ಟೆಸ್ಟ್ ಕ್ರಿಕೆಟ್‌ನಲ್ಲಿ ಸಿರಾಜ್‌ಗೆ ಸರಿ ಸಮನಾದ ಬೌಲರ್‌ ಇಲ್ಲವೇ ಇಲ್ಲ ಎಂದ ಚೋಪ್ರಾ!

ಹೊಸದಿಲ್ಲಿ: ಇಂಗ್ಲೆಂಡ್‌ ವಿರುದ್ಧ ಐತಿಹಾಸಿಕ ಲಾರ್ಡ್ಸ್ ಟೆಸ್ಟ್‌ ಪಂದ್ಯದಲ್ಲಿ ಗಮನಾರ್ಹ ಬೌಲಿಂಗ್‌ ಪ್ರದರ್ಶನ ತೋರಿ ಭಾರತ ತಂಡದ 151 ರನ್‌ಗಳ ಭರ್ಜರಿ ಗೆಲುವಿಗೆ ನೆರವಾಗಿದ್ದ ವೇಗಿ ಅವರನ್ನು ಹಲವು ದಿಗ್ಗಜರು ಗುಣಗಾನ ಮಾಡಿದ್ದಾರೆ. ಇದೀಗ ಈ ಸಾಲಿಗೆ ಭಾರತದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ಆಕಾಶ್‌ ಚೋಪ್ರಾ ಸೇರ್ಪಡೆಯಾಗಿದ್ದಾರೆ. ಮೊಹಮ್ಮದ್‌ ಸಿರಾಜ್‌ ಆಡಿರುವ ಕೇವಲ 7 ಟೆಸ್ಟ್‌ ಪಂದ್ಯಗಳಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದಾರೆ. ಹೈದರಾಬಾದ್‌ ಮೂಲದ ಸಿರಾಜ್ ಈ ಪಂದ್ಯಗಳಲ್ಲಿ 26.29ರ ಸರಾಸರಿಯಲ್ಲಿ 27 ವಿಕೆಟ್‌ಗಳನ್ನು ಕಬಳಿಸಿ ಎಲ್ಲರ ಗಮನ ಸೆಳೆದಿದ್ದಾರೆ. ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಮಾಜಿ ಆಟಗಾರ ಆಕಾಶ್‌ ಚೋಪ್ರಾ, "ಕೆಂಪು ಚೆಂಡಿನ ಪಂದ್ಯದಲ್ಲಿ ಮೊಹಮ್ಮದ್‌ ಸಿರಾಜ್‌ಗೆ ಯಾರೂ ಹೋಲಿಕೆಯಾಗುವುದಿಲ್ಲ. ಇವರ ಬೌಲಿಂಗ್‌ನಲ್ಲಿ ಚೆಂಡು ಪಿಚ್‌ ಆಗಿ ಚಲಿಸುವ ಮೂಲಕ ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಪರಿಣಾಮಕಾರಿಯಾಗಿರುತ್ತದೆ. ಸಿರಾಜ್‌ ಅವರಂಥ ಬೌಲರ್‌ಗಳು ಟೆಸ್ಟ್‌ ಕ್ರಿಕೆಟ್‌ಗೆ ಮೌಲ್ಯವನ್ನು ತಂದುಕೊಡುತ್ತಾರೆ," ಎಂದು ಶ್ಲಾಘಿಸಿದರು. "ಗಾಳಿಯಲ್ಲಿ ಯಾರು ಚೆಂಡನ್ನು ಸ್ವಿಂಗ್‌ ಮಾಡುತ್ತಾರೆ, ಅವರು ಖಂಡಿತಾ ಓಡಿಐ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಯಶಸ್ವಿಯಾಗುತ್ತಾರೆ. ಆದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿ ಇಂತಹ ಎಸೆತಗಳನ್ನು ಬ್ಯಾಟ್ಸ್‌ಮನ್‌ಗಳು ಸುಲಭವಾಗಿ ನಿರ್ವಹಿಸುತ್ತಾರೆ. ಸೀಮ್‌ ಚಲನೆ ಈ ಮಾದರಿಯಲ್ಲಿ(ಟೆಸ್ಟ್) ತುಂಬಾ ಮುಖ್ಯವಾಗುತ್ತದೆ," ಎಂದರು. ಬ್ಯಾಟಿಂಗ್‌ ವಿಭಾಗದಲ್ಲಿ ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ಅವರ ರೀತಿ, ಬೌಲಿಂಗ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ತವರು ಅಂಗಳದ ರೀತಿ ಭಾವಿಸುತ್ತಾರೆ ಎಂದು ಮಾಜಿ ಕ್ರಿಕೆಟ್‌ ಅಭಿಪ್ರಾಯ ವ್ಯಕ್ತಪಡಿಸಿದರು. "ಚೇತೇಶ್ವರ್‌ ಪೂಜಾರ ಹಾಗೂ ಅಜಿಂಕ್ಯ ರಹಾನೆ ನೋಡಿದಾಗ, ಒಂದು ನಿರ್ದಿಷ್ಟ ಸಮಯದಲ್ಲಿ ಇವರಿಗೆ ಸೂಕ್ತ ಎಂದು ನೀವು ಭಾವಿಸುತ್ತೀರಿ. ಅದೇ ರೀತಿ ಮೊಹಮ್ಮದ್‌ ಸಿರಾಜ್‌ ಅವರನ್ನು ನೋಡಿದಾಗ, ಟೆಸ್ಟ್‌ ಕ್ರಿಕೆಟ್‌ ಇವರಿಗೆ ಹೇಳಿ ಮಾಡಿಸಿದ ಹಾಗೆ ಇದೆ ಎಂಬ ಆಲೋಚನೆ ಕೂಡ ಬರುತ್ತದೆ. ಆದರೆ, ಓಡಿಐ ಕ್ರಿಕೆಟ್‌ಗೆ ಇದು ಅನ್ವಯವಾಗುವುದಿಲ್ಲ," ಎಂದರು. ಅಂದಹಾಗೆ ಮೊಹಮ್ಮದ್‌ ಸಿರಾಜ್‌ ಭಾರತದ ಪರ ಆಡಿರುವ ಏಕೈಕ ಓಡಿಐ ಪಂದ್ಯ ಹಾಗೂ ಮೂರು ಟಿ20 ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ತೋರಿಲ್ಲ. ಅದರಂತೆ ಇಂಡಿಯನ್‌ ಪ್ರೀಮಿಯರ್ ಲೀಗ್‌ ಟೂರ್ನಿಯಲ್ಲಿಯೂ ಆರಂಭಿಕ ದಿನಗಳಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ಸಿರಾಜ್‌ ವಿಫಲರಾಗಿದ್ದರು. ಆದರೆ, ಕಳೆದ ಎರಡು ಆವೃತ್ತಿಗಳಿಂದ ಸಿರಾಜ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪರ ಕೀ ಬೌಲರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.


from Sports News in Kannada, Latest Kannada Sports News | ಕ್ರೀಡೆ-ಕ್ರಿಕೆಟ್ ಸುದ್ದಿ, - Vijaya Karnataka https://ift.tt/3kas82s

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...