ಲಂಡನ್: ಮುಂಬರುವ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಹಣಾಹಣಿಯಲ್ಲಿ ಭಾರತ ಹಾಗೂ ತಂಡಗಳು ಮುಖಾಮುಖಿಯಾಗುವುದನ್ನು ನೋಡಲು ಬಯಸುತ್ತೇನೆಂದು ಕೋಲ್ಕತಾ ನೈಟ್ ರೈಡರ್ಸ್ ತಂಡದ ಮಾಜಿ ನಾಯಕ ಹೇಳಿದ್ದಾರೆ. ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಯುಎಇ ಹಾಗೂ ಒಮನ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಐಸಿಸಿ ಮಂಗಳವಾರ ಪ್ರಕಟಿಸಿತ್ತು. ಇದರ ಬೆನ್ನಲ್ಲೆ ದಿನೇಶ್ ಕಾರ್ತಿಕ್, ಇಸಾ ಗುಹಾ ಹಾಗೂ ಡೆರೆನ್ ಸಾಮಿ ಅವರು ಮಹತ್ವದ ಟೂರ್ನಿಯ ಬಗ್ಗೆ ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗೆಲ್ಲುವ ತಂಡದ ಬಗ್ಗೆ ದಿನೇಶ್ ಕಾರ್ತಿಗೆ ಪ್ರಶ್ನೆ ಕೇಳಲಾಯಿತು. ಇದಕ್ಕೆ ಉತ್ತರಿಸಿದ ದಿನೇಶ್ ಕಾರ್ತಿಕ್, ಯಾರು ಪ್ರಶಸ್ತಿ ಮುಡಿಗೇರಿಸಿಕೊಳ್ಳಬಹುದೆಂದು ನಾನು ಹೇಳಲು ಬಯಸುವುದಿಲ್ಲ. ಆದರೆ, ಫೈನಲ್ನಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ಮುಖಾಮುಖಿಯಾವುದನ್ನು ನೋಡಲು ಬಯಸುತ್ತೇನೆ ಎಂದಿದ್ದಾರೆ. "ಮುಂಬರುವ ಟಿ20 ವಿಶ್ವಕಪ್ ಯಾರು ಗೆಲ್ಲಲಿದ್ದಾರೆಂದು ನಾನು ಹೇಳಲು ಹೋಗುವುದಿಲ್ಲ. ಆದರೆ, ಭಾರತ ಹಾಗೂ ವೆಸ್ಟ್ ಇಂಡೀಸ್ ಫೈನಲ್ನಲ್ಲಿ ಮುಖಾಮುಖಿಯಾಗುವುದನ್ನು ನೋಡಲು ಇಷ್ಟಪಡುತ್ತೇನೆ. ಭಾರತ ತಂಡದ ಬಳಿಕ ನನ್ನ ನೆಚ್ಚಿನ ಎರಡನೇ ತಂಡ ವೆಸ್ಟ್ ಇಂಡೀಸ್. ಏಕೆಂದರೆ, ಚುಟುಕು ಮಾದರಿಯನ್ನು ಅವರು ತುಂಬಾ ಇಷ್ಟಪಡುತ್ತಾರೆ ಹಾಗೂ ಉತ್ತಮ ತಂಡವನ್ನು ಕಟ್ಟುತ್ತಾರೆ. ಈ ಕಾರಣದಿಂದ ವಿಂಡೀಸ್ ತಂಡವನ್ನು ಫೈನಲ್ನಲ್ಲಿ ನೋಡಲು ಬಯಸುತ್ತೇನೆ," ಎಂದರು. "ವೆಸ್ಟ್ ಇಂಡೀಸ್ ತಂಡವೇ ಫೈನಲ್ ಗೆಲ್ಲಬೇಕು. ಆದರೆ, ಫೈನಲ್ ದಿನ ಎದುರಾಳಿ ತಂಡ ಯಾವ ರೀತಿ ಇರಲಿದೆ ಎಂಬುದು ಎಲ್ಲವೂ ಅವಲಂಬಿಸಿರುತ್ತದೆ. ಈಗಿನ ಸನ್ನಿವೇಶದಲ್ಲಿ ನಾನು ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ನೋಡಲು ಬಯಸುತ್ತೇನೆ. ಈ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಎರಡೂ ನನ್ನ ನೆಚ್ಚಿನ ತಂಡಗಳಾಗಿವೆ," ಎಂದು ಕಾರ್ತಿಕ್ ತಿಳಿಸಿದರು. ಕ್ರಿಕೆಟ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಿದಾಗಲೆಲ್ಲಾ ಭಾರತೀಯ ತಂಡದ ಮೇಲೆ ಉಂಟಾಗುವ ಒತ್ತಡವನ್ನು ಕಾರ್ತಿಕ್ ಇದೇ ವೇಳೆ ವಿವರಿಸಿದರು. "ಒಂದು ನಿರ್ದಿಷ್ಟ ಅವಧಿಯಲ್ಲಿ ಸಾಕಷ್ಟು ಇತಿಹಾಸ ಮತ್ತು ಆಳವಿದೆ. ದ್ವಿಪಕ್ಷೀಯ ಸರಣಿ ಅಥವಾ ಐಸಿಸಿ ಟೂರ್ನಿಗಳಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾದಾಗ, ಆ ಪಂದ್ಯ ಅತಿ ಹೆಚ್ಚು ವೀಕ್ಷಣೆಯಾಗುತ್ತಿತ್ತು. ಅದರಲ್ಲೂ ವಿಶ್ವಕಪ್ ಟೂರ್ನಿಗಳಲ್ಲಿ ಭಾರತವೇ ಗೆಲುವು ಸಾಧಿಸುತ್ತಿತ್ತು. ಈ ದಾಖೆಲೆ ಉಳಿಸಿಕೊಳ್ಳುವುದನ್ನು ನಾವು ಇಷ್ಟಪಡುತ್ತೇವೆ," ಎಂದು ಹೇಳಿದರು. "ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನದ ವಿರುದ್ಧ ಆಡಿದಾಗಲೆಲ್ಲಾ ಭಾರತಕ್ಕೆ ಒತ್ತಡ ಇದ್ದೇ ಇರುತ್ತದೆ. ವಿಶ್ವಕಪ್ ಟೂರ್ನಿಗೂ ಮುನ್ನ ದಿ ಓವಲ್ನಲ್ಲಿ ನಾವು ಪಾಕಿಸ್ತಾನದ ವಿರುದ್ಧ ಅಭ್ಯಾಸ ಪಂದ್ಯ ಆಡಿದ್ದೆವು ಹಾಗೂ ಇದು ಸೋಲ್ಡ್ ಔಟ್ ಆಗಿತ್ತು. ನಮ್ಮ ನಡುವೆ ಇಷ್ಟರಮಟ್ಟಿಗೆ ಸ್ಪರ್ಧೆ ಇರುತ್ತದೆ," ಎಂದು ದಿನೇಶ್ ಕಾರ್ತಿಕ್ ತಿಳಿಸಿದರು. "ಪಾಕಿಸ್ತಾನ ತಂಡ ಟೂರ್ನಿಯಲ್ಲಿ ಇರಬೇಕೆಂದು ನಾನು ಬಯಸುತ್ತೇನೆ. ಆದರೆ, ಭಾರತ ಹಾಗೂ ಪಾಕಿಸ್ತಾನ ಇರುವ ಗುಂಪಿನಲ್ಲಿ ಅತ್ಯುತ್ತಮ ಆಲ್ರೌಂಡರ್ಗಳಿರುವ ನ್ಯೂಜಿಲೆಂಡ್ ತಂಡವಿದೆ. ಹಾಗಾಗಿ, ಈ ಗುಂಪಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಗೆದ್ದು ಸೆಮಿಫೈನಲ್ ತಲುಪಲಿದೆ ಎಂದು ನಾನು ಭಾವಿಸುವುದಿಲ್ಲ. ಅಂದಹಾಗೆ, ನ್ಯೂಜಿಲೆಂಡ್ ತಂಡವನ್ನು ಈ ಬಾರಿ ಭಾರತ ಸೋಲಿಸುವ ಅಗತ್ಯವಿದೆ. ಒಂದು ವೇಳೆ ಸೋಲಿಸಿದ್ದೇ ಆದಲ್ಲಿ ಭಾರತ ತಂಡದ ವಿಶ್ವಾಸ ಹೆಚ್ಚಾಗಲಿದೆ," ಎಂದು ಹಿರಿಯ ವಿಕೆಟ್ ಕೀಪರ್ ಅಭಿಪ್ರಾಯ ಪಟ್ಟರು.
from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3gciona