'ಬುಮ್ರಾಗೆ ಬೌಂಡರಿ ಬಳಿ ಅಷ್ಟೊಂದು ಫೀಲ್ಡರ್‌ಗಳು ಏಕೆ?' ರೂಟ್‌ಗೆ ವಾನ್‌ ಪ್ರಶ್ನೆ!

ಲಂಡನ್‌: ಭಾರತ ವಿರುದ್ಧ ಲಾರ್ಡ್ಸ್‌ ಟೆಸ್ಟ್ ಐದನೇ ದಿನ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್‌ ಶಮಿ ಹಾಗೂ ಅವರಿಗೆ ನಾಯಕ ರೂಪಿಸಿದ್ದ ತಂತ್ರದ ಬಗ್ಗೆ ಮಾಜಿ ಕ್ರಿಕೆಟಿಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್‌ ತಂಡ ಪಂದ್ಯದಲ್ಲಿ ಮೇಲುಗೈ ಸಾಧಿಸಿತ್ತು. ಅದರಂತೆ ಐದನೇ ದಿನ ಬೆಳಗ್ಗೆ ಕ್ರೀಸ್‌ನಲ್ಲಿದ್ದ ಏಕೈಕ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ಅವರನ್ನು ಇಂಗ್ಲೆಂಡ್‌ ಬಹುಬೇಗ ಔಟ್‌ ಮಾಡಿತ್ತು. ನಂತರ, ಇಶಾಂತ್‌ ಶರ್ಮಾ ಕೂಡ ಪೆವಿಲಿಯನ್‌ ಸೇರಿದ್ದರು. ಆ ಮೂಲಕ ಭಾರತ 209 ರನ್‌ಗಳಿಗೆ 8 ವಿಕೆಟ್‌ ಕಳೆದುಕೊಂಡು ಸೋಲಿನ ಭೀತಿಗೆ ಒಳಗಾಗಿತ್ತು. ಈ ವೇಳೆ ಕ್ರೀಸ್‌ನಲ್ಲಿ ಜೊತೆಯಾದ ಮೊಹಮ್ಮದ್‌ ಶಮಿ ಹಾಗೂ ಜಸ್‌ಪ್ರಿತ್‌ ಬುಮ್ರಾ ಜೋಡಿ ಇಂಗ್ಲೆಂಡ್‌ ತಂಡ ಸೇರಿದಂತೆ ಹಲವು ಕ್ರಿಕೆಟ್‌ ಪಂಡಿತರ ಲೆಕ್ಕಾಚಾರವನ್ನು ತಲೆ ಕೆಳಗಾಗುವಂತೆ ಮಾಡಿತ್ತು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 89 ರನ್‌ ಗಳಿಸಿ ಇಂಗ್ಲೆಂಡ್‌ ತಂಡಕ್ಕೆ 272 ರನ್‌ ಗುರಿ ನೀಡುವಲ್ಲಿ ಭಾರತಕ್ಕೆ ನೆರವಾಯಿತು. ಅಂತಿಮವಾಗಿ ಪಂದ್ಯದಲ್ಲಿ ಇಂಗ್ಲೆಂಡ್‌ 151 ರನ್‌ಗಳಿಂದ ಹೀನಾಯ ಸೋತು, ಸರಣಿಯಲ್ಲಿ 0-1 ಹಿನ್ನಡೆ ಅನುಭವಿಸಿತು. "ರಿಷಭ್‌ ಪಂತ್‌ಗಿಂತ ಜಸ್‌ಪ್ರಿತ್‌ ಬುಮ್ರಾ ಬ್ಯಾಟಿಂಗ್‌ನಲ್ಲಿ ಬೌಂಡರಿ ಬಳಿ ಹೆಚ್ಚು ಫೀಲ್ಡರ್‌ಗಳಿದ್ದರು. 100 ಟೆಸ್ಟ್‌ ಪಂದ್ಯಗಳಾಡಿರುವ ಅನುಭವಿಗಳಾದ ಜೋ ರೂಟ್‌ ಹಾಗೂ ಜೇಮ್ಸ್ ಅಂಡರ್ಸನ್‌ ತಂಡದಲ್ಲಿಇರಬೇಕಾದರೆ, ಇಂತಹ ಘಟನೆಗಳು ಹೇಗೆ ನಡೆಯುತ್ತವೆ? ಶಮಿ ಹಾಗೂ ಬುಮ್ರಾಗೆ ರೂಪಿಸಿದ್ದ ತಂತ್ರ ಸಂಪೂರ್ಣ ತಪ್ಪಾಗಿದೆ," ಎಂದು ಮೈಕಲ್‌ ವಾನ್‌ ಬಿಸಿಸಿಗೆ ತಿಳಿಸಿದ್ದಾರೆ. ಭಾರತದ ಟೇಲೆಂಡರ್‌ಗಳು ಬ್ಯಾಟ್‌ ಮಾಡುವ ವೇಳೆ ಇಂಗ್ಲೆಂಡ್‌ ಬೌಲರ್‌ಗಳು ಶಾರ್ಟ್‌ ಅಥವಾ ಬೌನ್ಸರ್ ಹಾಕುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ವಾನ್‌, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ರೀತಿ ಸ್ಟಂಪ್‌ಗಳ ಮೇಲ್ಭಾಗಕ್ಕೆ ನೇರವಾಗಿ ಬೌಲ್‌ ಮಾಡಿದ್ದರೆ ಸಾಕಾಗುತ್ತಿತ್ತು ಹಾಗೂ ಸಂಗತಿಗಳನ್ನು ಸಾಮಾನ್ಯವಾಗಿ ಇಟ್ಟಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ವಾನ್‌ ಅಭಿಪ್ರಾಯ ವ್ಯಕ್ತಪಡಿಸಿದರು. "ಆದರೆ, ಬುಮ್ರಾ, ಶಮಿ ಕ್ರೀಸ್‌ನಲ್ಲಿ ಇರಬೇಕಾದರೆ, ಎಲ್ಲಾ ಕಡೆ ಫೀಲ್ಡರ್‌ಗಳಿದ್ದಾರೆ. ಇವರ ತಲೆಯಲ್ಲಿ ಏನು ಓಡುತ್ತಿದೆ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ನೋಡಿ, ನೀವು ಒತ್ತಡದಲ್ಲಿದ್ದಾಗ, ಸಂಗತಿಗಳು ಸಾಮಾನ್ಯವಾಗಿರಬೇಕು. ಒಂದು ವೇಳೆ ನೀವು ಟೇಲೆಂಡರ್‌ಗಳಿಗೆ ಬೌಲ್‌ ಮಾಡುವ ಹಾಗಿದ್ದರೆ, ಆಫ್‌ ಸ್ಟಂಪ್‌ ಮೇಲ್ಬಾಗಕ್ಕೆ ಚೆಂಡನ್ನು ಗುರಿಯಾಗಿಸಬೇಕು ಹಾಗೂ ವೈಡ್‌ ಮತ್ತು ಶಾರ್ಟ್‌ ಎಸೆತಗಳನ್ನು ಹಾಕಬಾರದು," ಎಂದು ಇಂಗ್ಲೆಂಡ್‌ ಮಾಜಿ ನಾಯಕ ಸಲಹೆ ನೀಡಿದ್ದಾರೆ. ಭಾರತ ವಿರುದ್ಧ ಸೋಲಿನ ಬಳಿಕ ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ್ದ ಜೋ ರೂಟ್‌, ಐದನೇ ದಿನ ತಾವು ರೂಪಿಸಿದ್ದ ತಂತ್ರ ಸಂಪೂರ್ಣ ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದರು. "ಇದರಲ್ಲಿ ನಾವು ಕೆಲ ತಪ್ಪುಗಳನ್ನು ಮಾಡಿದ್ದೇವೆ. ಇದರ ಶ್ರೇಯ ಅದ್ಭುತ ಜೊತೆಯಾಟವಾಡಿದ ಜಸ್‌ಪ್ರಿತ್‌ ಬುಮ್ರಾ ಹಾಗೂ ಮೊಹಮ್ಮದ್‌ ಶಮಿಗೆ ಸಲ್ಲಬೇಕು. ನಾವು ಅಂದುಕೊಂಡಿದ್ದ ಎಲ್ಲಾ ಯೋಜನೆಯನ್ನು ಈ ಜೋಡಿ ಮಣ್ಣು ಪಾಲು ಮಾಡಿತು. ಈ ಸೋಲಿನಿಂದ ನಾವು ಪಾಠವನ್ನು ಕಲಿತ್ತಿದ್ದು, ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಅಂಗಳಕ್ಕೆ ಮರಳುತ್ತೇವೆಂದು," ಜೋ ರೂಟ್‌ ವಿಶ್ವಾಸ ವ್ಯಕ್ತಪಡಿಸಿದ್ದರು.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/2UqSvs7

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...