ವಿದ್ಯುತ್‌ ಸ್ಮಾರ್ಟ್‌ ಮೀಟರ್‌ಗೆ ವಿರೋಧ: ಪ್ರಿಪೇಯ್ಡ್‌ ವ್ಯವಸ್ಥೆ ಬೇಡ, ಉದ್ಯಮ ಸ್ನೇಹಿ ನೀತಿ ಇರಲಿ; ಕೈಗಾರಿಕೋದ್ಯಮಿಗಳ ಆಗ್ರಹ

ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು ಬೆಂಗಳೂರು: ರಾಜ್ಯದಲ್ಲಿ ಪ್ರಿಪೇಯ್ಡ್‌ ವಿದ್ಯುತ್‌ ಅಳವಡಿಕೆಗೆ ಕೈಗಾರಿಕೋದ್ಯಮಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಖಾಸಗೀಕರಣಗೊಳಿಸುವ ಮತ್ತು ಕೈಗಾರಿಕೆಗಳಿಗೆ ಮಾರಕವಾಗಿರುವ ಹೊಸ ವಿದ್ಯುತ್‌ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತೇವೆ ಎಂದು ಸಂಘಗಳು ಹೇಳಿವೆ. ಕೋವಿಡ್‌ ಮತ್ತು ಲಾಕ್‌ಡೌನ್‌ನಿಂದ ಅತಿ ಸಣ್ಣ, ಸಣ್ಣ, ಮಧ್ಯಮ ಮತ್ತು ಬೃಹತ್‌ ಕೈಗಾರಿಕೆಗಳು ತತ್ತರಿಸಿ ಹೋಗಿವೆ. ಆರ್ಥಿಕವಾಗಿ ಚೇತರಿಸಿಕೊಳ್ಳಲು ಹೆಣಗಾಡುತ್ತಿವೆ. ಉದ್ಯಮ ನಿರ್ವಹಣೆಗಾಗಿ ಬ್ಯಾಂಕ್‌ಗಳಿಂದ ಪಡೆದಿದ್ದ ಸಾಲ ಕಟ್ಟಲಾಗದೆ ಕೈಗಾರಿಕೆ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವರು ಆರ್ಥಿಕ ನಷ್ಟದಿಂದ ಕೈಗಾರಿಕೆ ಮುಚ್ಚುವ ಸ್ಥಿತಿಯಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಮುಂಗಡವಾಗಿ ಹಣ ಪಾವತಿಸಿ ವಿದ್ಯುತ್‌ ಖರೀದಿಸುವುದು ಕೈಗಾರಿಕೋದ್ಯಮಿಗಳಿಗೆ ಬಹು ದೊಡ್ಡ ಹೊರೆಯಾಗುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಉದ್ಯಮಸ್ನೇಹಿ, ಸುಲಲಿತ ವಹಿವಾಟಿಗೆ ಪೂರಕವಾದ ಕಾರ್ಯಕ್ರಮಗಳನ್ನು ರೂಪಿಸುವ ಬದಲಿಗೆ ಕೈಗಾರಿಕಾ ವಲಯಕ್ಕೆ ಮಾರಕವಾಗಿರುವ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಹೊರಟಿವೆ. ಇಂಥ ಉದ್ಯಮ ವಿರೋಧಿ ನೀತಿಗೆ ತೀವ್ರ ವಿರೋಧ ವ್ಯಕ್ತಪಡಿಸಲಾಗುವುದು ಎಂದು ಕೈಗಾರಿಕೋದ್ಯಮಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಿಷ್ಟೇ ವಿದ್ಯುತ್‌ ಲೆಕ್ಕ ಹಾಕುವುದು ಕಷ್ಟ ಏಷ್ಯಾದ ಎರಡನೇ ಅತಿದೊಡ್ಡ ಕೈಗಾರಿಕೆ ಪ್ರದೇಶವಾಗಿರುವ ಪೀಣ್ಯದಲ್ಲಿ ಸುಮಾರು 10 ಸಾವಿರ ಕಾರ್ಖಾನೆಗಳಿವೆ. ಇವು ತಿಂಗಳಿಗೆ 320 ಮೆಗಾ ವ್ಯಾಟ್‌ ವಿದ್ಯುತ್‌ ಬಳಸುತ್ತಿದ್ದು, ಬೆಸ್ಕಾಂಗೆ ಕೋಟ್ಯಂತರ ರೂ. ಶುಲ್ಕ ಪಾವತಿಸುತ್ತಿವೆ. ಇಂತಿಷ್ಟೇ ವಿದ್ಯುತ್‌ ಬೇಕಾಗಲಿದೆ ಎಂದು ನಿರೀಕ್ಷಿಸಿ ರೀಚಾರ್ಜ್ ಮಾಡಿಸಿಕೊಳ್ಳಲು ಆಗುವುದಿಲ್ಲ. ಸರಕು ಪೂರೈಕೆಯ ಆರ್ಡರ್‌ ಇಲ್ಲದಿರುವಾಗ ಯಂತ್ರಗಳನ್ನು ಚಾಲೂ ಮಾಡುವುದೇ ಇಲ್ಲ. ಮುಂಗಡವಾಗಿ ಸಾವಿರಾರು ರೂ. ಪಾವತಿಸಿ ವಿದ್ಯುತ್‌ ಖರೀದಿಸಿದರೆ ನಷ್ಟವಾಗುತ್ತದೆ ಎಂಬುದು ಕೈಗಾರಿಕಾ ಉದ್ಯಮಿಯೊಬ್ಬರ ವಾದ. ಶುಲ್ಕ ಪಾವತಿಗೆ ಸಿಗಲ್ಲ ಕಾಲಾವಕಾಶ ''ಒಂದು ತಿಂಗಳು ವಿದ್ಯುತ್‌ ಬಳಕೆ ಮಾಡಿದ ನಂತರ ಶುಲ್ಕ ಪಾವತಿಗೆ 15 ದಿನ ಕಾಲಾವಕಾಶವಿರುತ್ತದೆ. ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ವ್ಯವಸ್ಥೆಯಲ್ಲಿ ಈ ರೀತಿಯ ಕಾಲಾವಕಾಶ ಸಿಗದು. ಬಹುತೇಕ ಕೈಗಾರಿಕೆಗಳು ಆಯಾ ತಿಂಗಳ ಉತ್ಪಾದನೆ, ಆದಾಯ ಸಂಗ್ರಹ ಆಧರಿಸಿ ಕಾರ್ಯ ನಿರ್ವಹಿಸುತ್ತಿವೆ. ಕಾರ್ಖಾನೆಗಳಲ್ಲಿ ಉತ್ಪಾದಿಸಿದ ಸಾಮಗ್ರಿಗಳನ್ನು ಪೂರೈಸಿದ 60 ಅಥವಾ 90 ದಿನಗಳ ಬಳಿಕ ಹಣ ಪಾವತಿಯಾಗುತ್ತದೆ. ಹೀಗಿರುವಾಗ ಮುಂಗಡವಾಗಿ ಲಕ್ಷಾಂತರ ರೂ. ಪಾವತಿಸಿ ವಿದ್ಯುತ್‌ ಖರೀದಿಸಲು ಹೇಗೆ ಸಾಧ್ಯ? ಮೀಟರ್‌ ರೀಚಾರ್ಜ್ ವೇಳೆ ಸೇವಾ ಶುಲ್ಕ ಕಡಿತ ಮಾಡಲಾಗುತ್ತದೆ. ಪೂರ್ಣ ಮೊತ್ತಕ್ಕೆ ವಿದ್ಯುತ್‌ ಸಿಗದು. ಈ ನಷ್ಟ ಭರಿಸುವವರು ಯಾರು,'' ಎಂದು ಪೀಣ್ಯದ ಕಾರ್ಖಾನೆ ಮಾಲೀಕರೊಬ್ಬರು ಪ್ರಶ್ನಿಸಿದರು. ''ಕ್ರಮೇಣ ಮೀಟರ್‌ ಅಳವಡಿಕೆ ವೆಚ್ಚವನ್ನು ಮಾಲೀಕರ ಮೇಲೆಯೇ ಹಾಕುವ ಸಾಧ್ಯತೆ ಇದೆ. ಪೀಣ್ಯದಲ್ಲಿ ಶೇ. 60-70ರಷ್ಟು ಉದ್ಯಮಿಗಳು ಬಾಡಿಗೆಗೆ ಕಟ್ಟಡದಲ್ಲಿ ಕೈಗಾರಿಕೆಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ. ವಿದ್ಯುತ್‌ ಸಂಪರ್ಕವು ಮಾಲೀಕರ ಹೆಸರಿನಲ್ಲಿದೆ. ಮಾಲೀಕರು ಕೇಳಿದಷ್ಟು ದುಡ್ಡು ಕೊಟ್ಟು ವಿದ್ಯುತ್‌ ಮೀಟರ್‌ ರೀಚಾರ್ಜ್ ಮಾಡಿಸಬೇಕಾದ ಪರಿಸ್ಥಿತಿ ಎದುರಾಗಲಿದೆ,'' ಎಂದವರು ಅಸಮಾಧಾನ ವ್ಯಕ್ತಪಡಿಸಿದರು. ಉದ್ಯಮ ನಡೆಸಲು ಹೆಣಗಾಡುತ್ತಿರುವ ಸಂದರ್ಭದಲ್ಲಿ ಲಕ್ಷಾಂತರ ರೂ. ಕೊಟ್ಟು ಮುಂಚಿತವಾಗಿ ವಿದ್ಯುತ್‌ ಖರೀದಿಸುವುದು ಅಸಾಧ್ಯ. ಬಳಕೆಗೆ ಮೊದಲೇ ಶುಲ್ಕ ವಸೂಲಿ ಮಾಡುವ ಕ್ರಮ ಒಪ್ಪಲಾಗದು. ಇಂಥ ನಿರ್ಧಾರ ಕೈಗೊಳ್ಳುವ ಮುನ್ನ ಸರಕಾರ ಕೈಗಾರಿಕೋದ್ಯಮಿಗಳೊಂದಿಗೆ ಅದರ ಸಾಧಕ-ಬಾಧಕಗಳ ಕುರಿತು ಚರ್ಚಿಸಬೇಕು. ಕರ್ನಾಟಕದಲ್ಲಿ6 ಲಕ್ಷ ಮೆಗಾ ವ್ಯಾಟ್‌ ವಿದ್ಯುತ್‌ ಹೆಚ್ಚುವರಿಯಾಗಿ ಉತ್ಪಾದನೆಯಾಗುತ್ತಿದ್ದು, ಇದನ್ನು ಯೂನಿಟ್‌ಗೆ ಕೇವಲ 2.30 ರೂ.ಗಳಿಗೆ ಬೇರೆ ರಾಜ್ಯಗಳಿಗೆ ಮಾರಾಟ ಮಾಡಲಾಗುತ್ತಿದೆ. ನಮ್ಮದೇ ರಾಜ್ಯದ ಕೈಗಾರಿಕೆಗಳಿಗೆ 8-9 ರೂ.ಗಳಿಗೆ ನೀಡಲಾಗುತ್ತಿದೆ. ಪೆರಿಕ್ಕಲ್‌ ಎಂ.ಸುಂದರ್‌, ಅಧ್ಯಕ್ಷ, ಎಫ್‌ಕೆಸಿಸಿಐ ಪ್ರಿಪೇಯ್ಡ್‌ ಸ್ಮಾರ್ಟ್‌ ಮೀಟರ್‌ ಅಳವಡಿಕೆ ಮೂಲಕ ವಿದ್ಯುತ್‌ ಕ್ಷೇತ್ರ ಖಾಸಗೀಕರಣಗೊಳಿಸುವ ತಂತ್ರ ಸರಕಾರದ್ದಾಗಿದೆ. ಇದು ಕೈಗಾರಿಕೆಗಳ ಬೆಳವಣಿಗೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಮುಂಗಡವಾಗಿ ಹಣ ಕೊಟ್ಟು ವಿದ್ಯುತ್‌ ಖರೀದಿಸುವ ಸ್ಥಿತಿಯಲ್ಲಿ ಕಾರ್ಖಾನೆಗಳಿಲ್ಲ. ತಿಂಗಳಿಗೆ ಇಂತಿಷ್ಟೇ ವಿದ್ಯುತ್‌ ಅಗತ್ಯವಿದೆ ಎಂದು ಊಹಿಸಲು ಆಗುವುದಿಲ್ಲ. ಈ ನಿರ್ಧಾರ ಕೈಬಿಡಬೇಕು. ಪ್ರಕಾಶ್‌.ಸಿ, ಅಧ್ಯಕ್ಷ, ಪೀಣ್ಯ ಕೈಗಾರಿಕಾ ಸಂಘ


from India & World News in Kannada | VK Polls https://ift.tt/3j7hbzE

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...