನ್ನ ಚಿಹ್ನೆಯಡಿ ಆಯ್ಕೆಯಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರ್ಪೋರೇಟರ್ಗಳ ಅಭಿಪ್ರಾಯ ಆಲಿಸಿ, ಅವರ ಮನವೊಲಿಸುವುದು ಇಲ್ಲವೇ ಅವರ ಜತೆ ನಿಲ್ಲುವ ಆಯ್ಕೆಯೊಂದೇ ದಳ ವರಿಷ್ಠರ ಮುಂದಿದೆ. ಮೇಯರ್ ಚುನಾವಣೆ ಆಗಸ್ಟ್ 25ರಂದು ನಡೆಯಲಿದ್ದು, ಸಹಜವಾಗಿ ಎಲ್ಲ ಪಕ್ಷಗಳಲ್ಲೂ ಚಟುವಟಿಕೆ ಕಾಣಿಸಿಕೊಂಡಿದೆ. ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಅವರು ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಶಾಸಕ ಸಾ.ರಾ. ಮಹೇಶ್ ಅವರು ಜೆಡಿಎಸ್ ಸದಸ್ಯರು ಮತ್ತು ಮುಖಂಡರೊಂದಿಗೆ ಶನಿವಾರ ಸಭೆ ನಡೆಸಿದ್ದಾರೆ. ಸಾ.ರಾ. ಮಹೇಶ್ ತಮ್ಮ ಕಚೇರಿಯಲ್ಲಿ ಪಾಲಿಕೆ ಮೇಯರ್ ಚುನಾವಣೆ ಸಂಬಂಧ ಮೇಯರ್ ಸ್ಥಾನದ ಆಕಾಂಕ್ಷಿಗಳು, ಸದಸ್ಯರು, ಮಾಜಿ ಮೇಯರ್ಗಳು ಮತ್ತು ಪಕ್ಷದ ಮುಖಂಡರ ಸಭೆ ನಡೆಸಿ, ಅಭಿಪ್ರಾಯ ಆಲಿಸಿದರು. ಮೇಯರ್ ಸ್ಥಾನಕ್ಕೆ ಪೈಪೋಟಿ ಆರಂಭವಾಗಿರುವುದರಿಂದ ಜೆಡಿಎಸ್ ಯಾರಿಗೆ ಬೆಂಬಲಿಸಲಿದೆ ಮತ್ತು ಮೇಯರ್ ಸ್ಥಾನವನ್ನು ತನ್ನ ಬಳಿಯೇ ಉಳಿಸಿಕೊಳ್ಳಲಿದೆಯೇ ಎಂಬ ಕುತೂಹಲ ಇರುವುದರಿಂದ ಈ ಸಭೆ ಮಹತ್ವ ಪಡೆದುಕೊಂಡಿದೆ. ಆದರೆ ಹೆಚ್ಚಿನ ಸದಸ್ಯರು ಈ ಬಾರಿ ಮೇಯರ್ ಸ್ಥಾನವನ್ನು ನಾವೇ ಉಳಿಸಿಕೊಳ್ಳಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಈ ಅವಧಿ ಕೇವಲ 6 ತಿಂಗಳು ಇರುವುದರಿಂದ ಮೇಯರ್ ಸ್ಥಾನವನ್ನು ಇಟ್ಟುಕೊಳ್ಳುವುದೋ, ಬಿಟ್ಟುಕೊಡುವುದೋ ಎಂಬ ಜಿಜ್ಞಾಸೆಯಲ್ಲಿ ಜೆಡಿಎಸ್ ನಾಯಕರು ಇದ್ದಾರೆ. ಮೇಯರ್ ಸ್ಥಾನವನ್ನು ಬಿಜೆಪಿಗೆ ಬಿಟ್ಟುಕೊಡುವುದಾದರೆ ಈ ಬಾರಿಯೂ ಬಿಜೆಪಿಯಿಂದ ಸದಸ್ಯೆ ಸುನಂದಾ ಫಾಲನೇತ್ರ ಕಣಕ್ಕಿಳಿಯುವುದು ನಿಶ್ಚಿತ. ಆದರೆ ಕಡೆ ಕ್ಷಣದಲ್ಲಿ ಬದಲಾವಣೆಯಾದರೆ ಪ್ರಮಿಳಾ ಭರತ್ ಅವರಿಂದ ನಾಮಪತ್ರ ಸಲ್ಲಿಸಲು ಬಿಜೆಪಿ ನಿರ್ಧರಿಸಿದೆ. ಇನ್ನು ಕಾಂಗ್ರೆಸ್ನಿಂದ ಶಾಂತಕುಮಾರಿ ಮೇಯರ್ ಆಕಾಂಕ್ಷಿಯಾಗಿದ್ದರೆ, ಜೆಡಿಎಸ್ನಿಂದ ಅಶ್ವಿನಿ ಅನಂತು ಸೇರಿದಂತೆ ಕೆಲವರ ಹೆಸರು ಕೇಳಿ ಬರುತ್ತಿದೆ. ಆದರೆ ಇದುವರೆವಿಗೂ ಯಾರ ಹೆಸರೂ ಅಂತಿಮಗೊಂಡಿಲ್ಲ. ಇನ್ನು ಕಾಂಗ್ರೆಸ್ ಪಾಳಯದಲ್ಲೂ ಮೇಯರ್ ಸ್ಥಾನಕ್ಕೆ ಪ್ರಯತ್ನ ಮುಂದುವರೆದಿದೆ. ಈ ಬಾರಿ ಮೇಯರ್ ಸ್ಥಾನ ಬಿಟ್ಟುಕೊಡುವ ಬಗ್ಗೆ ಜೆಡಿಎಸ್ ಸ್ಪಷ್ಟಪಡಿಸಿದರೆ ಮಾತ್ರ ಕಾಂಗ್ರೆಸ್ ಮೈತ್ರಿ ಉಳಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಆದರೂ ಯಾವ ಪಕ್ಷಗಳು ಮೈತ್ರಿಯಾಗುತ್ತವೆ ಹಾಗೂ ಯಾರು ಮೇಯರ್ ಆಗಬಹುದು ಎಂಬುದನ್ನು ಕಡೇ ಕ್ಷಣದವರೆಗೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ ಎನ್ನುವುದಂತೂ ಸ್ಪಷ್ಟ. ಸಾರಾ ಜತೆ ಸಚಿವ ಎಸ್ಟಿಎಸ್ ಒಂದು ಸುತ್ತು ಮಾತುಕತೆ: ಮೇಯರ್ ಆಯ್ಕೆ ವಿಚಾರವಾಗಿ ಈಗಾಗಲೇ ಜೆಡಿಎಸ್ ಶಾಸಕ ಸಾ. ರಾ. ಮಹೇಶ್ ಅವರ ಜತೆ ನಾನು, ಸಂಸದ ಪ್ರತಾಪ್ ಸಿಂಹ, ಪಕ್ಷದ ಜಿಲ್ಲಾಧ್ಯಕ್ಷರು, ಶಾಸಕ ಎಲ್.ನಾಗೇಂದ್ರ ಮಾತನಾಡಿದ್ದೇವೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು. ಗುಂಡ್ಲುಪೇಟೆ ತಾಲೂಕು ಕೇರಳ ಗಡಿ ಮೂಲೆಹೊಳೆ ಚೆಕ್ಪೋಸ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, 'ಸಾರಾ ಅವರು ನಮಗೆ ಮೇಯರ್ ಸ್ಥಾನ ಬಿಟ್ಟುಕೊಡುವಂತೆ ಕೇಳಿದ್ದಾರೆ. ಮತ್ತೆ ಇನ್ನೊಂದು ಸುತ್ತಿನ ಮಾತುಕತೆ ನಡೆಸಿ ನಾಳೆ, ನಾಡಿದ್ದು ಆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ'ಎಂದರು. 'ಆದರೆ, ನಾನು ಈ ವಿಷಯದಲ್ಲಿ ಎಚ್. ಡಿ. ಕುಮಾರಸ್ವಾಮಿ ಅವರ ಜತೆ ಮಾತನಾಡುವುದಿಲ್ಲ' ಎಂದೂ ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
from India & World News in Kannada | VK Polls https://ift.tt/2W8oPAB