ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಾಂತ್ಯ ಕರ್ಫ್ಯೂ, ನೈಟ್ ಕರ್ಫ್ಯೂ ಜತೆ ಇದೀಗ ಹಾಗೂ ಆ್ಯಂಡ್ ರೆಸ್ಟೋರೆಂಟ್ಗಳನ್ನು ರಾತ್ರಿ ಏಳು ಗಂಟೆಗೆ ಮುಚ್ಚಲು ಆದೇಶಿಸಿರುವುದರಿಂದ ಜಿಲ್ಲೆಯ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಉದ್ಯಮಿಗಳು, ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಜಿಲ್ಲೆಯ ಎಲ್ಲ ಪಬ್ ಹಾಗೂ ಬಾರ್ ಆ್ಯಂಡ್ ರೆಸ್ಟೋರೆಂಟ್ಗಳನ್ನು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಏಳು ಗಂಟೆಗೆ ಕಡ್ಡಾಯವಾಗಿ ಮುಚ್ಚಬೇಕು ಮತ್ತು ಜಿಲ್ಲೆಯಾದ್ಯಂತ ರಾತ್ರಿ ಒಂಬತ್ತು ಗಂಟೆಯಿಂದ ಬೆಳಗ್ಗೆ ಆರು ಗಂಟೆ ವರೆಗೆ ವಿಧಿಸಿರುವ ರಾತ್ರಿ ಕರ್ಫ್ಯೂ ಸೇರಿದಂತೆ ವಾರಾಂತ್ಯ ಕರ್ಫ್ಯೂವನ್ನು ಆ.30ರ ತನಕ ಮುಂದುವರೆಸಬೇಕು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾದಂಡಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಹೇರಿಗೆ ವಿರುದ್ಧ ಕರಾವಳಿ ಟೆಕ್ಸ್ಟೈಲ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಅಸೋಸಿಯೆಶನ್ ಜಿಲ್ಲೆಗೆ ಆಗಮಿಸಿದ್ದ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ, ಆ.30ರ ತನಕ ವೀಕೆಂಡ್ ಕರ್ಫ್ಯೂ ಮುಂದುವರಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದು ಸಂಘದ ಆಕ್ರೋಶಕ್ಕೆ ಕಾರಣವಾಗಿದೆ. ಕೋವಿಡ್ ನಿಯಂತ್ರಣಕ್ಕಾದರೆ ಸಂಪೂರ್ಣ ಬಂದ್ ಆಚರಿಸಲಿ. ಅದು ಬಿಟ್ಟು, ಜವಳಿ, ಚಪ್ಪಲಿ, ಆಭರಣ ವ್ಯಾಪಾರ ಹೊರತುಪಡಿಸಿ, ಉಳಿದೆಲ್ಲ ವಹಿವಾಟುಗಳಿಗೆ ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದ ಈ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಸಾವಿರಾರು ಉದ್ಯಮಿಗಳು, ನೌಕರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ ಎನ್ನುತ್ತಾರೆ ಕರಾವಳಿ ಟೆಕ್ಸ್ಟೈಲ್ಸ್ ಮತ್ತು ಫೂಟ್ವೇರ್ ಡೀಸಲರ್ಸ್ ಅಸೋಸಿಯೆಶನ್ ಅಧ್ಯಕ್ಷ ಕೆ.ಸಂತೋಷ್ ಕಾಮತ್. ಏಪ್ರಿಲ್, ಮೇ, ಜೂನ್ ತಿಂಗಳ ಸೀಸನ್ನಲ್ಲಿ ಕೋವಿಡ್ ಲಾಕ್ಡೌನ್ನಿಂದ ಎಲ್ಲ ಉದ್ಯಮ ನೆಲಕಚ್ಚಿದೆ. ಕಟ್ಟಡ ಬಾಡಿಗೆ ದುಬಾರಿಯಾಗಿದೆ. ವಿದ್ಯುತ್ ಬಿಲ್, ಸಿಬ್ಬಂದಿ ಸಂಬಳ ಕೊಡಲು ಸಾಧ್ಯವಾಗುತ್ತಿಲ್ಲ. 10ನೇ ತರಗತಿ ಫೈಲ್ ಆದವರಿಗೆ ಸರಕಾರ ಎಲ್ಲಿಯೂ ಕೆಲಸ ಕೊಡುತ್ತಿಲ್ಲ. ನಾವು ಇಂತಹ ಸಾವಿರಾರು ಯುವಕ- ಯುವತಿಯರಿಗೆ ಕೆಲಸ ಕೊಟ್ಟಿದ್ದೇವೆ. ಇಂಥ ಸಂದರ್ಭ ಸರಕಾರ ಉದ್ಯಮದ ಪರವಾಗಿರಬೇಕು. ಅದು ಬಿಟ್ಟು ಜವಳಿ, ಪಾದರಕ್ಷೆ ಉದ್ಯಮ ಮುಚ್ಚಲು ಹೇಳುವುದು ಸರಿಯಲ್ಲ ಎನ್ನುತ್ತಾರೆ ಜವಳಿ ಉದ್ಯಮಿ ಸದಾಶಿವ ರಾವ್ ನೆಲ್ಲಿಮಾರ್. ಶನಿವಾರ ಮತ್ತು ಭಾನುವಾರವೇ ಜನರು ಮಾರುಕಟ್ಟೆಗೆ, ಖರೀದಿಗೆ ಬರುತ್ತಾರೆ. ಅದೇ ಸಂದರ್ಭ ಮಾಲ್ ಮತ್ತಿತರ ಮಳಿಗೆಗಳನ್ನು ಮುಚ್ಚುವುದರಿಂದ ವ್ಯವಹಾರಕ್ಕೆ ಧಕ್ಕೆಯಾಗುತ್ತಿದೆ. ಈಗಾಗಲೇ ಸಾಕಷ್ಟು ದಾಸ್ತಾನು ಖರೀದಿ ಮಾಡಿ ತಂದಿದ್ದು, ಅದರ ಮೊತ್ತವನ್ನು ಪಾವತಿಸಬೇಕು. ಒಂದು ವೇಳೆ ಉದ್ಯಮವೇ ನಡೆಯದಿದ್ದರೆ, ಬದುಕುವುದಾದರೂ ಹೇಗೆ? ಸರಕಾರಕ್ಕೆ ಕೋವಿಡ್ ನಿಯಂತ್ರಿಸಬೇಕಿದ್ದರೆ ಜನರಿಗೆ 15 ದಿನಗಳ ಆಹಾರ ಸಹಿತ ಎಲ್ಲ ಸೌಲಭ್ಯ ಕಲ್ಪಿಸಿ ನಂತರ ಆಸ್ಪತ್ರೆ, ಔಷಧ, ಹಾಲು, ಪತ್ರಿಕೆ ಬಿಟ್ಟು ಇತರ ಎಲ್ಲ ಉದ್ಯಮ 15 ದಿನ ಸಂಪೂರ್ಣ ಮುಚ್ಚಲಿ ಎಂದು ಉದ್ಯಮಿ ಇಸ್ಮಾಯೀಲ್ ಹೇಳುತ್ತಾರೆ. ಜಿಲ್ಲಾಡಳಿತ ನಿರ್ಬಂಧಕೋವಿಡ್- 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವು ಸರಕಾರದ ನಿರ್ದೇಶನದಂತೆ ಕಾಲಕಾಲಕ್ಕೆ ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೇರಳ ರಾಜ್ಯದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸುವವರಿಗೆ ಈಗಾಗಲೇ ನಿರ್ಬಂಧ ವಿಧಿಸಿ ಆದೇಶಿಸಿದೆ. ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೊಸ ಕೋವಿಡ್- ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ಗಮನಿಸಿ, ಕೋವಿಡ್ ವೈರಾಣು ಹರಡುವುದನ್ನು ತಡೆಯಲು ಕೇಂದ್ರೀಕೃತ ಕಣ್ಗಾವಲು, ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ. ಸ್ಥಳೀಯವಾಗಿ ಸೋಂಕು ಹರಡುವುದನ್ನು ನಿಯಂತ್ರಿಸಲು ಆರೋಗ್ಯ ಪರಿಣಿತರ ಸೂಚನೆಯಂತೆ ಕೈಗೊಂಡಿರುವ ನಿರ್ಬಂಧಗಳನ್ನು ಆ.30ರ ತನಕ ಮುಂದುವರೆಸಿ ಆದೇಶಿಸಲಾಗಿದೆ. ಒಂದೂವರೆ ವರ್ಷದಿಂದ ಲಾಕ್ಡೌನ್, ವೀಕೆಂಡ್ ಕರ್ಫ್ಯೂ ಇತ್ಯಾದಿಗಳಿಂದ ವೈನ್ ಶಾಪ್, ಬಾರ್ ಆ್ಯಂಡ್ ರೆಸ್ಟೋರೆಂಟ್ಗಳಿಗೆ ದೊಡ್ಡ ಹೊಡೆತ ಬಿದ್ದಿದೆ. ಮಾಲೀಕರು ಮಾತ್ರವಲ್ಲ, ಈ ಉದ್ಯಮ ನಂಬಿ ಬದುಕುವ ನೂರಾರು ಮಂದಿ ಸಂಕಷ್ಟ ಪರಿಸ್ಥಿತಿಯಲ್ಲಿದ್ದಾರೆ. ಸಾಮಾನ್ಯವಾಗಿ ಬಾರ್ ಉದ್ಯಮ ಆರಂಭವಾಗುವುದೇ ಸಂಜೆ ಏಳು ಗಂಟೆ ನಂತರ. ಅದೇ ಸಮಯಕ್ಕೆ ಬಂದ್ ಮಾಡಿದರೆ ಜನ ಬೇಗ ಬರಬೇಕು. ಆದರೆ, ಹಿಂದಿನಷ್ಟು ವ್ಯಾಪಾರ ಬರಲಾರದು. ನಾವು ಪ್ರತಿದಿನ ಎರಡು ಸಾವಿರ ರೂ. ಲೈಸೆನ್ಸ್ ಮೊತ್ತ ಪಾವತಿಸಬೇಕು. ಕಾರ್ಮಿಕರ ಸಂಬಳ, ಲೈಟ್ ಬಿಲ್ ಸಹಿತ ಬಹಳಷ್ಟು ಖರ್ಚು ಇದೆ. ಮೊದಲೇ ನಷ್ಟದಲ್ಲಿರುವ ಉದ್ಯಮಕ್ಕೆ ಈ ಆದೇಶ ಗಾಯದ ಮೇಲೆ ಬರೆ ಎಳೆದಂತಾಗಿದೆ. ಗಣೇಶ್ ಶೆಟ್ಟಿ, ಅಧ್ಯಕ್ಷರು, ದಕ ವೈನ್ ಮರ್ಚೆಂಟ್ಸ್ ಅಸೋಸಿಯೇಶನ್
from India & World News in Kannada | VK Polls https://ift.tt/3iXJTm8